ಕನಕಪುರ: ಮಹಿಳೆಯರು ಅಬಲೆಯರಲ್ಲ, ಸಬಲೆಯರು ಎಂದು ದೃಢಪಡಿಸಿ, ದಿಟ್ಟ ''''''''ಆಡಳಿತಗಾರ್ತಿ''''''''ಯಾಗಿ ಹೊರಹೊಮ್ಮಿದ ಮಹಿಳೆಯರ ಸಾಧನೆಯ ಹಾದಿಯನ್ನು ಸ್ಮರಿಸಿದಾಗ ಮಾತ್ರ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದು ಕನಕಪುರ ಗ್ರಾಮಾಂತರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಮತಾ ತಿಳಿಸಿದರು. ನಗರದ ಕೋಟೆ ಗಣಪತಿ ಗಣಪತಿ ದೇವಸ್ಥಾನದಲ್ಲಿ ತಾಲೂಕು ಬಿಜೆಪಿ ಮಹಿಳಾ ಘಟಕದಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯಾವ ಕ್ಷೇತ್ರವೇ ಆಗಿರಲಿ ಅಲ್ಲಿ ಪುರುಷ ಪ್ರಧಾನ ವ್ಯವಸ್ಥೆಯ ಗೋಡೆಗಳು ಈ ಹಿಂದೆಯೂ ಇತ್ತು ಇಂದೂ ಇದೆ. ಆ ಗೋಡೆಗಳನ್ನು ಕೆಡವಿ ಮುನ್ನುಗ್ಗುವುದು ಸರಳ ಹಾದಿಯಲ್ಲ. ಹಿಂದೆಗೂ-ಇಂದಿಗೂ ಮಹಿಳೆಯರು ಈ ತಡೆಗೋಡೆಯನ್ನು ಉರುಳಿಸಲು ಅಂಜುವುದಿದೆ. ಅಂತಹ ನಾರಿಗಳಿಗೆ ಸ್ಫೂರ್ತಿ ನಮ್ಮ ದಿಟ್ಟ ನಾಯಕಿಯರಾಗಿದ್ದು ಅವರ ಸಾಧನೆಗಳ ದಾರಿಯಲ್ಲಿ ನಾವೆಲ್ಲಾ ಸಾಗಬೇಕಾಗಿದೆ ಎಂದು ತಿಳಿಸಿದರು.

ಮಹಿಳೆ ರಾಜಕೀಯಕ್ಕೆ ಬಂದರೆ ಅದು ಇಡೀ ಸಮಾಜದ ದಿಕ್ಕನ್ನೇ ಬದಲಿಸಬಲ್ಲದು ಎಂಬುದನ್ನು ಇತಿಹಾಸವೇ ಸಾಬೀತುಪಡಿಸಿದೆ. ದೇಶ ಸ್ವಾತಂತ್ರ್ಯ ಪಡೆದಾಗಿನಿಂದ ಇಂದಿನವರೆಗೂ, ರಾಜಕೀಯ ಎನ್ನುವುದು ಕೇವಲ ಅಧಿಕಾರದ ಗದ್ದುಗೆಯಲ್ಲ, ಅದು ಕೋಟ್ಯಂತರ ಜನರ ಬದುಕನ್ನು ರೂಪಿಸುವ ವೇದಿಕೆ ಎಂದು ಮತ್ತೆ ಮತ್ತೆ ನೆನಪಿಸಿದ ವರು ಮಹಿಳೆಯರು,ಸಾವಿರಾರು ವರ್ಷಗಳ ಕಾಲ ‘ಮನೆಗೆ ಸೀಮಿತ’ ಎಂಬ ಹಣೆಪಟ್ಟಿಯನ್ನು ಹೊಂದಿದ್ದ ಮಹಿಳೆಯರು ಪುರುಷ ಪ್ರಧಾನ ಸಮಾಜವನ್ನು ಧಿಕ್ಕರಿಸಿ ಹೊರಬಂದು ಇಂದು ದೇಶದ ರಕ್ಷಣೆ, ಹಣಕಾಸು ಮತ್ತು ವಿದೇಶಾಂಗ ನೀತಿಗಳನ್ನು ನಿರ್ಧರಿಸುವ, ಸರ್ಕಾರದ ಭ್ರಷ್ಟತೆಯನ್ನು ನೇರವಾಗಿ, ನಿಷ್ಠುರವಾಗಿ ಪ್ರಶ್ನಿಸುವ ಹಂತಕ್ಕೆ ಬೆಳೆದಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯೆ ಖಾಸಿಂ ಖಾನಂ, ದಿಶಾ ಸಮಿತಿಯ ಸದಸ್ಯೆ ಶೋಭಾ, ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ವಿಜಯಲಕ್ಷ್ಮಿ, ನಗರಸಭೆ ಸದಸ್ಯೆ ಮಾಲತಿ, ತಾಪಂ ಮಾಜಿ ಸದಸ್ಯರಾದ ಪ್ರೇಮಕುಮಾರ್, ಪುಷ್ಪಲತಾ ಜಗದೀಶ್, ಗ್ರಾಮಾಂತರ ಘಟಕದ ಅಧ್ಯಕ್ಷ ಕೊತ್ತನೂರು ಕುಮಾರ್, ನಗರ ಘಟಕದ ಅಧ್ಯಕ್ಷ ಮಂಜುನಾಥ್, ಜಿಲ್ಲಾ ಎಸ್ಟಿ ಮೋರ್ಚಾದ ಶಿವಮುತ್ತು ಇತರರು ಉಪಸ್ಥಿತರಿದ್ದರು.

ಕೆ ಕೆ ಪಿ ಸುದ್ದಿ 02:

ಕನಕಪುರದ ಕೋಟೆ ಗಣಪತಿ ದೇವಾಲಯದಲ್ಲಿ ಗ್ರಾಮಾಂತರ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಚಾಲನೆ ನೀಡಲಾಯಿತು.