ಸಾರಾಂಶ
10 ವರ್ಷಗಳಲ್ಲಿ ಭರವಸೆ ಈಡೇರಿಸಿದ್ದೇವೆ । ಚುನಾವಣೆ ಗೆಲ್ಲುವುದೇ ಉದ್ದೇಶ
ಕನ್ನಡಪ್ರಭ ವಾರ್ತೆ, ಕೊಪ್ಪ೨೦೧೪ರಲ್ಲಿ ಬಿಜೆಪಿ ನೀಡಿದ್ದ ಭರವಸೆಗಳನ್ನು ಆಡಳಿತದಲ್ಲಿದ್ದ 10 ವರ್ಷಗಳಲ್ಲಿ ಈಡೇರಿಸಿದ್ದೇವೆ. ನಾವು ಮಾಡಿರುವ ಕೆಲಸ ಹಾಗೂ ನೀಡಿರುವ ಭರವಸೆಗಳನ್ನು ಈಡೇರಿಸಿದ ಆಧಾರದ ಮೇಲೆ ಈ ಬಾರಿ ಮತ್ತೆ ಗೆಲುವು ಕಾಣುತ್ತೇವೆ ಎಂಬ ವಿಶ್ವಾಸವನ್ನು ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ವ್ಯಕ್ತ ಪಡಿಸಿದರು.ಸಂಮೃದ್ಧಿ, ಶಕ್ತಿಶಾಲಿ, ಸಮರ್ಥವಾದ ಭಾರತವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನೋಡಲು ಸಾಧ್ಯವಾಗಿದೆ. ಕಾಶ್ಮೀರದಲ್ಲಿ ೩೭೦ ಕಾಯ್ದೆಯನ್ನು ರದ್ದು ಪಡಿಸಲಾಗಿದೆ, ರಾಮ ಮಂದಿರ ನಿರ್ಮಾಣ, ಸೌರಶಕ್ತಿ ಮೂಲಕ ವಿದ್ಯುತ್, ಜಲ ಜೀವನ ಯೋಜನೆ ಮೂಲಕ ಪ್ರತಿ ಮನೆಗೆ ನೀರು, ಸ್ಪಚ್ಛ ಭಾರತ್ ಯೋಜನೆ ಮೂಲಕ ೧೦ಕೋಟಿ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.
ಲೋಕಸಭಾ ಕ್ಷೇತ್ರದ ೧೯೦೦ ಮತಗಟ್ಟೆಗಳಲ್ಲಿ ಕಾರ್ಯಕರ್ತರು ಉತ್ಸಹದಿಂದ ಕೆಲಸ ಮಾಡುತ್ತಾರೆ. ಚುನಾವಣೆ ಘೋಷಣೆಯಾದ ನಂತರದಿಂದ ಕಾರ್ಯಕರ್ತರಲ್ಲಿ ಉತ್ಸಹ ಬಂದಿದೆ. ಈ ಬಾರಿ ಬಹು ದೊಡ್ಡ ಅಂತರದಿಂದ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಗೆಲ್ಲುತ್ತೇವೆ ಎಂದರು.ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಕ್ಷೇಂದ್ರ ಸರ್ಕಾರದಿಂದ ಹಳದಿ ಎಲೆ ರೋಗಕ್ಕೆ ಔಷಧಿ ಕಂಡು ಕೊಳ್ಳುವ ಸಲುವಾಗಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಕಸ್ತೂರಿ ರಂಗನ್ ವರದಿಯಿಂದ ಮಲೆನಾಡು ಹಾಗೂ ಕರಾವಳಿ ಜನತೆಗೆ ಸಮಸ್ಯೆಯಾಗದಂತೆ ಸರ್ಕಾರ ಎಚ್ಚರವಹಿಸಿತ್ತು. ಮುಂದೆ ಪರಿಹಾರ ದೊರಕಿಸುವ ಕೆಲಸ ಮಾಡಲಾಗುತ್ತದೆ ಎಂದರು.
ಕೈ ಅಭ್ಯರ್ಥಿ ಗೊತ್ತಿಲ್ಲ:ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ನಮಗೆ ಗೊತ್ತಿಲ್ಲ. ನಾವು ಚುನಾವಣೆಯಲ್ಲಿ ಗೆಲ್ಲುವುದು ಅಷ್ಟೇ ಉದ್ದೇಶವಾಗಿದೆ. ನಾವು ಕಾಂಗ್ರೆಸ್ ಅಭ್ಯರ್ಥಿಗಳ ವಿಚಾರ ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಡಿ.ಎನ್ ಜೀವರಾಜ್, ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಮಂಡಲ ಅಧ್ಯಕ್ಷ ದಿನೇಶ್ ಹೊಸೂರು, ಎಸ್.ಎನ್ ರಾಮಸ್ವಾಮಿ, ಸತೀಶ್ ಅದ್ದಡ, ಶೃಂಗೇರಿ ಶಿವಣ್ಣ ಮುಂತಾದವರಿದ್ದರು.