- ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ 26 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಒಂದು ದೇಶದಲ್ಲಿ ಸಂಸ್ಕೃತಿ, ಸಂಸ್ಕಾರ, ಪ್ರಗತಿ, ನಾಗರಿಕತೆ ಬೆಳೆದರೆ ಅದಕ್ಕೆ ಆ ದೇಶದ ಮಹಿಳೆಯರೇ ಕಾರಣ ಎಂದು ಬೆಂಗಳೂರಿನ ಅನುಸೂಯ ಮಂಜುನಾಥ್ ತಿಳಿಸಿದರು.

ಸಹರಾ ಕನ್ವೆನ್ಸನ್ ಹಾಲ್‌ನಲ್ಲಿ ನಡೆದ ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ 26 ನೇ ವರ್ಷದ ವಾರ್ಷಿ ಕೋತ್ಸವ ಉದ್ಘಾಟಿಸಿ ಮಾತನಾಡಿದರು. ದೇವರು ಮಹಿಳೆಯರಿಗೆ ನೀಡಿರುವ ವಿಶೇಷ ಶಕ್ತಿಯಿಂದ ಮಕ್ಕಳಿಗೆ, ಕುಟುಂಬದ ಸದಸ್ಯರಿಗೆ ಬೇಕಾದ ಆಹಾರ ತಯಾರಿಸುತ್ತಾಳೆ. ಬೆಳಿಗ್ಗೆ ಎದ್ದ ಕೂಡಲೇ ಮನೆ ಮುಂದೆ ರಂಗೋಲಿ ಬಿಡಿಸುತ್ತಾಳೆ. ಮಕ್ಕಳಿಗೆ ಮೊದಲ ಶಿಕ್ಷಕಿಯಾಗುತ್ತಾಳೆ. ಸಣ್ಣ ಕಾಯಿಲೆಗೆ ಪ್ರಾಥಮಿಕ ಚಿಕಿತ್ಸೆ ನೀಡುತ್ತಾಳೆ. ಗಂಡನ ದುಡಿಮೆ ಹಣ ವ್ಯರ್ಥವಾಗಿ ಪೋಲಾಗ ದಂತೆ ಕೂಡಿಟ್ಟು ಅರ್ಥ ಶಾಸ್ತ್ರಜ್ಞಳಾಗಿ ಕೆಲಸ ಮಾಡುತ್ತಾಳೆ. ಮಹಿಳೆಯರಿಗೆ ಇರುವ ಅಗಾದ ಶಕ್ತಿಯನ್ನು ಕುಟುಂಬದವರು ಸದ್ವಿನಿಯೋಗ ಮಾಡಿಕೊಳ್ಳಬೇಕು. ಸನಾತನ ಧರ್ಮದಲ್ಲಿ ಹೆಣ್ಣಿಗೆ ವಿಶೇಷ ಸ್ಥಾನಮಾನ ನೀಡಿದ್ದಾರೆ. ಮಕ್ಕಳಿಗೆ ಸನಾತನ ಧರ್ಮ ಕಲಿಸಬೇಕು. ಹುಟ್ಟಿದ ದೇಶ, ಹೆತ್ತ ತಾಯಿಯನ್ನು ಗೌರವಿಸಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಪುಷ್ಪಾ ರಾಜೇಗೌಡ ಮಾತನಾಡಿ ಎಲ್ಲಿ ಹೆಣ್ಣನ್ನು ಗೌರವಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ. ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ರಂಗದಲ್ಲೂ ಸಾಧನೆ ಮಾಡಿದ್ದಾರೆ. ಹೆಣ್ಣು ಶಕ್ತಿ ಇದ್ದಂತೆ.ಹಿಂದೆ ಮಹಿಳೆ 4 ಗೋಡೆ ಒಳಗೆ ಸೀಮಿತವಾಗಿದ್ದಳು. ಈಗ ಪುರುಷರಿಗೆ ಸಮನಾಗಿ ಕೆಲಸ ಮಾಡುತ್ತಾಳೆ. ಸಂಘ ಸಂಸ್ಥೆಗಳು ಸಮಾಜ ಮುಖಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.


ಸಭೆ ಅಧ್ಯಕ್ಷತೆಯನ್ನು ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಪದ್ಮ ಸತೀಶ್ ವಹಿಸಿದ್ದರು. ಸಭೆಯಲ್ಲಿ ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಸ್ಥಾಪಕ ಅಧ್ಯಕ್ಷೆ ಶ್ಯಾಮಲ ಸತೀಶ್, ಸಂಘದ ಕಾರ್ಯದರ್ಶಿ ಪೂರ್ಣಿಮಾ ಮಧು, ಖಜಾಂಚಿ ರೇಖಾ ಮೋಹನ್, ಗೌರವ ಅಧ್ಯಕ್ಷೆ ವನಮಾಲಮ್ಮ ಇದ್ದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎಲ್.ಎಂ.ಸತೀಶ್, ಕಣಿವೆ ವಿನಯ, ಗದ್ದೇಮನೆ ಅಣ್ಣೇಗೌಡರು, ಎಸ್.ಡಿ.ರಾಜೇಂದ್ರ, ಕೆ.ಎಂ.ಸುಂದರೇಶ್,ಅಚ್ಚುತ ಹೆಬ್ಬಾರ್, ಮಹಿಳಾ ಸಾಧಕರಾದ ರಜನಿ ಸತ್ಯನಾರಾಯಣ, ವಾಣಿ ನರೇಂದ್ರ, ಸವಿತ ರತ್ನಾಕರ,ಅಂಕಿತ ಪ್ರಜ್ವಲ್ ಹಾಗೂ ಪ್ಯಾಷನ್ ಲೋಕದಲ್ಲಿ ಸಾಧನೆ ಮಾಡಿದ ಸನ್ಮತಿ ರಕ್ಷಿತ್, ದರ್ಶಿತ್ ಮಿತ ಅವರನ್ನು ಸನ್ಮಾನಿಸಲಾಯಿತು.

ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಕಾರ್ಯದರ್ಶಿ ಪೂರ್ಣಿಮಾ ಮಧು ವರದಿ ವಾಚಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಅಶ್ವಿನಿ ಸ್ವಾಗತಿಸಿದರು. ಅನೂಷ ಕಾರ್ಯಕ್ರಮ ನಿರೂಪಿಸಿದರು.ನಂತರ ಸಂಘದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.