ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿಹಿಂದುಳಿದ ಸಮುದಾಯದ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷ 2ನೇ ಬಾರಿಗೆ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಪೂರ್ಣ ಬಹುಮತದ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ಕೆಡವುದು ಅಷ್ಟು ಸುಲಭ ಅಲ್ಲ. ಗೋಕಾಕ ಶಾಸಕರೇ ಪದೇ ಪದೇ ಲೋಕಸಭಾ ಚುನಾವಣೆ ನಂತರ ಸರ್ಕಾರ ಬೀಳಿಸುವುದಾಗಿ ಹೇಳುತ್ತಿದ್ದೀರಿ. ಸರ್ಕಾರ ಕೆಡವಲು ನಿಮಗೇನು ನೈತಿಕತೆ ಇದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಶ್ನಿಸಿದರು.
ಗೋಕಾಕ ನಗರದ ವಾಲ್ಮೀಕಿ ಮೈದಾನದಲ್ಲಿ ಮಂಗಳವಾರ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರವನ್ನು ಕೆಡವಲು ಮುಂದಾದರೇ ಇಡೀ ಹಿಂದುಳಿದ ವರ್ಗಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಕಾಂಗ್ರೆಸ್ ಪಕ್ಷ ಎಂದರೇ ಬದ್ಧತೆ. ಎಲ್ಲ ಧರ್ಮ, ಜಾತಿ ಸಮುದಾಯದವರಿಗೆ ಮಣೆ ಹಾಕಿದೆ. ಭಾರತದ ಸಂಸ್ಕೃತಿ ಉಳಿಸುತ್ತಿದ್ದರೇ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ. ಎಲ್ಲ ವರ್ಗದವರಿಗೂ ಅಧಿಕಾರ ನೀಡುವ ಪಕ್ಷ ಎಂದು ತಿಳಿಸಿದರು.
ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್, ಬೆಳಗಾವಿ ಬಗ್ಗೆ ತಾತ್ಸರ ಮನೋಭಾವ ಹೊಂದಿರುವ ವ್ಯಕ್ತಿ. ಜಿಲ್ಲೆಯ ಜನರ ಕಷ್ಟ ಕಾಲದಲ್ಲಿ ಬರದ ಮೋದಿ ಚುನಾವಣೆ ವೇಳೆ ಮತ ಕೇಳಲು ಬರುತ್ತಾರೆ. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಮಾತಾನಾಡುವ ನೈತಿಕ ಹಕ್ಕಿದೆಯೇ ಎಂದು ಪ್ರಶ್ನಿಸಿದರು.ಕಾಂಗ್ರೆಸ್ ಅಭ್ಯರ್ಥಿ ಇಂಜಿನಿಯರಿಂಗ್ ಪದವಿಧರ, ಸುಸಂಸ್ಕೃತ ವ್ಯಕ್ತಿ. ನಾನು ನನ್ನ ಕ್ಷೇತ್ರ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಹಗಲಿರುಳು ದುಡಿಯುತ್ತಿರುವೆ. ನನಗೆ ನನ್ನ ಮಗ ಮೃಣಾಲ್ ಹೆಬ್ಬಾಳಕರ್ ಬೆಂಬಲವಾಗಿ ನಿಂತಿದ್ದಾನೆ. ನನ್ನ ಮಗ ಗೆದ್ದರೆ ಬೆಳಗಾವಿ ಕ್ಷೇತ್ರದ ಅಭಿವೃದ್ಧಿಗೆ ಧಾರೆ ಎರೆದುಕೊಡುವೆ. ತಾಯಿಯಾಗಿ ಮಗನ ಪರ ಸೆರಗೊಡ್ಡಿ ಮತಕೇಳುವೆ ಎಂದು ಕೋರಿದರು.
