ಸಾರಾಂಶ
ಜಮೀನಿನ ಕೆಲಸಕ್ಕೆ ಹೋಗಿದ್ದು ಬುಧವಾರ ಬೆಳಗ್ಗೆ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾಗ ಒಂಟಿ ಆನೆ ದಾಳಿ ನಡೆಸಿ, ಕಾಲಿನಿಂದ ತುಳಿದು ಸೊಂಡಿಲಿನಿಂದ ಎತ್ತಿ ಬಿಸಾಡಿದೆ.
ಕನಕಪುರ: ಜಮೀನಿನಲ್ಲಿ ರೈತ ಉಳುಮೆ ಕೆಲಸ ಮಾಡುವಾಗ ಕಾಡಾನೆ ದಾಳಿ ನಡೆಸಿ ತುಳಿದು ಗಾಯಗೊಳಿಸಿರುವ ಘಟನೆ ಎನ್.ಗೊಲ್ಲಳ್ಳಿ ಗ್ರಾಮದಲ್ಲಿ ನಡೆದಿದೆ.
ಮಳಗಾಳು ಗ್ರಾಮದ ಬಸವಯ್ಯ (46) ಆನೆ ದಾಳಿಯಲ್ಲಿ ಗಾಯಗೊಂಡವರಾಗಿದ್ದಾರೆ, ಇವರು ಎನ್. ಗೊಲ್ಲಹಳ್ಳಿ ಗ್ರಾಮಕ್ಕೆ ಜಮೀನಿನ ಕೆಲಸಕ್ಕೆ ಹೋಗಿದ್ದು ಬುಧವಾರ ಬೆಳಗ್ಗೆ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾಗ ಒಂಟಿ ಆನೆ ದಾಳಿ ನಡೆಸಿ, ಕಾಲಿನಿಂದ ತುಳಿದು ಸೊಂಡಿಲಿನಿಂದ ಎತ್ತಿ ಬಿಸಾಡಿದೆ.ದಾಳಿ ವೇಳೆ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಗಿರೀಶ್ ಎಂಬುವರು ಜೋರಾಗಿ ಕಿರಿಚಿಕೊಂಡು ಅಕ್ಕಪಕ್ಕದ ರೈತರನ್ನು ಸೇರಿಸಿ ಶಬ್ದ ಮಾಡಿದ್ದರಿಂದ ಆನೆಯು ಅಲ್ಲಿಂದ ಓಡಿಹೋಗಿದ್ದು, ತಕ್ಷಣವೇ ಅವರು ಆನೆ ಓಡಿ ಸುವ ಕಂಟ್ರೋಲ್ ರೂಮ್ಗೆ ಕರೆ ಮಾಡಿ ಆನೆ ದಾಳಿ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಅರಣ್ಯ ಸಿಬ್ಬಂದಿ ಗಾಯಾಳು ಬಸವಯ್ಯ ಅವರನ್ನು ಕನಕಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಅಲ್ಲದೆ ಅವರ ಆಸ್ಪತ್ರೆಯ ಸಂಪೂರ್ಣ ವೆಚ್ಚವನ್ನು ಭರಿಸಿ ಅವರ ಆರೋಗ್ಯ ಸುಧಾರಿಸುವವರೆಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸುವುದಾಗಿ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.