ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ಮಾನವನ ದೇಹದ ಪ್ರಮುಖ ಅಂಗ ಕಣ್ಣಿನ ಆರೋಗ್ಯ ಸರಿ ಇಲ್ಲದಿದ್ದರೆ ಮನುಷ್ಯನ ಜೀವನವೇ ಅಂಧಕಾರ ಆಗಲಿದೆ ಎಂದು ಆರೋಗ್ಯ ಅಧಿಕಾರಿ ಡಾ.ಜೀವಾನಂದ ಕುಮಾರ್ ಎಚ್ಚರಿಸಿದರು.ಗೊಲ್ಲರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹಲಗೂರಿನ ಅನಿಕೇತನ ಲಯನ್ಸ್ ಕ್ಲಬ್, ದಳವಾಯಿ ಕೋಡಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಐ ದೃಷ್ಟಿ ಕಣ್ಣಿನ ಆಸ್ಪತ್ರೆ ಚನ್ನಪಟ್ಟಣ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಉಚಿತ ಕಣ್ಣಿನ ತಪಾಸಣೆ ಮತ್ತು ಔಷಧ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೆಲವು ಸಾಂಕ್ರಾಮಿಕ ರೋಗಗಳ ಗುಣಲಕ್ಷಣಗಳನ್ನು ಆಧರಿಸಿ ಪ್ರಾಥಮಿಕ ಹಂತದಲ್ಲೇ ತಿಳಿದು ಒಬ್ಬರಿಂದ ಒಬ್ಬರಿಗೆ ಹರಡದಂತೆ ತಡೆಗಟ್ಟಬಹುದು. ಆದರೆ, ಬಿಪಿ, ಮಧುಮೇಹ ಸಾಂಕ್ರಾಮಿಕ ರೋಗಗಳಲ್ಲ. ಪ್ರಾಥಮಿಕ ಹಂತದಲ್ಲಿ ಕಂಡು ಹಿಡಿಯದಿದ್ದರೆ ಮರಣಾಂತಿಕವಾಗಿ ಆಗುವ ಸಂಭವವಿದೆ ಎಂದು ಎಚ್ಚರಿಸಿದರು.ಕಣ್ಣಿನ ಉಚಿತ ಪರೀಕ್ಷೆ ಜೊತೆ ಬಿಪಿ, ಶುಗರ್ ಪರೀಕ್ಷೆಯನ್ನು ಮಾಡಲಾಗುತ್ತಿದೆ. ಮಾನವನ ದೇಹದಲ್ಲಿ ಕಣ್ಣು ಪ್ರಮುಖವಾದದ್ದು. ಅದರ ಆರೋಗ್ಯ ಸರಿ ಇಲ್ಲದಿದ್ದರೆ ಮನುಷ್ಯನ ಜೀವನವೇ ಅಂಧಕಾರ. ದೃಷ್ಟಿ ದೋಷ, ಸಮೀಪ ದೃಷ್ಟಿ ದೋಷ, ಕಣ್ಣು ಸಂಪೂರ್ಣ ಕಾಣದೆ ಇರುವುದನ್ನು ಪರೀಕ್ಷಿಸಲಾಗುತ್ತಿದೆ. ಇದರ ಪ್ರಯೋಜನ ಪಡೆಯಬೇಕು ಎಂದರು.
ಶಿಬಿರ ಆಯೋಜಕ ರಾಜೇಶ್ ಮಾತನಾಡಿ, ಗ್ರಾಮೀಣ ಪ್ರದೇಶದ ಜನರು ಪಟ್ಟಣ ಪ್ರದೇಶಗಳಿಗೆ ಹೋಗಿ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಹೆಚ್ಚು ಹಣ ವೆಚ್ಚ ಮಾಡುವುದು ಮತ್ತು ಸಾಲದ ಸುಳಿಗೆ ಸಿಕ್ಕಿಕೊಳ್ಳುವುದು ಸರಿ ಇಲ್ಲ. ಗ್ರಾಮೀಣ ಪ್ರದೇಶದಲ್ಲಿ ಇಂತಹ ಉಚಿತ ಶಿಬಿರಗಳ ಸೇವೆ ಪಡೆಯುವಂತೆ ಸಲಹೆ ಮಾಡಿದರು.ವೈದಾಧಿಕಾರಿ ಡಾ.ಅನಿಲ್ ಮಾತನಾಡಿ, ಮನುಷ್ಯನ ಬೇರೆ ಅಂಗಗಳಿಗಿಂತ ಕಣ್ಣು ವಿಭಿನ್ನವಾದದು. ಇದು ಯಾವಾಗಲೂ ಕೆಲಸ ಮಾಡುತ್ತಿರುತ್ತದೆ. ವಯಸ್ಸಾದಂತೆ ದೃಷ್ಟಿ ಕುಂದುತ್ತದೆ. ಪೂರ್ಣವಾಗಿ ದೃಷ್ಟಿ ಹೋಗುವವರೆಗೆ ತಡೆಯದೆ ಮೊದಲೇ ಪರೀಕ್ಷಿಸಿ ಚಿಕಿತ್ಸೆ ಪಡೆಯಬೇಕು ಎಂದರು.
ಈ ವೇಳೆ ಅನಿಕೇತನ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಎಂ.ಭಾಸ್ಕರ್, ವೀರಣ್ಣಗೌಡ, ಮೂರ್ತಿ, ಸುರೇಶ್ ,ರಾಜೇಶ್, ಶ್ರೀಧರ, ಹರೀಶ್, ಮೋದಿ ರವಿ, ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.ಶಿಬಿರದಲ್ಲಿ ನೂರಕ್ಕೂ ಹೆಚ್ಚು ಜನರಿಗೆ ಕಣ್ಣಿನ ತಪಾಸಣೆ ನಡೆಸಿ ಇದರಲ್ಲಿ 15 ಮಂದಿಗೆ ಶಸ್ತ್ರ ಚಿಕಿತ್ಸೆ ಅವಶ್ಯಕತೆ ಇದ್ದು ಅವರನ್ನು ಆಸ್ಪತ್ರೆಗೆ ಬರುವುದಂತೆ ತಿಳಿಸಲಾಯಿತು. ತಪಾಸಣೆಯಲ್ಲಿ 25 ಜನರಿಗೆ ಬಿಪಿ ಶುಗರ್ ಕಂಡುಬಂದಿದ್ದು ಅವರಿಗೆ ಉಚಿತವಾಗಿ ಮಾತ್ರೆ ಔಷಧಗಳನ್ನು ನೀಡಲಾಯಿತು.