ಮೂಡಿಗೆರೆನಿಮ್ಮ ಮಕ್ಕಳು, ಮೊಮ್ಮಕ್ಕಳು ಮುಂದಿನ ದಿನಗಳಲ್ಲಿ ಹಿಂದೂಗಳಾಗಿ ಮುಂದುವರಿಯಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದನ್ನು ತಡೆಯಲು ಹಿಂದೂ ಸಿದ್ಧಾಂತವನ್ನು ಬೆಂಬಲಿಸುವ ಮೂಲಕ ಸಂಘಟಿತರಾಗಬೇಕು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕರೆ ನೀಡಿದರು.
ಕನ್ನಡ ವಾರ್ತೆ, ಮೂಡಿಗೆರೆ,
ನಿಮ್ಮ ಮಕ್ಕಳು, ಮೊಮ್ಮಕ್ಕಳು ಮುಂದಿನ ದಿನಗಳಲ್ಲಿ ಹಿಂದೂಗಳಾಗಿ ಮುಂದುವರಿಯಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದನ್ನು ತಡೆಯಲು ಹಿಂದೂ ಸಿದ್ಧಾಂತವನ್ನು ಬೆಂಬಲಿಸುವ ಮೂಲಕ ಸಂಘಟಿತರಾಗಬೇಕು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕರೆ ನೀಡಿದರು.ಪಟ್ಟಣದ ಲ್ಯಾಪ್ಸ್ ಸಭಾಂಗಣದಲ್ಲಿ ನಡೆದ ಗುರುವಂದನೆ ಹಾಗೂ ಜಿಲ್ಲಾ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಕಾರ್ಯ ಕ್ರಮ ದಲ್ಲಿ ಮಾತನಾಡಿ ಕಳೆದ 60 ವರ್ಷಗಳಲ್ಲಿ ಹಿಂದೂ ವಿರೋಧಿ ಚಟುವಟಿಕೆ, ಭಯೋತ್ಪಾದನೆ, ಲವ್ ಜಿಹಾದ್, ಜನಸಂಖ್ಯಾ ಸ್ಫೋಟ, ಭ್ರಷ್ಟಾಚಾರ ಹಾಗೂ ದೇಶದ ಸಂಪತ್ತಿನ ಲೂಟಿ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿವೆ ಎಂದು ಆರೋಪಿಸಿದರು.
ಇದರೊಂದಿಗೆ ‘ಹಿಂದೂ ಭಯೋತ್ಪಾದನೆ’ ಎಂಬ ಪರಿಕಲ್ಪನೆ ಸೃಷ್ಟಿಸುವ ಪ್ರಯತ್ನವೂ ನಡೆದಿತ್ತು ಎಂದು ಹೇಳಿದರು. 2014ರ ನಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದಲ್ಲಿ ಬದಲಾವಣೆ ಗಾಳಿ ಬೀಸಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾಶಿ ಕಾರಿಡಾರ್, ಆಂತರಿಕ ಭದ್ರತೆ, ಜಮ್ಮು-ಕಾಶ್ಮೀರದ 370ನೇ ವಿಧಿ ರದ್ದು ಹಾಗೂ ಆತ್ಮನಿರ್ಭರ ಭಾರತದಂತಹ ಕ್ರಮಗಳಿಂದ ದೇಶದ ಗೌರವ ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟರು.1990ರ ದಶಕದಲ್ಲಿ ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯ ಸ್ಮರಿಸಿ ಅಂದು ಹಿಂದೂಗಳು ಎಚ್ಚೆತ್ತು ಕೊಂಡಿದ್ದರೆ ಇಂತಹ ಪರಿಸ್ಥಿತಿ ದೇಶದ ಇತರ ಭಾಗಗಳಲ್ಲಿ ನಿರ್ಮಾಣವಾಗುತ್ತಿರಲಿಲ್ಲ ಎಂದರು. ದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿಗೆ ತರಲು ಒತ್ತಾಯಿಸಬೇಕಿದೆ. ಹಿಂದೂ ಸಂಘಟನೆಗಳಲ್ಲಿ ಯಾವುದೇ ರೀತಿ ಒಡಕು ಇರಬಾರದು. ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.ಮಲೆನಾಡಿನ ಕಾಫಿ ತೋಟಗಳಲ್ಲಿ ಬಾಂಗ್ಲಾದೇಶ ಮೂಲದ ವಲಸಿಗರು ಹೆಚ್ಚಾಗಿದ್ದು, ಸ್ಥಳೀಯರ ಮೇಲೆ ಹಲ್ಲೆ ಮಾಡುವ ಮಟ್ಟಕ್ಕೆ ಪರಿಸ್ಥಿತಿ ತಲುಪಿದೆ ಎಂದರು. ಬೆಳೆಗಾರರು ಎಚ್ಚೆತ್ತುಕೊಳ್ಳಬೇಕು. ಯಾವುದೇ ಪರಿಸ್ಥಿತಿ ಎದುರಾದರೂ ಶ್ರೀರಾಮ ಸೇನೆ ನಿಮ್ಮೊಂದಿಗೆ ಇರಲಿದೆ ಎಂದು ಭರವಸೆ ನೀಡಿದರು.ಶ್ರೀರಾಮ ಸೇನೆ ಪ್ರಾಂತ ಸಂಚಾಲಕ ಸುಂದರೇಶ್ ನರ್ಗಲ್ ಮಾತನಾಡಿ ರಾಜಕೀಯವೇ ಬೇರೆ, ಹಿಂದುತ್ವವೇ ಬೇರೆ. ಹಿಂದುತ್ವವನ್ನು ಮರೆತ ಕಾರಣದಿಂದಲೇ ಜಿಲ್ಲೆಯಲ್ಲಿ ಐದು ಸ್ಥಾನ ಕಳೆದುಕೊಂಡು ರಾಜ್ಯದಲ್ಲೂ ಅಧಿಕಾರ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಯಿತು ಎಂದು ಹೇಳಿದರು.ಹಿಂದೂಗಳ ಮೇಲೆ ದೌರ್ಜನ್ಯ ಮಿತಿ ಮೀರುತ್ತಿದೆ ಎಂದು ಆರೋಪಿಸಿದ ಅವರು ಬಾಂಗ್ಲಾದೇಶದಿಂದ ಬಂದವರಿಗೆ ರಕ್ಷಣೆ ನೀಡಿ, ಸ್ಥಳೀಯ ಹಿಂದೂಗಳ ಮೇಲೆಯೇ ಪ್ರಕರಣ ದಾಖಲಿಸುವ ಪೊಲೀಸರ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸುದೀರ್ ಕಡಿದಾಳು, ವಿಭಾಗೀಯ ಸಂಚಾಲಕ ಸುನೀಲ್ ಕೂವೆ ಸೇರಿದಂತೆ ನೂತನ ಜಿಲ್ಲಾ ಪದಾಧಿಕಾರಿಗಳು ಪ್ರಮಾಣವಚನ ಸ್ವೀಕರಿಸಿದರು.ಕಾರ್ತಿಕ್ ಪಟ್ಟದೂರು, ಪ್ರೀತಮ್ ಮಳಲೂರು, ಲಿಖಿತ್, ಪೃಥ್ವಿರಾಜ್, ಕೃಷ್ಣದೇವ್ ಭಟ್, ಕೌಶಿಕ್, ಶ್ಯಾಮ್, ಅರುಣ್ ಕುಂಬರಡಿ, ಸಂದೇಶ್ ಗುತ್ತಿ, ಪ್ರಶಾಂತ್ ಶೆಟ್ಟಿ, ತಿಲಕ್ ಸತಿಗನಹಳ್ಳಿ, ಜೀವನ್ ಕಡಿದಾಳು, ಅರುಣ್ ಕೊಟ್ರಕೆರೆ, ಸಂದೇಶ್ ಹೊರಟ್ಟಿ, ಹರ್ಷ ಮಡ್ಡಿಕೆರೆ, ಸಾಗರ್ ಮೂಡಿಗೆರೆ ಹಾಗೂ ಪುನೀತ್ ಕಡಿದಾಳು ಸೇರಿದಂತೆ ಹಲವರು ನೂತನ ಜಿಲ್ಲಾ ಪದಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದರು.