ಒಳ ಮೀಸಲಾತಿ ಜಾರಿಗೆ ಅಧಿವೇಶನದಲ್ಲಿ ಧ್ವನಿ ಎತ್ತುವೆ: ಶಾಸಕ ರವಿಕುಮಾರ್

| Published : Aug 18 2025, 12:00 AM IST

ಒಳ ಮೀಸಲಾತಿ ಜಾರಿಗೆ ಅಧಿವೇಶನದಲ್ಲಿ ಧ್ವನಿ ಎತ್ತುವೆ: ಶಾಸಕ ರವಿಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಸುಪ್ರೀಂಕೋರ್ಟ್ ಆದೇಶ ಬಂದ ನಂತರ ತೆಲಂಗಾಣ ಸರ್ಕಾರ ಒಳಮೀಸಲಾತಿ ಬಗ್ಗೆ ಸಂಪುಟದಲ್ಲಿ ಚರ್ಚಿಸಿ ಜಾರಿ ಮಾಡಿದೆ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವುದೇ ಸ್ಪಷ್ಟ ತೀರ್ಮಾನಕ್ಕೆ ಬರುತ್ತಿಲ್ಲ. ದುರುದ್ದೇಶದಿಂದ ನಾನಾ ಕಾರಣಗಳನ್ನು ಮುಂದಿಟ್ಟು ಸುಪ್ರೀಂ ಕೋರ್ಟ್ ಆದೇಶಕ್ಕೆ ಅವಮಾನ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ಪರಿಶಿಷ್ಟ ಜಾತಿಗಳಿಗೆ ಸಾಮಾಜಿಕವಾಗಿ ನ್ಯಾಯ ಬದ್ಧವಾಗಿ ಒಳಮೀಸಲಾತಿ ಜಾರಿ ಮಾಡಬೇಕಾಗಿರುವುದು ರಾಜ್ಯ ಸರ್ಕಾರ. ವಿರೋಧ ಪಕ್ಷದ ಶಾಸಕನಾಗಿ ಸದನದಲ್ಲಿ ಈ ಬಗ್ಗೆ ಪ್ರಸ್ತಾಪಿಸುತ್ತೇನೆ ಎಂದು ಶಾಸಕ ಬಿ.ಎನ್. ರವಿಕುಮಾರ್ ಕರ್ನಾಟಕ ಮಾದಿಗ ದಂಡೋರ ನಿಯೋಗಕ್ಕೆ ಭರವಸೆ ನೀಡಿದರು.

ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗದ ವರದಿ ಜಾರಿಗೆ ಸದನದಲ್ಲಿ ಒತ್ತಾಯಿಸುವಂತೆ ಕರ್ನಾಟಕ ಮಾದಿಗ ದಂಡೋರ ತಾಲೂಕು ಅಧ್ಯಕ್ಷ ಗುರುಮೂರ್ತಿ ನೇತೃತ್ವದಲ್ಲಿ ಮನವಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಶಾಸಕರು ಮಾತನಾಡಿದರು.

ಇದಕ್ಕೂ ಮುನ್ನ ಸಮುದಾಯದ ಮುಖಂಡರಾದ ವರದನಾಯಕಹಳ್ಳಿ ಈಧರೆ ಪ್ರಕಾಶ್, ದೇವರ ಮುಳ್ಳೂರು ಕೃಷ್ಣಪ್ಪ, ಚಲಪತಿ, ದಲಿತ ಮುಖಂಡ ಯಾ.ಮಾ.ನಾರಾಯಣಸ್ವಾಮಿ ಮಾತನಾಡಿ, ಕಳೆದ ಮೂವತ್ತೈದು ವರ್ಷಗಳಿಂದ ಅಸ್ಪೃಶ್ಯ ಸಮಾಜದ ಮೀಸಲಾತಿ ಸೌಲಭ್ಯವನ್ನು ಬಲಾಢ್ಯರು ಕಬಳಿಸುತ್ತಾ ಬಂದಿದ್ದಾರೆ. ದಲಿತ ಚಳವಳಿ ಸೇರಿ ಮಾದಿಗ ದಂಡೋರ ಹಾಗೂ ಇತರೆ ಜನಪರ ಸಂಘಟನೆಗಳು ಜಾತಿ ಜನಸಂಖ್ಯೆಗೆ ಅನುಗುಣವಾಗಿ ಸಂವಿಧಾನದತ್ತ ಮೀಸಲಾತಿ ಸೌಲಭ್ಯವನ್ನು ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿ ನಿರಂತರವಾಗಿ ಹೋರಾಟಗಳನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದರು.

ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಸುಪ್ರೀಂಕೋರ್ಟ್ ಆದೇಶ ಬಂದ ನಂತರ ತೆಲಂಗಾಣ ಸರ್ಕಾರ ಒಳಮೀಸಲಾತಿ ಬಗ್ಗೆ ಸಂಪುಟದಲ್ಲಿ ಚರ್ಚಿಸಿ ಜಾರಿ ಮಾಡಿದೆ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವುದೇ ಸ್ಪಷ್ಟ ತೀರ್ಮಾನಕ್ಕೆ ಬರುತ್ತಿಲ್ಲ. ದುರುದ್ದೇಶದಿಂದ ನಾನಾ ಕಾರಣಗಳನ್ನು ಮುಂದಿಟ್ಟು ಸುಪ್ರೀಂ ಕೋರ್ಟ್ ಆದೇಶಕ್ಕೆ ಅವಮಾನ ಮಾಡುತ್ತಿದ್ದಾರೆ. ನ್ಯಾಯಮೂರ್ತಿ ಸದಾಶಿವ ಆಯೋಗ ವರದಿ ಮೂಲೆಗುಂಪು ಮಾಡಿದ್ದಾರೆ. ಅವರೇ ನೇಮಿಸಿರುವ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗದ ವರದಿಯನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ಅನುಷ್ಟಾನಕ್ಕೆ ತರದೇ ಮಾದಿಗ ಸಮುದಾಯಕ್ಕೆ ದ್ರೋಹ ಮಾಡುತ್ತಿದ್ದಾರೆ ಎಂದು ಮುಖಂಡರು ನೋವು ತೋಡಿಕೊಂಡರು.

ಮಾದಿಗ ಸಮುದಾಯದ ಮುಖಂಡರುಗಳಾದ ಚಿಕ್ಕ ಮುನಿಯಪ್ಪ, ರಾಮಚಂದ್ರಪ್ಪ, ಲಕ್ಷ್ಮಣ್ ರಾಜ್, ಎಸ್ ಎಂ ರಮೇಶ್, ಕೆ ನರಸಿಂಹಮೂರ್ತಿ, ಕೃಷ್ಣಮೂರ್ತಿ, ನರಸಿಂಹ, ನಾರಾಯಣಸ್ವಾಮಿ,ಅಶೋಕ್, ಸಂದೀಪ್, ಶಶಿಕಲಾ, ಮುನಿಕೃಷ್ಣ ಮುಂತಾದವರು ಉಪಸ್ಥಿತರಿದ್ದರು.