ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರೆ ಯಾವುದೇ ಸ್ಪಂದನೆ ಮಾಡಲ್ಲ. ಈಗ ಬಜೆಟ್ ಕುರಿತು ಸಾರ್ವಜನಿಕರ ಸಲಹೆಗಳು ಯಾಕೆ ಕೇಳುತ್ತೀರಿ ಎಂದು ಪಾಲಿಕೆ ಅಧಿಕಾರಿಗಳ ಕಾರ್ಯವೈಖರಿಯನ್ನು ಸಾರ್ವಜನಿಕರು ಪ್ರಶ್ನಿಸಿದರು.ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್ ಅಧ್ಯಕ್ಷತೆಯಲ್ಲಿ ಬಜೆಟ್ ಪೂರ್ವಭಾವಿ ಸಭೆ ನಡೆಯಿತು. ಸಭೆ ಆರಂಭದಲ್ಲಿ ಅಧಿಕಾರಿಗಳ ವಿರುದ್ಧ ಮುಗಿಬಿದ್ದ ಸಾರ್ವಜನಿಕರು ದೂರಿನ ಸುರಿಮಳೆ ಸುರಿಸಿದರು. ಇದರಿಂದ ಬಜೆಟ್ ಪೂರ್ವಭಾವಿ ಸಭೆ ಕುಂದುಕೊರತೆ ಸಭೆಯಾಗಿ ಮಾರ್ಪಾಟಿತು.
ನಾಗರಿಕ ಹಿತಾರಕ್ಷಣಾ ಸಮಿತಿಯ ಸಂಘಟನ ಕಾರ್ಯದರ್ಶಿ ಡಾ. ಸತೀಶ್ಕುಮಾರ್ ಶೆಟ್ಟಿ ಮಾತನಾಡಿ, ಕಳೆದ 10-15 ವರ್ಷಗಳಿಂದ ಈ ಸಭೆಯಲ್ಲಿ ಸಾರ್ವಜನಿಕರು ನಗರದ ಸಮಸ್ಯೆಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡುತ್ತಲೇ ಬಂದಿದ್ದಾರೆ. ಆದರೆ, ಯಾವ ಸಮಸ್ಯೆಯು ಬಗೆಹರಿಯದೆ ಹಾಗೆಯೇ ಉಳಿದುಕೊಂಡಿದೆ ಎಂದರು.ಪ್ರಮುಖವಾಗಿ ನಗರದ ಹಸಿರೀಕರಣ, ಸ್ವಚ್ಛತೆ, ಹೈಜನಿಕ್ ವ್ಯವಸ್ಥೆ, ಪ್ರತ್ಯೇಕ ಮೀನು ಮಾರುಕಟ್ಟೆ , ಪಾಲಿಕೆಯಿಂದ ಸ್ಮಶಾನ ಅಭಿವೃದ್ಧಿ ಮೊದಲಾದವುಗಳಿಗೆ ಆದ್ಯತೆ ಮೇರೆಗೆ ಅನುದಾನ ನೀಡಿ, ಅವುಗಳನ್ನು ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಲಾಗಿತ್ತು. ಆದರೆ, ಯಾವ ಯಾವ ಕಾಮಗಾರಿಗಳಿಗೆ ಎಷ್ಟು ಹಣ ಬಿಡುಗಡೆಯಾಗಿದೆ, ಎಷ್ಟು ಹಣ ವೆಚ್ಚ ಮಾಡಲಾಗಿದೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ನೀಡದೇ, ಇಂದಿನ ಸಭೆಯನ್ನು ಕರೆದಿರುವುದು ಸಮಂಜಸವಲ್ಲ ಎಂದು ಹರಿಹಾಯ್ದರು.ಇದೇ ಸಂದರ್ಭದಲ್ಲಿ ನಗರದ ಅಭಿವೃದ್ಧಿಗೆ ಪೂರಕವಾದ ಕಾಮಗಾರಿ ಪಟ್ಟಿಯನ್ನು ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು ಪಾಲಿಕೆ ಆಯುಕ್ತರಿಗೆ ಪುನಃ ಸಲ್ಲಿಸಿದರು.ಇತ್ತೀಚೆಗೆ ನಗರದಲ್ಲಿ ಕಲುಷಿತ ಕುಡಿಯುವ ನೀರು ಸರಬರಾಜು ಮಾಡುವ ಮೂಲಕ ಜನರ ಅನಾರೋಗ್ಯಕ್ಕೆ ಕಾರಣವಾದ ಪಾಲಿಕೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮತ್ತು ನೀರು ಶುದ್ಧೀಕರಣಕ್ಕೆ ತಂತ್ರಜ್ಞಾನ ಅವಳವಡಿಸಿಕೊಳ್ಳಲು ಅನುದಾನ ಮೀಸಲಿಡಬೇಕು. ಕನ್ಸರ್ ವೆನ್ಸಿಗಳಲ್ಲಿ, ರಾಜಕಾಲುವೆಗಳಲ್ಲಿ ಕಾನೂನುಬಾಹಿರ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದ್ದು, ಪಾಲಿಕೆ ಕಣ್ಮುಚ್ಚಿಕುಳಿತಿದೆ ಎಂದು ನಾಗರಿಕ ಹಿತರಕ್ಷಣೆ ಸಮಿತಿ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.ನಾಗರಿಕ ಹಿತರಕ್ಷಣಾ ಸಮಿತಿಯ ಕಾರ್ಯದರ್ಶಿ ಎಸ್.ಬಿ. ಅಶೋಕ್ ಕುಮಾರ್ ಮಾತನಾಡಿ, ಕನ್ಸರ್ವೆನ್ಸಿಗಳಲ್ಲಿ ಅನೇಕ ಕಡೆ ಅನಧಿಕೃತ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಕೆಲವೆಡೆ ಮೂತ್ರ ವಿಸರ್ಜನೆ ಇತ್ಯಾದಿಗಳಿಂದಾಗಿ ಓಡಾಡಲು ಆಗುತ್ತಿಲ್ಲ. ನಗರದಲ್ಲಿ 6 ವಾಣಿಜ್ಯ ಸಂಕೀರ್ಣಗಳು ಇದ್ದು, ಬಹುತೇಕ ಖಾಲಿ ಬಿದ್ದಿವೆ. ನಗರ ಮಧ್ಯದಲ್ಲಿ ಇರುವ ದೇವರಾಜ್ ಅರಸ್ ವಾಣಿಜ್ಯ ಸಂಕೀರ್ಣ ಸಂಪೂರ್ಣ ಪಾಳು ಬಿದ್ದಿದ್ದು, ಅದರ ಸದ್ಭಳಕೆ ಪಾಲಿಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಕನ್ನಡ ಸಾಹಿತ್ಯ ಚಟುವಟಿಕೆಗಳಿಗೆ ಅನುದಾನ ಮೀಸಲುಡುವುದು, ಕ್ರೀಡಾಕೂಟ. ಕ್ರೀಡಾಪಟುಗಳಿಗೆ ಪ್ರೋತ್ಸಾಹಕವಾಗಿ ಅನುದಾನ ನೀಡುವ ಬೇಡಿಕೆಗಳು, ಟ್ರಾಫಿಕ್ ವ್ಯವಸ್ಥೆ ನಿರ್ವಹಣೆ, ರಸ್ತೆ ಗುಂಡಿ ಮುಚ್ಚುವುದು, ಗ್ರಂಥಾಲಯ ಸ್ಥಾಪನೆ, ವಾಕಿಂಗ್ ಪಾಥ್ ನಿರ್ಮಾಣ, ಪಾರ್ಕ್ ಅಭಿವೃದ್ದಿ ಸೇರಿದಂತೆ ಸಾರ್ವಜನಿಕ ಸಮಸ್ಯೆಗಳ ಪಟ್ಟಿಯೇ ಆಯುಕ್ತರ ಮುಂದೆ ಮಂಡಿಸಲ್ಪಟ್ಟಿದ್ದು, ಅಧಿಕಾರಿಗಳು ಹೊಣೆಗಾರಿಕೆಯಿಂದ ಕೆಲಸ ಮಾಡುತ್ತಿಲ್ಲ ಎಂಬ ಆರೋಪಗಳು ನಾಗರೀಕ ಸಂಘಟನೆಗಳ ಮುಖಂಡರಿಂದ ಕೇಳಿ ಬಂದವು.