ಸಾರಾಂಶ
ದಾವಣಗೆರೆ: ಖ್ಯಾತ ನಟ ಕಮಲ್ ಹಾಸನ್ ಸೇರಿದಂತೆ ಅನೇಕರು ಇನ್ನೂ ಅಪ್ಡೇಟ್ ಆಗಿಲ್ಲ. ತಮ್ಮ ಮಾತು ಯಾವಾಗ ಸತ್ಯವಲ್ಲವೆಂದು ಗೊತ್ತಾಗುತ್ತದೋ ತಕ್ಷಣ ಕ್ಷಮೆ ಕೇಳಬೇಕು. ಅದನ್ನು ಬಿಟ್ಟು ನಾನು ಕ್ಷಮೆ ಕೇಳಲ್ಲವೆಂದು ವಾದ ಮಾಡಬಾರದು ಎಂದು ನಟ ಅಹಿಂಸಾ ಚೇತನ್ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಮಲ್ ಹಾಸನ್ ಮಾತನ್ನು ಯಾವುದೇ ಕಾರಣಕ್ಕೂ ನಾನು ಸಮರ್ಥನೆ ಮಾಡಿಕೊಳ್ಳುವುದಿಲ್ಲ. ತಮ್ಮ ಮಾತಿಗೆ ಕ್ಷಮೆ ಕೇಳುವುದಿಲ್ಲವೆಂಬ ವಾದ ಕಮಲ್ ಹಾಸನ್ ಅವರಲ್ಲಿನ ಮೊಂಡುತನ ತೋರಿಸುತ್ತದೆ ಎಂದರು.ಪಂಚ ದ್ರಾವಿಡ ಭಾಷೆಗಳೆಲ್ಲವೂ ಸೋದರ, ಸಹೋದರಿ ಭಾಷೆಗಳಾಗಿವೆ. ಸಂಸದ ಯದುವೀರ್ ಅವರ ಹೇಳಿಕೆ ಸಹ ಕಮಲ ಹಾಸನ್ ರೀತಿಯೇ ಇದೆ. ಯದುವೀರ ಸಹ ಕನ್ನಡದ ಬಗ್ಗೆ ತಿಳಿದುಕೊಳ್ಳದೇ ಮಾತನಾಡುತ್ತಿದ್ದಾರೆ. ಸತ್ಯವನ್ನು ಅರಿತು, ಕಮಲ್ ಹಾಸನ್ ಕ್ಷಮೆ ಕೇಳಬೇಕು. ಕ್ಷಮೆ ಕೇಳುವುದಿಲ್ಲವೆಂದು ಉದ್ಧಟತನ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.
ಶಿವಣ್ಣ ಮೌನ ಸಲ್ಲ:ಇದು ತಮಿಳು-ಕನ್ನಡ ಭಾಷೆಗಳ ನಡುವಿನ ಘರ್ಷಣೆಯಲ್ಲ. ಇದು ಸತ್ಯ ಹಾಗೂ ಸುಳ್ಳಿನ ನಡುವಿನ ಸಂಘರ್ಷವಾಗಿದೆ. ಹಿರಿಯ ನಟ ಡಾ.ರಾಜಕುಮಾರ ಕನ್ನಡ ನಾಡು, ಭಾಷೆಗಾಗಿ ಗೋಕಾಕ ಚಳವಳಿಯಲ್ಲಿ ಭಾಗವಹಿಸಿ, ಹೋರಾಟ ನಡೆಸಿದರು. ಪುತ್ರ, ನಟ ಶಿವರಾಜಕುಮಾರ್ ಸಹ ಅದೇ ರೀತಿ ಹೋರಾಟವನ್ನು ಮುಂದುವರಿಸಬೇಕಿತ್ತು. ಆದರೆ, ಸ್ನೇಹ, ಸಿನಿಮಾ ಅಂತೆಲ್ಲಾ ಹೇಳಿಕೊಂಡು ಶಿವರಾಜಕುಮಾರ್ ಸಹ ಸುಮ್ಮನಾಗಿರುವುದು ಸರಿಯಲ್ಲ ಎಂದರು.
