ಸಾರಾಂಶ
ಕೊಪ್ಪಳ: ತಾಲೂಕಿನ ಹಟ್ಟಿ ಗ್ರಾಮದ ಹನುಮವ್ವ ತಳವಾರ ಅವರು ಗೃಹಲಕ್ಷ್ಮೀ ಯೋಜನೆಯಿಂದ ತಮಗೆ ಬಂದಿದ್ದ ಹಣದಲ್ಲಿ ಬೋರ್ವೆಲ್ ಕೊರೆಸಿದ್ದು, 2.5 ಇಂಚು ನೀರು ಬಂದಿದೆ.
ಶಾಸಕ ರಾಘವೇಂದ್ರ ಹಿಟ್ನಾಳ ಅವರೇ ಬಂದು ಬೋರ್ವೆಲ್ಗೆ ಚಾಲನೆ ನೀಡಬೇಕು ಎಂದು ಹನುಮವ್ವ ಆರು ತಿಂಗಳಿಂದ ಪಟ್ಟು ಹಿಡಿದಿದ್ದಳು. ಬಿಡುವು ಮಾಡಿಕೊಂಡ ಶಾಸಕರು ಬುಧವಾರ ಹನುಮವ್ವ ಅವರ ಹೊಲದಲ್ಲಿ ಬೋರ್ವೆಲ್ ಕೊರೆಸಲು ಚಾಲನೆ ನೀಡಿದರು. ಕೆಲವೇ ಹೊತ್ತಿನಲ್ಲಿ ಭರ್ಜರಿ 2.5 ಇಂಚು ನೀರು ಬಂದಿದೆ. ಇದರಿಂದ ನಮ್ಮ ಬದುಕು ಹಸನವಾಗಲಿದೆ ಎನ್ನುತ್ತಾಳೆ ಹನುಮವ್ವ.
ಗೃಹಲಕ್ಷ್ಮೀ ಹಣವನ್ನು ಬೋರ್ವೆಲ್ ಕೊರೆಸಬೇಕೆಂದೇ ಕೂಡಿಟ್ಟಿದ್ದೆವು. ಈಗ ಕಾಲ ಕೂಡಿ ಬಂದಿದ್ದರಿಂದ ಶಾಸಕರ ನೇತೃತ್ವದಲ್ಲಿ ಬೋರ್ವೆಲ್ ಕೊರೆಯಿಸಿದ್ದು ನೀರು ಸಹ ಬಂದಿದೆ ಎಂದು ಖುಷಿಪಟ್ಟರು.
ಜಿಪಂ ಮಾಜಿ ಸದಸ್ಯರಾದ ಪ್ರಸನ್ನ ಗಡಾದ, ರಾಮಣ್ಣ ಚೌಡ್ಕಿ, ಕಾಂಗ್ರೆಸ್ ಮುಖಂಡ ಶಿವಣ್ಣ ಚರಾರಿ, ಪರಶುರಾಮ ಸೇರಿದಂತೆ ಇತರರು ಇದ್ದರು.ಸರ್ಕಾರ ಕೊಟ್ಟ ಗೃಹಲಕ್ಷ್ಮೀ ಹಣವನ್ನು ಕೂಡಿಟ್ಟು ಬೋರ್ವೆಲ್ ಕೊರೆಯಿಸಿದ್ದು ನೀರು ಸಹ ಬಂದಿರುವುದು ಖುಷಿ ತಂದಿದೆ. ಸರ್ಕಾರದ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡ ಕುಟುಂಬ ಆರ್ಥಿಕವಾಗಿ ಮೇಲೆ ಬರಲು ಸಹಕಾರಿಯಾಗಲಿದೆ.
ರಾಘವೇಂದ್ರ ಹಿಟ್ನಾಳ, ಶಾಸಕ