ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಛತ್ರಪತಿ ಶಿವಾಜಿ ಮಹಾರಾಜರ ಮೆರವಣಿಗೆ ವೇಳೆ ಮಸೀದಿಯಿಂದ ಕಲ್ಲು, ಚಪ್ಪಲಿ ಎಸೆದ ಪ್ರಕರಣದ ನಂತರದ ಬೆಳವಣಿಗೆಯಲ್ಲಿ ಭಾಗಿಯಾಗಿದ್ದಾರೆಂದು ಬಾಗಲಕೋಟೆ ಕಿಲ್ಲಾ ಓಣಿಯ ಟಂಕಸಾಲಿ ಗಲ್ಲಿಯ ಹಿಂದೂ ಯುವಕರ ಬಂಧನಕ್ಕೆ ಶುಕ್ರವಾರ ಸಂಜೆ ತೆರಳಿದ ಪೊಲೀಸರನ್ನು ಕಿಲ್ಲಾ ಓಣಿಯ ಮಹಿಳೆಯರು ಹಾಗೂ ಜನರು ಅಡ್ಡ ನಿಂತು ಬಂಧಿಸದಂತೆ ತಡೆದ ಘಟನೆ ನಡೆದಿದೆ.

ಮುತ್ತು ಮಾಗಿ ಎಂಬ ಯುವಕನನ್ನು ಎಳೆದು ಕಾರಿನಲ್ಲಿ ಕರೆದುಕೊಂಡು ಹೋಗಲು ಮುಂದಾದಾಗ ಆಕ್ರೋಶಗೊಂಡ ಸ್ಥಳೀಯ ಮಹಿಳೆಯರು ಕಲ್ಲೆಸೆತ ಮಾಡಿದ ಕಿಡಿಗೇಡಿಗಳನ್ನು ಬಿಟ್ಟು ಅಮಾಯಕರನ್ನು ಬಂಧಿಸುತ್ತಿದ್ದೀರಿ ಏಕೆ ಎಂದು ಪ್ರಶ್ನಿಸಿದರು. ಪೊಲೀಸರ ವಿರುದ್ಧ ಮಹಿಳೆಯರು ಪ್ರತಿಭಟನೆ ನಡೆಸಿ ಬೇಕೆ ಬೇಕು ನ್ಯಾಯ ಬೇಕು ಎಂದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ತಪ್ಪು ಮಾಡದ ಹಿಂದೂ ಕಾರ್ಯಕರ್ತರ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ ಎಂದು ಆರೋಪಿಸಿರುವ ಸ್ಥಳೀಯರು, ಇದು ಪೊಲೀಸರ ದೌರ್ಜನ್ಯ ಎಂದು ಕಿಡಿಕಾರಿದರು.

ಹಿಂದೂ ಯುವಕರ ಬಂಧನಕ್ಕೆ ತೆರಳಿದ ಪೊಲೀಸರು ನಮ್ಮ ಬಟ್ಟೆ ಹರಿದಿದ್ದಾರೆ. ಹೆಣ್ಣು ಮಕ್ಕಳು ಎನ್ನದೇ ಎಳೆದಾಡಿದ್ದಾರೆ. ಮುತ್ತು ಮಾಗಿ ಎಲ್ಲಿದ್ದಾನೋ ಗೊತ್ತಿಲ್ಲ. ಅವನ ಮನೆಗೆ ಕಳಿಸಿ, ಇಲ್ಲದಿದ್ದರೆ ಠಾಣೆ ಮುಂದೆ ಹೋರಾಟ ಮಾಡ್ತೀವಿ ಎಂದು ಪೊಲೀಸರ ಜೊತೆ ಮಹಿಳೆಯರು ವಾಗ್ವಾದ ನಡೆಸಿ, ಪೊಲೀಸರನ್ನು ಮಹಿಳೆಯರು ತರಾಟೆಗೆ ತೆಗೆದುಕೊಂಡರು.