ಸುಳ್ಳುಗಳನ್ನು ಸಮರ್ಥಿಸಿಕೊಳ್ಳುವುದೂ ಸರಿಯಲ್ಲ. ವಿರೋಧವನ್ನು ಮಾಡುವುದನ್ನೇ ಬಿಟ್ಟು, ಸುಮ್ಮನಿರುವುದನ್ನು ನೋಡಿದರೆ ಕನ್ನಡ ಭಾಷೆ, ನೆಲಕ್ಕಿಂತಲೂ ಸಿನಿಮಾ ಕೆರಿಯರ್ ಮುಖ್ಯ ಎನ್ನುವಂತಾಗುತ್ತದೆ. ಸತ್ಯವನ್ನು ಮುಚ್ಚಿ ಹಾಕುವ ಕೆಲಸ ನಡೆಯುತ್ತಿದೆಯೇನೋ ಎನಿಸುತ್ತಿದೆ ಎಂದು ಚೇತನ್ ಹೇಳಿದರು.ಗೃಹ ಇಲಾಖೆ ಸಂಪೂರ್ಣ ವಿಫಲ ದೇಶದಲ್ಲಿ ವಾಕ್ ಸ್ವಾತಂತ್ರ್ಯ ಇರುವುದರಿಂದಲೇ ಸಂವಿಧಾನ ಗಟ್ಟಿಯಾಗಿದೆ. ವಾಕ್ ಸ್ವಾತಂತ್ರ್ಯ ಇದೆಯೆಂಬ ಕಾರಣಕ್ಕೆ ಒಂದು ಸಮುದಾಯವನ್ನು ಹೀನಾಯ ಮಾಡುವುದು ಸರಿಯಲ್ಲ. ಮಂಗಳೂರಿನಲ್ಲಿ ಮನೋವಾದ ಹಾಗೂ ಹಿಂದುತ್ವದ ವಿಚಾರವಾಗಿ ಘರ್ಷಣೆಯಾಗುತ್ತಿದೆ. ಇದರಿಂದ ರಾಜ್ಯ ಸರ್ಕಾರ ಕಾನೂನು, ಸುವ್ಯವಸ್ಥೆ ನಿಯಂತ್ರಿಸುವಲ್ಲೂ ವಿಫಲವಾಗಿದೆ ಎಂದು ಚೇತನ್ ದೂರಿದರು.
ರಾಜ್ಯ ಗೃಹ ಇಲಾಖೆ ಎಷ್ಟೋ ವಿಚಾರಗಳಲ್ಲಿ ವಿಫಲವಾಗುತ್ತಿದೆ. ಬಿಡದಿಯಲ್ಲಿ ಹಕ್ಕಿಪಿಕ್ಕಿ ಜನಾಂಗದ ಬಾಲಕಿ ಸಾವನ್ನಪ್ಪಿದ್ದಕ್ಕೆ ₹4 ಲಕ್ಷ ಕೊಟ್ಟಿದ್ದರು. ಈಗ ಮೃತ ಬಾಲಕಿಯ ಕುಟುಂಬಕ್ಕೆ ನೀಡಿದ್ದ ಅಷ್ಟೂ ಹಣವನ್ನು ವಾಪಸ್ ಪಡೆಯಲು ಮುಂದಾಗಿದ್ದಾರೆ. ಅತ್ಯಾಚಾರ ಮತ್ತು ಕೊಲೆ ಅಲ್ಲವೆಂಬ ಕಾರಣಕ್ಕೆ ಹಣ ವಾಪಸ್ ಪಡೆಯುವ ಪ್ರಯತ್ನ ನಡೆಸಿದ್ದಾರೆ. ಮೃತಪಟ್ಟ ಬಾಲಕಿಯಂತೂ ವಾಪಸ್ ಬರೋದಿಲ್ಲ. ಹಣ ಏಕೆ ವಾಪಸ್ ಪಡೆಯುತ್ತಾರೆ ಹೇಳಿ ಎಂದು ಪ್ರಶ್ನಿಸಿದರು.43 ಕೇಸ್ ರದ್ದುಪಡಿಸಲು ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚೇತನ್, ಹುಬ್ಬಳ್ಳಿ ಗಲಭೆ ಪ್ರಕರಣ ಸೇರಿದಂತೆ ಹಲವಾರು ಪ್ರಭಾವಿಗಳ ಮೇಲೆ ಇದ್ದಂತಹ 43 ಕ್ರಿಮಿನಲ್ ಪ್ರಕರಣಗಳನ್ನು ಸರ್ಕಾರ ಹಿಂಪಡೆದ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ನೆಲದ ಕಾನೂನು ವ್ಯವಸ್ಥೆ ಮೇಲೆ ತುಂಬಾ ನಂಬಿಕೆ ಇದೆ. ನ್ಯಾಯಾಲಯ ಸೂಕ್ತ ಕ್ರಮ ಕೈಗೊಳ್ಳುತ್ತದೆಂಬ ಸಂಪೂರ್ಣ ವಿಶ್ವಾಸ ತಮಗಿದೆ ಎಂದರು.
