ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಮನೆಯ ಅಂಗಳದಲ್ಲಿ ಹರಡಿದ್ದ ಅಡಕೆಗೋಟು ರಾಶಿಯಲ್ಲಿದ್ದ ಕಚ್ಚಾ ಬಾಂಬ್‌ ಸಿಡಿದು ವಯೋವೃದ್ಧ ಮಹಿಳೆಯ ಕೈ ಬೆರಳುಗಳು ಸುಟ್ಟಿರುವ ಘಟನೆ ಶನಿವಾರ ಆಗುಂಬೆ ಸಮೀಪದ ಹೊನ್ನೇತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂಟೂರು ಗ್ರಾಮದಲ್ಲಿ ನಡೆದಿದೆ. ಸುಮಾರು 75 ವರ್ಷದ ಕಮಲಮ್ಮ ಗಾಯಗೊಂಡಿರುವ ಮಹಿಳೆ. ಮನೆಯ ಅಂಗಳದಲ್ಲಿ ಹರಡಿದ್ದ ಗೋಟು ಅಡಕೆ ರಾಶಿಯಲ್ಲಿದ್ದ ಕಚ್ಚಾ ಬಾಂಬ್‌ ಸಿಡಿದು ಇವರ ಎಡಗೈನ ಐದೂ ಬೆರಳುಗಳಿಗೂ ಹಾನಿಯಾಗಿದೆ. ಇಲ್ಲಿನ ಜೆಸಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಕಳುಹಿಸಲಾಗಿದೆ. ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.