ಸಾರಾಂಶ
ಪಾಂಡವಪುರ ತಾಲೂಕಿನ 148 ಡೇರಿಗಳಲ್ಲಿ 71 ಮಹಿಳಾ ಸಹಕಾರ ಸಂಘಗಳಿವೆ. ಕುಂಬಾರಕೊಪ್ಪಲು ಡೇರಿಯಲ್ಲಿ ಮಹಿಳೆಯರಿಗೆ ಹೈನೋದ್ಯಮಕ್ಕೆ ಅನುಕೂಲ ಮಾಡಿಕೊಡಬೇಕೆಂಬ ಉದ್ದೇಶದಿಂದ ಕ್ಷೀರ ಸಂಜೀವಿನಿ ಹಂತ-3ರ ಯೋಜನೆಯಡಿ 12 ಮಂದಿ ಮಹಿಳೆಯರಿಗೆ 25 ಸಾವಿರದಂತೆ 3 ಲಕ್ಷ ರು. ಸಾಲಸೌಲಭ್ಯ ನೀಡಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಹೈನುಗಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಮಹಿಳಾ ಸಹಕಾರ ಸಂಘಗಳಿಗೆ ಕ್ಷೀರ ಸಂಜೀವಿನ ಯೋಜನೆಯಡಿ ನೀಡಲಾಗುತ್ತಿರುವ ಸಾಲ ಸೌಲಭ್ಯವನ್ನು ಉತ್ಪಾದಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನ್ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಹೇಳಿದರು.ತಾಲೂಕಿನ ಕುಂಬಾರಕೊಪ್ಪಲು ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆವರಣದಲ್ಲಿ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನೆ ಸಂಸ್ಥೆ, ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ, ಮನ್ಮುಲ್ನಿಂದ ನಡೆದ ಕ್ಷೀರ ಸಂಜೀವಿನ ಹಂತ-3ರ ಯೋಜನೆಯಡಿ ಮಹಿಳೆಯರಿಗೆ ನೀಡಲಾದ ಸಾಲಸೌಲಭ್ಯ ವಿತರಣೆ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲೂಕಿನ 148 ಡೇರಿಗಳಲ್ಲಿ 71 ಮಹಿಳಾ ಸಹಕಾರ ಸಂಘಗಳಿವೆ. ಕುಂಬಾರಕೊಪ್ಪಲು ಡೇರಿಯಲ್ಲಿ ಮಹಿಳೆಯರಿಗೆ ಹೈನೋದ್ಯಮಕ್ಕೆ ಅನುಕೂಲ ಮಾಡಿಕೊಡಬೇಕೆಂಬ ಉದ್ದೇಶದಿಂದ ಕ್ಷೀರ ಸಂಜೀವಿನಿ ಹಂತ-3ರ ಯೋಜನೆಯಡಿ 12 ಮಂದಿ ಮಹಿಳೆಯರಿಗೆ 25 ಸಾವಿರದಂತೆ 3 ಲಕ್ಷ ರು. ಸಾಲಸೌಲಭ್ಯ ನೀಡಲಾಗುತ್ತಿದೆ ಎಂದರು.ಸಾಲ ಪಡೆದ ಮಹಿಳೆಯರು ಹಸು ಖರೀದಿಸಿ ಹೈನುಗಾರಿಕೆ ಮಾಡಬೇಕು. ಹಸುಗಳ ಬೆಲೆ ಏರಿಕೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ 50 ಸಾವಿರದವರೆಗೆ ಸಾಲಸೌಲಭ್ಯ ಒದಗಿಸಲು ಕ್ರಮವಹಿಸಲಾಗುತ್ತಿದೆ ಭರವಸೆ ನೀಡಿದರು.
ರೈತರು ಶ್ರದ್ಧೆ, ನಿಷ್ಠೆಯಿಂದ ಕೆಲಸ ಮಾಡಿದರೆ ದೇವರು ಪ್ರತಿಫಲ ನೀಡಲಿದ್ದಾರೆ. ರೈತರು ಹಸುಗಳನ್ನು ಚನ್ನಾಗಿ ನಿರ್ವಹಣೆ ಮಾಡಿ ಡೇರಿಗೆ ಗುಣಮಟ್ಟದ ಹಾಲು ಪೂರೈಕೆ ಮಾಡಬೇಕು, ಒಕ್ಕೂಟದ ಪಶು ಆಹಾರವನ್ನೇ ಹಾಕಬೇಕು, ಒಕ್ಕೂಟ ನೀಡುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಹೆಚ್ಚಿನ ಮಟ್ಟದಲ್ಲಿ ಹೈನುಗಾರಿಕೆ ನಡೆಸಬೇಕು ಎಂದು ಸಲಹೆ ನೀಡಿದರು.ಈ ವೇಳೆ ಗ್ರಾಪಂ ಸದಸ್ಯ ವರದರಾಜು, ಮಾರ್ಗ ವಿಸ್ತರ್ಣಾಧಿಕಾರಿ ಪ್ರಜ್ವಲ್, ಡೇರಿ ಅಧ್ಯಕ್ಷ ಡಿ.ಕೆ.ನಾಗಮ್ಮ, ಕಾರ್ಯದರ್ಶಿ ವರಲಕ್ಷ್ಮಿ, ಕ್ಷೀರ ಸಂಜೀವಿನ ಯೋಜನೆಯ ಸಂಯೋಜಕಿ ಸುಕನ್ಯ, ನಿರ್ದೇಶಕರಾದ ಚಿಕ್ಕತಾಯಮ್ಮ, ಪ್ರೇಮಕುಮಾರಿ, ವರಲಕ್ಷ್ಮಿಆನಂದ, ಜಯಮ್ಮವೈಕುಂಠಶೆಟ್ಟಿ, ಗೀತಾ, ಸವಿತ, ಅರ್ಪಿತ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ಮಹಿಳೆಯರು ಹಾಜರಿದ್ದರು.