ಪತ್ರಕರ್ತ ಎನ್. ರವಿಕುಮಾರ್ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ 143 ಅಂಗನವಾಡಿಗಳು, 245 ಸರ್ಕಾರಿ ಹೈಯರ್ ಪ್ರೈಮರಿ ಶಾಲೆಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಬೇಕು, ಅಭಿವೃದ್ಧಿ ಎಂದರೆ ಕೇವಲ ಚರಂಡಿ, ರಸ್ತೆಗೆ ಮಾತ್ರಲ್ಲದೇ ಮಾನವ ಸಂಪನ್ಮೂಲ, ಬೌದ್ಧಿಕ ವಿಕಸನಕ್ಕೆಪೂರಕವಾದ ವಾತಾವರಣವನ್ನು ನಿರ್ಮಿಸುವುದೂ ಆಗಿರುತ್ತದೆ. ಈ ನಿಟ್ಟಿನಲ್ಲಿ ಅಂಗನವಾಡಿ ಮತ್ತು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಮಾಣದ ಅನುದಾನ ಬಜೆಟ್ ನಲ್ಲಿ ಮೀಸಲಿಡಬೇಕು ಎಂದು ಹಿರಿಯ ಪತ್ರಕರ್ತ ಎನ್. ರವಿಕುಮಾರ್ ಸಲಹೆ ನೀಡಿದರು.ಪತ್ರಕರ್ತರ ಕಲ್ಯಾಣ ನಿಧಿಗೆ ಇದುವರೆಗೂ ಮೀಸಲಿಡುತ್ತಿದ್ದ ₹20 ಲಕ್ಷವನ್ನು ₹1 ಕೋಟಿಗೆ ಹೆಚ್ಚಿಸಬೇಕು. ಪತ್ರಕರ್ತರ ಅರೋಗ್ಯವಿಮೆ ಅನುಷ್ಠಾನಕ್ಕೆ ಬಜೆಟ್ನಲ್ಲಿ ಹಣ ಮೀಸಲಿರಿಸಬೇಕು ಎಂದು ಪತ್ರಕರ್ತ ವಿ.ಟಿ. ಅರುಣ್ ಮನವಿ ಮಾಡಿದರು.ಬೀದಿ ಬದಿ ವ್ಯಾಪಾರಿ ಸಂಘದ ಚನ್ನವೀರ ಗಾಮನಗಟ್ಟಿ, ಶಿವಪ್ಪ ನಾಯಕ ಬಡಾವಣೆ ನಿವಾಸಿಗಳ ಸಂಘದ ಟಿ. ಕುಮಾರ್, ಪ್ರಿಯದರ್ಶಿನಿ ಬಡಾವಣೆ, ವಿನೋಬನಗರ, ವೀರಣ್ಣ ಲೇಔಟ್ ಸಂಘದ ಪ್ರತಿನಿಧಿಗಳು ಆರ್.ಎಂ.ಎಲ್. ನಗರದ ನಿವಾಸಿಗಳು, ಅಲಾರಿಂ ಬಡಾವಣೆ ನಿವಾಸಿಗಳ ಸಂಘ, ರವೀಂದ್ರನಗರ ಪ್ರೇರಣಾ ಮಹಿಳಾ ಸಂಘ, ಇನ್ನಿತರ ಬಡಾವಣೆ ನಿವಾಸಿಗಳು ತಮ್ಮ ಸಮಸ್ಯೆಗಳನ್ನು ಈ ಸಂದರ್ಭದಲ್ಲಿ ಹೇಳಿಕೊಂಡರು. ಅದೇ ರೀತಿ ನಗರದಲ್ಲಿ 53 ಕೊಳೆಚೆ ಪ್ರದೇಶಗಳಿದ್ದು, ಅವುಗಳಲ್ಲಿನ ಬಹುತೇಕ ಕೊಳಚೆ ಪ್ರದೇಶಗಳು ಕಾನೂನು ಪ್ರಕರಣ ಅಧಿಕೃತ ಘೋಷಣೆಯಾಗಬೇಕಿದೆ. ಅಂತಹ ಸ್ಲಂಗಳನ್ನು ಅಧಿಕೃತ ಘೋಷಣೆ ಮಾಡಿ, ಅವುಗಳ ಅಭಿವೃದ್ಧಿ ಪರಿಶಿಷ್ಟ ಜಾತಿ , ವರ್ಗಗಳ ವಿಶೇಷ ಅನುದಾನದಡಿ ಅಭಿವೃದ್ಧಿ ಪಡಿಸಲು ಅನುದಾನದಲ್ಲಿ ಹೆಚ್ಚಿನ ಪ್ರಮಾಣದ ಹಣವನ್ನು ಮೀಸಲಿರಿಸಬೇಕೆಂದು ಒತ್ತಾಯಿಸಿದರು. ಇದಕ್ಕೆ ಆಯುಕ್ತರು ಸಮ್ಮತಿಸಿದರು.ಸಭೆಯಲ್ಲಿ ಉಪ ಆಯುಕ್ತರಾದ ನಿಂಗೇಗೌಡರು, ತುಷಾರ್, ಬಿ. ಹೊಸೂರು, ಲೆಕ್ಕಾಧಿಕಾರಿ ಡಕಣನಾಯ್ಕ ಉಪಸ್ಥಿತರಿದ್ದರು.