ಕನ್ನಡ, ದಲಿತರಿಗೆ ಕಾಂಗ್ರೆಸ್ ಸರ್ಕಾರ ದ್ರೋಹಕನ್ನಡಪ್ರಭ ವಾರ್ತೆ ದಾವಣಗೆರೆ ಕನ್ನಡದ ಪರವಾಗಿ ರಾಜ್ಯ ಸರ್ಕಾರ ಒಂದೇ ಒಂದು ಯೋಜನೆ ಸಹ ತಂದಿಲ್ಲ. ಕನ್ನಡಕ್ಕೆ ದ್ರೋಹ ಮಾಡಿದ್ದೇ ಕಾಂಗ್ರೆಸ್ ಸರ್ಕಾರ ಎಂದು ನಟ ಅಹಿಂಸಾ ಚೇತನ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಯೆಂಬ ಕಾನೂನನ್ನು ಬೆಳಗ್ಗೆ ತಂದು, ಸಂಜೆಗೆ ವಾಪಸ್ ಪಡೆಯುತ್ತಾರೆಂದರೆ ಸರ್ಕಾರದ ವೈಫಲ್ಯ ಎಷ್ಟಿದೆಯೆಂಬುದು ಅರ್ಥವಾಗುತ್ತದೆ ಎಂದರು.ಪರಿಶಿಷ್ಟ ಜಾತಿ- ಪಂಗಡಗಳಿಗೆ ಮೀಸಲಿಟ್ಟಿದ್ದ ಅನುದಾನವನ್ನು ಹಿಂದಿನ ಬಿಜೆಪಿ ಸರ್ಕಾರ, ಇಂದಿನ ಕಾಂಗ್ರೆಸ್ ಸರ್ಕಾರ ದುರುಪಯೋಗಪಡಿಸಿಕೊಂಡಿವೆ. ಎರಡೂ ಸರ್ಕಾರಗಳು ಹಣವನ್ನ ದುರ್ಬಳಕೆ ಮಾಡಿಕೊಂಡಿವೆ. ಅದರಲ್ಲೂ ಬಿಜೆಪಿಗಿಂತಲೂ ಕಾಂಗ್ರೆಸ್ ಸರ್ಕಾರವೇ ಹೆಚ್ಚು ಹಣ ದುರುಪಯೋಗ ಮಾಡಿದೆ. ಕಮಲ್ ಹಾಸನ್ ರೀತಿಯಲ್ಲೇ ಸಿಎಂ ಮೊಂಡುತನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಪರಿಶಿಷ್ಟರಿಗೆ ಮೀಸಲಿಟ್ಟ ಹಣವನ್ನು ಬೇರೆ ಯೋಜನೆಗಳಿಗೆ ಬಳಕೆ ಮಾಡಬಹುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಐತಿಹಾಸಿಕವಾಗಿ ಅನ್ಯಾಯವಾದ ದಲಿತರ ಅಭಿವೃದ್ಧಿಗೆ, ನ್ಯಾಯಕ್ಕಾಗಿ ಮೀಸಲಿಟ್ಟ ಹಣ ಕಾಂಗ್ರೆಸ್ ಸರ್ಕಾರ 2 ವರ್ಷ ಮೀಸಲಿಟ್ಟ ಹಣ ದುರ್ಬಳಕೆ ಮಾಡಿಕೊಂಡಿದೆ. ಈ ಸಲ ಮೂರನೇ ವರ್ಷದಲ್ಲೂ ಪರಿಶಿಷ್ಟರಿಗೆ ಸೇರಬೇಕಾದ ಹಣ ದುರ್ಬಳಕೆ ಮಾಡಿಕೊಳ್ಳದೆ, ಇನ್ನೂ ಹೆಚ್ಚಿನ ಹಣ ಮೀಸಲಿಡಬೇಕು ಎಂದ ಸರ್ಕಾರಕ್ಕೆ ತಾಕೀತು ಮಾಡಿದರು.ಹಿರಿಯ ವಕೀಲರಾದ ಬಿ.ಎಂ. ಹನುಮಂತಪ್ಪ, ನಿವೃತ್ತ ಪೊಲೀಸ್ ಉಪಾಧೀಕ್ಷಕ ರವಿನಾರಾಯಣ ಇತರರು ಇದ್ದರು.
ಸಮಸಮಾಜ ಹೇಗೆ ನಿರ್ಮಾಣ ಮಾಡಬೇಕೆಂಬ ನಿಟ್ಟಿನಲ್ಲಿ ರಾಜ್ಯವ್ಯಾಪಿ ಪ್ರವಾಸ ಮಾಡಿ, ವಿವಿಧ ಸಮುದಾಯ, ಸಂಘಟನೆಗಳು, ವಿವಿಧ ಕ್ಷೇತ್ರದವರು, ಪ್ರಗತಿಪರರ ಸಭೆಗಳನ್ನು ಮಾಡುತ್ತಿದ್ದೇವೆ. ಇದೀಗ 108ನೇ ಕ್ಷೇತ್ರದ ಸಭೆಗೆಂದು ದಾವಣಗೆರೆಗೆ ಬಂದು, ಇಲ್ಲಿನ ಪ್ರಗತಿಪರರ ಜೊತೆ ಸಭೆ ನಡೆಸುತ್ತಿದ್ದೇನೆ.- ಚೇತನ್, ನಟ