ಸಾರಾಂಶ
ದೇಶದೆಲ್ಲೆಡೆ ಬಿಜೆಪಿಯ ದುರಾಡಳಿತದಿಂದಾಗಿ ಜನರು ಬೇಸತ್ತು ಹೋಗಿದ್ದಾರೆ. ಮತ್ತೆ ಕಾಂಗ್ರೆಸ್ ಆಡಳಿತದ ದಿನಗಳನ್ನು ಬಯಸುತ್ತಿದ್ದಾರೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಅತ್ಯಂತ ಶಿಸ್ತುಬದ್ಧಾಗಿ ಕಾರ್ಯ ನಿರ್ವಹಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸಿ.
ಹುಬ್ಬಳ್ಳಿ:
ದೇಶದಲ್ಲಿಂದು ಬದಲಾವಣೆಯ ಗಾಳಿ ಬೀಸಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಮನೆ-ಮನೆಗೆ ತಲುಪಿಸಿದರೆ ಸಾಕು, ಗೆಲುವು ನಿಶ್ಚಿತ ಎಂದು ಶಾಸಕ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಹೇಳಿದರು.ಅವರು ಗುರುವಾರ ಇಲ್ಲಿನ ಪಿ.ಬಿ. ರಸ್ತೆಯ ಬೀಡ್ನಾಳ್ ಕ್ರಾಸ್ನಲ್ಲಿರುವ ಕಚ್ಚಿ ಗಾರ್ಡನ್ನಲ್ಲಿ ಹಮ್ಮಿಕೊಳ್ಳಲಾಗಿದ್ದ ಪೂರ್ವ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ನಾಯಕರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.ದೇಶದೆಲ್ಲೆಡೆ ಬಿಜೆಪಿಯ ದುರಾಡಳಿತದಿಂದಾಗಿ ಜನರು ಬೇಸತ್ತು ಹೋಗಿದ್ದಾರೆ. ಮತ್ತೆ ಕಾಂಗ್ರೆಸ್ ಆಡಳಿತದ ದಿನಗಳನ್ನು ಬಯಸುತ್ತಿದ್ದಾರೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಅತ್ಯಂತ ಶಿಸ್ತುಬದ್ಧಾಗಿ ಕಾರ್ಯ ನಿರ್ವಹಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸುವಂತೆ ಮನವಿ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಮಾತನಾಡಿ, ಬಿಜೆಪಿ ಒಡೆದು ಆಳುವ ನೀತಿ ಅನುಸರಿಸಿ ನಮ್ಮ ನಮ್ಮಲ್ಲೆ ಗೊಂದಲ ಸೃಷ್ಟಿಸುತ್ತಿದೆ. ಇಂತಹ ಕೋಮುವಾದಿ ಪಕ್ಷದ ಆಡಳಿತವನ್ನು ಜನರು ತಿರಸ್ಕಾರ ಮಾಡುತ್ತಿದ್ದು, ಬಿಜೆಪಿ ಕಿತ್ತೆಸೆಯಲು ತಾವೆಲ್ಲ ನನಗೆ ಆಶೀರ್ವದಿಸುವಂತೆ ಮನವಿ ಮಾಡಿದರು.ಮಾಜಿ ಸಚಿವ, ಹುಬ್ಬಳ್ಳಿ ಅಂಜುಮನ್ ಸಂಸ್ಥೆ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸದಾನಂದ ಡಂಗನವರ, ಹುಡಾ ಮಾಜಿ ಅಧ್ಯಕ್ಷ ಅನ್ವರ್ ಮುಧೋಳ, ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಗ್ರಾಮೀಣ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ, ಮೊಹಮ್ಮದ ಯೂಸೂಫ್ ಸವಣೂರ, ಅಲ್ತಾಫ್ ಕಿತ್ತೂರು, ಸತೀಶ ಮೆಹರವಾಡೆ, ಪಾರಸಮಲ್ ಜೈನ್, ಶಫಿ ಮುದ್ದೇಬಿಹಾಳ ಸೇರಿದಂತೆ ಹಲವರಿದ್ದರು.