ಬಿಜೆಪಿಯವರು ಅಧಿಕಾರಕ್ಕೆ ಬಂದರೇ ಮೀಸಲಾತಿಗೆ ಕಂಟಕ. ಒಂದು ಅವಕಾಶವನ್ನು ಕಾಂಗ್ರೆಸ್ ಪಕ್ಷಕ್ಕೆ ಕೊಡಿ. ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹುಬ್ಬಳ್ಳಿ ಯಿಂದ ಬಂದಿದ್ದಾರೆ. ಹುಬ್ಬಳ್ಳಿ ಜನ ಅವರನ್ನು ತಿರಸ್ಕಾರ ಮಾಡಿದ್ದಾರೆ, ನಾವೇನು ಅವರನ್ನು ಪುರಸ್ಕರಿಸೋದು ಎಂದು ತಿಳಿಸಿದರು.ಶೆಟ್ಟರ್ ಸೋತರೂ ಕಾಂಗ್ರೆಸ್ ಅವರನ್ನು ಎಂಎಲ್ಸಿ ಮಾಡಿತ್ತು. ಆದರೂ ಶೆಟ್ಟರ್ ನಿಷ್ಠೆ ಬದಲಿಸಿದರು. ಮೊನ್ನೆ ಹುಬ್ಬಳ್ಳಿಯಲ್ಲಿ ಒಂದು ಘಟನೆ ನಡೀತು. ಸರ್ಕಾರ ತನಿಖೆಗೆ ಆದೇಶಿಸಿದರೂ ಬಿಜೆಪಿಗರು ರಾಜಕೀಯವಾಗಿ ಬಳಸಿಕೊಂಡರು. ಆದರೆ, ಪ್ರಜ್ವಲ್ ರೇವಣ್ಣ ವಿಷಯದಲ್ಲಿ ಏನೂ ಮಾಡ್ತಿಲ್ಲ ಏಕೆ? ಪ್ರಜ್ವಲ್ ವಿಷಯದಲ್ಲಿ ನಿಮ್ಮ ಬದ್ಧತೆ ಎಲ್ಲಿ ಹೋಯ್ತು. ನಾಗರೀಕ ಸಮಾಜ ತಲೆ ತಗ್ಗಿಸುವಂಥ ಕೆಲಸ ಮಾಡಿರುವ ಪ್ರಜ್ವಲ್ ಬಗ್ಗೆ ಮೈತ್ರಿ ನಾಯಕರು ತುಟಿ ಬಿಚ್ಚುತ್ತಿಲ್ಲ ಎಂದು ಕಿಡಿಕಾರಿದರು.
ನಮ್ಮ ಜಿಲ್ಲೆಗೆ ನಿಮ್ಮ ಕೊಡುಗೆ ಏನು ಶೆಟ್ಟರ್ ಅವ್ರೆ, ಐಐಟಿ, ಹೈಕೋರ್ಟ್ ಅನ್ನು ಹುಬ್ಬಳ್ಳಿಗೆ ಕೊಂಡೊಯ್ದರು. ಕೊರೋನಾ ವೇಳೆ ಆಕ್ಸಿಜನ್ ಸಿಲಿಂಡರ್ಗಳನ್ನು ಹುಬ್ಬಳ್ಳಿಗೆ ಸ್ಥಳಾಂತರಿಸಿದರು. ಕೇಂದ್ರ ಸಚಿವರೂ, ಶೆಟ್ಟರ್ ಅವರ ಬಿಗರೂ ಆದಂತಹ ಸುರೇಶ್ ಅಂಗಡಿ ಸತ್ತಾಗ ಅವರ ಪಾರ್ಥಿವ ಶರೀರವನ್ನು ಶೆಟ್ಟರ್ ಅವರು ದೆಹಲಿಯಿಂದ ಬೆಳಗಾವಿಗೆ ತರೋಕೆ ಆಗಲಿಲ್ಲ. ಹೇಗೆ ಬೆಳಗಾವಿ ಉದ್ದಾರ ಮಾಡ್ತೀರಾ? ಎಂದು ಪ್ರಶ್ನಿಸಿದರು.ಇಡೀ ದೇಶದ ಇತಿಹಾಸದಲ್ಲಿ ಕುರುಬ ಸಮುದಾಯದ ವ್ಯಕ್ತಿಯನ್ನು 2ನೇ ಬಾರಿಗೆ ಸಿಎಂ ಮಾಡಿದ್ದು ಕಾಂಗ್ರೆಸ್ ಪಕ್ಷ. ಆದರೆ, ಇದ್ದ ಒಬ್ಬ ಕುರುಬ ಸಮಾಜದ ನಾಯಕನನ್ನು ಬಿಜೆಪಿಯಿಂದ ಹೊರಹಾಕಲಾಗಿದೆ. ಹಿಂದುಳಿದ ವರ್ಗಕ್ಕೆ ಸಿದ್ದರಾಮಯ್ಯ ಕೊಡುಗೆ ಅಪಾರ. ದೇವರಾಜ ಅರಸು ಬಳಿಕ ಅತೀ ಹೆಚ್ಚು ಬಡವರ ಪರ ಕೆಲಸ ಮಾಡಿವರು ನಮ್ಮ ಸಿಎಂ ಸಿದ್ದರಾಮಯ್ಯನವರು.-ಲಕ್ಷ್ಮೀ ಹೆಬ್ಬಾಳಕರ್,
ಸಚಿವೆ.