ಸಾರಾಂಶ
ಶೃಂಗೇರಿ: ತಾಲೂಕಿನಾದ್ಯಂತ ಗಾಳಿ ಮಳೆಯ ಆರ್ಭಟ ಮುಂದುವರೆದಿದ್ದು ಮಂಗಳವಾರವೂ ಗಾಳಿ ಸಹಿತ ಭಾರಿ ಮಳೆ ಸುರಿಯಿತು.
ಗಾಳಿ ಮಳೆಯ ಆರ್ಭಟಕ್ಕೆ ಮಂಗಳೂರು ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 169ರ ಉಳುವೆ ಸಮೀಪ ಮರವೊಂದು ರಸ್ತೆ ಮೇಲೆ ಉರುಳಿ ಬಿದ್ದು, ವಿದ್ಯುತ್ ಕಂಬ ತುಂಡಾಗಿ, ತಂತಿಗಳು ತುಂಡಾಗಿ ಬಿದ್ದ ಪರಿಣಾಮ ಕೆಲ ಹೊತ್ತು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ವಿದ್ಯುತ್ ಇಲ್ಲದಿದ್ದ ಕಾರಣ ಭಾರಿ ಅನಾಹುತ ತಪ್ಪಿತು.ಗಾಳಿಯ ಆರ್ಭಟ ಜೋರಾಗಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಮರಗಳು ರಸ್ತೆ, ವಿದ್ಯುತ್ ಲೈನ್ ಮೇಲೆ ಬೀಳುತ್ತಿದ್ದು ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿದೆ.ತುಂಗಾನದಿಯಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.ಮಳೆ ಸುರಿಯುತ್ತಿದ್ದರೂ ಶೃಂಗೇರಿ ಬರುತ್ತಿರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದೆ.ಗುಡ್ಡಕುಸಿತ, ಭೂಕುಸಿತ ಅಲ್ಲಲ್ಲಿ ಉಂಟಾಗುತ್ತಿದೆ.
ತರೀಕೆರೆಯಲ್ಲಿ ಮುಂದುವರಿದ ಮಳೆತರೀಕೆರೆ: ಭಾನುವಾರದಿಂದ ಪ್ರಾರಂಭವಾಗಿರುವ ಮಳೆ ಪಟ್ಟಣದಲ್ಲಿ ಸೋಮವಾರ ಹಾಗೂ ಮಂಗಳವಾರ ಕೂಡ ಮುಂದುವರಿದಿದೆ.ಮಂಗಳವಾರ ಬೆಳಗಿನಿಂದಲೇ ದಟ್ಟ ಮೋಡ ಕವಿದಿದ್ದು ತುಂತುರು ಮಳೆ ಬರುತ್ತಿತ್ತು, ಸಾಯಂಕಾಲ 5 ಗಂಟೆಯ ವೇಳೆಗೆ 20 ನಿಮಿಷ ಮಳೆ ಸುರಿಯಿತು. ಮಳೆಯಿಂದಾಗಿ ರಸ್ತೆ ಚರಂಡಿಗಳಲ್ಲಿ ನೀರು ತುಂಬಿ ಹರಿಯಿತು, ಸಮೀಪದ ಕೆಮ್ಮಣಗುಂಡಿ ಗಿರಿಧಾಮ ಪ್ರದೇಶದಲ್ಲೂ ಸೋಮವಾರ ದಿನವಿಡೀ ಮಳೆ ಸುರಿದಿದೆ ಎಂದು ತಿಳಿದು ಬಂದಿದೆ.ಜಿಲ್ಲೆಯಲ್ಲಿ ಮುಂದುವರಿದ ಮಳೆ: ಅಂಗನವಾಡಿಗೆ ರಜೆಚಿಕ್ಕಮಗಳೂರು: ಜಿಲ್ಲೆಯಲ್ಲಿ ವರುಣ ಅಬ್ಬರ ಮುಂದುವರೆದಿದೆ. ಮಂಗಳವಾರವೂ ಕೂಡ ಮಲೆನಾಡು ಸೇರಿದಂತೆ ಬಯಲುಸೀಮೆ ತಾಲೂಕುಗಳಲ್ಲೂ ಮಳೆಯಾಗಿದೆ. ಆದರೆ, ಕಳೆದ 24 ಗಂಟೆಗೆ ಹೋಲಿಕೆ ಮಾಡಿದರೆ ಪ್ರಮಾಣ ಸ್ವಲ್ಪ ಮಟ್ಟಿಗೆ ಇಳಿಮುಖವಾಗಿತ್ತು.