ತಾಲೂಕಿನ ತಂಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗವಿಪುರ (ಕರೆಕಲ್ ಬಾರೆ) ಗ್ರಾಮದ ಹಲವಾರು ಮಹಿಳೆಯರು ಕುಡಿಯುವ ನೀರಿಗಾಗಿ ತಂಡಗದ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಖಾಲಿ ಕೊಡವನ್ನು ತಲೆಯ ಮೇಲೆ ಹೊತ್ತು ಪ್ರತಿಭಟನೆ ಮಾಡಿದರು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ತಂಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗವಿಪುರ (ಕರೆಕಲ್ ಬಾರೆ) ಗ್ರಾಮದ ಹಲವಾರು ಮಹಿಳೆಯರು ಕುಡಿಯುವ ನೀರಿಗಾಗಿ ತಂಡಗದ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಖಾಲಿ ಕೊಡವನ್ನು ತಲೆಯ ಮೇಲೆ ಹೊತ್ತು ಪ್ರತಿಭಟನೆ ಮಾಡಿದರು.ಗ್ರಾಮದ ಮುಖಂಡ ಓಂಕಾರ ಚಾರ್ ಮಾತನಾಡಿ ನಮ್ಮ ಗ್ರಾಮದಲ್ಲಿ ಸುಮಾರು 25 ಕ್ಕೂ ಹೆಚ್ಚು ಮನೆಗಳಿದ್ದು ಸುಮಾರು 150 ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದೇವೆ. ನಮಗೆ ಇಪ್ಪತ್ತು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಪ್ರತಿದಿನ ಜನರು ನೀರಿಗಾಗಿ ಪರಿಪಾಟಲು ಪಡುವಂತಾಗಿದೆ. ದೂರದಲ್ಲಿರುವ ರೈತರ ತೋಟಗಳ ಬೋರ್ ವೆಲ್ ಗಳಿಂದ ನೀರನ್ನು ತರುವಂತಾಗಿದೆ. ರೈತರು ತಮ್ಮ ತೋಟಗಳಿಗೆ ನೀರು ಬಿಟ್ಟ ಸಂದರ್ಭದಲ್ಲಿ ಕಾದು ನೀರನ್ನು ತರುವ ಪರಿಸ್ಥಿತಿ ತಲೆದೋರಿದೆ. ನಮ್ಮ ಗ್ರಾಮದಲ್ಲಿನ ಬಹುತೇಕ ಜನರು ಕೂಲಿ ಕಾರ್ಮಿಕರು. ಪ್ರತಿದಿನ ಕೆಲಸಕ್ಕೆ ತೆರಳುವುದರಿಂದ ನೀರು ಹಿಡಿಯಲು ರಾತ್ರಿ ಸಮಯದಲ್ಲಿ ತೋಟಕ್ಕೆ ತೆರಳಬೇಕಾಗಿದೆ. ಇಲ್ಲಿ ಕಾಡು ಪ್ರಾಣಿಗಳ ಕಾಟವಿದೆ. ಈ ಮೊದಲು ಬಹುಗ್ರಾಮ ಕುಡಿಯುವ ಯೋಜನೆಯ ಟ್ಯಾಂಕರ್ ನಿಂದ ನಮ್ಮ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲಾಗಿತ್ತು. ಆದರೆ ಅದು ಬಂದ್ ಆಗಿದೆ. ಈಗಾಗಲೇ ಕುಡಿಯುವ ನೀರು ಕಲ್ಪಿಸುವಂತೆ ಗ್ರಾಮ ಪಂಚಾಯಿತಿ ಸದಸ್ಯರಿಗೂ ಹಾಗೂ ಪಿಡಿಒಗೂ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜವಾಗಿಲ್ಲ. ಕೂಡಲೇ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.ಪ್ರತಿಭಟನಾಕಾರರ ಜೊತೆ ಮಾತನಾಡಿದ ಪಿಡಿಒ ಕುಮಾರಸ್ವಾಮಿ ನಾಳೆಯಿಂದ ಟ್ಯಾಂಕರ್ ಮೂಲಕ ಕುಡಿಯುವ ನೀರು ಕಲ್ಪಿಸಲಾಗುವುದು. ಮುಂದಿನ ಕೆಲ ದಿನಗಳಲ್ಲಿ ಬೋರ್ ವೆಲ್ ಗೆ ಹೊಸ ಮೋಟರ್ ಅಳವಡಿಸಿ ನಂತರ ನೀರು ಬಿಡಲಾಗುವುದು ಎಂದು ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಗೊವಿಂದಪ್ಪ, ಶೀಲಾ, ಪ್ರಮೀಳ, ಶಕೀಲ, ಗಂಗಾಧರಯ್ಯ, ಪುಟ್ಟಲಕ್ಷ್ಮಯ್ಯ, ನರಸಯ್ಯ, ಜಯಮ್ಮ, ಪ್ರವೀಣ್, ರೇಖ ಸೇರಿದಂತೆ ಇತರರು ಇದ್ದರು.