ಕಳೆದ 24 ಗಂಟೆಗಳ ಜಿಲ್ಲೆಯ ಸರಾಸರಿ ವಾಡಿಕೆ ಮಳೆ 2.7 ಮಿ.ಮೀ. ಆದರೆ, ಇದೇ ಅವಧಿಯಲ್ಲಿ ಬಿದ್ದಿರುವ ಮಳೆ 27.0 ಮಿ.ಮೀ. ಅಂದರೆ ವಾಡಿಕೆಗಿಂತಲೂ ಹೆಚ್ಚು ಮಳೆ ಒಂದೇ ದಿನದಲ್ಲಿ ಬಂದಿದೆ. ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ ಹಾಗೂ ಎನ್.ಆರ್.ಪುರ ತಾಲೂಕುಗಳಲ್ಲಿ ನಿರಂತರವಾಗಿ ಮಳೆ ಬರುತ್ತಿರುವುದರಿಂದ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಈ ಆರು ತಾಲೂಕುಗಳಲ್ಲಿನ ಅಂಗನವಾಡಿಗೆ ರಜೆ ಘೋಷಣೆ ಮಾಡಲಾಗಿದೆ.ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿ ಬೆಳಿಗ್ಗೆ ಮಳೆ ಎಂದಿನಂತೆ ಇತ್ತು. ಆದರೆ, ಬೆಳಿಗ್ಗೆ 11 ಗಂಟೆಯ ನಂತರ ಆಗಾಗ ಬಿಡುವು ಕೊಟ್ಟು ಮುಂದುವರೆದಿತ್ತು. ಸಂಜೆ 5 ಗಂಟೆಯ ನಂತರ ಮಳೆ ಎಂದಿನಂತೆ ಮುಂದುವರೆದಿತ್ತು. ಆದರೆ, ತರೀಕೆರೆ, ಕಡೂರು ಹಾಗೂ ಅಜ್ಜಂಪುರದಲ್ಲೂ ಮಳೆ ಇಳಿಮುಖವಾಗಿತ್ತು.
ಕೊಪ್ಪದಲ್ಲಿ ಮಳೆಕೊಪ್ಪ: ಪಟ್ಟಣ ಸೇರಿದಂತೆ ತಾಲೂಕಿನ ಹರಿಹರಪುರ, ಜಯಪುರ, ಬಸ್ರಿಕಟ್ಟೆ, ಕುದುರೆಗುಂಡಿ, ಸಿದ್ಧರಮಠ, ಕಮ್ಮರಡಿ ಮುಂತಾದೆಡೆ ಮಂಗಳವಾರ ಬೆಳಿಗ್ಗೆಯಿಂದಲೇ ಉತ್ತಮ ಮಳೆ ಸುರಿಯಿತು. ಬಿಂತ್ರವಳ್ಳಿ ಗ್ರಾಪಂನ ಜೋಗಿಸರದ ಕೇಶವ ಎನ್ನುವವರ ಮನೆಯ ತಡೆಗೋಡೆ ಕುಸಿದಿದೆ. ಹರಿಹರಪುರ ಹೋಬಳಿಯ ಹೆಗ್ಗಾರು ಗ್ರಾಮದ ಬೆಳ್ಳಾಲೆಯ ಪ್ರವೀಣ್ ನಾಯ್ಕ್ರವರ ಜಮೀನಿನಲ್ಲಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿರುವ ತಡೆಗೋಡೆ ಬಾರೀ ಮಳೆಯಿಂದಾಗಿ ಹಾಳಾಗಿದೆ. ಕಳೆದ ೨೪ ಗಂಟೆಗಳಲ್ಲಿ ಕೊಪ್ಪ ೪೭ ಮಿ.ಮೀ., ಹರಿಹರಪುರ ೫೦ ಮಿ.ಮೀ., ಜಯಪುರ ೪೮.೬ ಮಿ.ಮೀ., ಕಮ್ಮರಡಿ ೪೧.೨ಮಿ.ಮೀ., ಬಸ್ರಿಕಟ್ಟೆ ೭೪.೮ ಮಿ.ಮೀ. ಮಳೆ ಪ್ರಮಾಣ ದಾಖಲಾಗಿದೆ.