ಮಹಿಳಾ ಕಾಲೇಜು ಕಟ್ಟಡ ಕಾಮಗಾರಿ ತಾತ್ಕಾಲಿಕ ಸ್ಥಗಿತ

| Published : Sep 03 2024, 01:35 AM IST / Updated: Sep 03 2024, 01:36 AM IST

ಸಾರಾಂಶ

ಕಾಲೇಜಿನಲ್ಲಿ ಜಾಗ ಇದೆ ಅಂತ ಹೇಗೆ ಬೇಕಾದರೆ ಹಾಗೇ ಕಟ್ಟಿಕೊಂಡು ಹೋದರೆ ಮುಂದೆ ವಿದ್ಯಾರ್ಥಿಗಳು ಒಡಾಡಲೂ ಜಾಗ ಇರಲ್ಲ. ಪ್ರಾಂಶುಪಾಲರು ಇದರ ಜವಾಬ್ದಾರಿ ವಹಿಸಿಕೊಂಡು ಮುಂದಾಲೋಚನೆ ವಹಿಸಬೇಕು. ಮುಂದೆ ನೀಡುವ ಪ್ಲಾನ್ ಪ್ರಕಾರವೇ ಕಟ್ಟಡ ಕಟ್ಟಬೇಕು. ಅಲ್ಲಿ ತನಕ ಕೆಲಸ ನಿಲ್ಲಿಸಲು ಸೂಚನೆ.

ಕನ್ನಡಪ್ರಭ ವಾರ್ತೆ ಕೋಲಾರನಗರದ ಸರ್ಕಾರಿ ಮಹಿಳಾ ಕಾಲೇಜಿಗೆ ಐದು ಕೋಟಿ ಬಿಡುಗಡೆಯಾಗಿದೆ. ಅದನ್ನು ಯೋಜನಾ ಬದ್ಧವಾಗಿ ಬಳಸಿಕೊಂಡು ಕಟ್ಟಡಗಳನ್ನು ಕಟ್ಟದೇ ಬೇಕಾಬಿಟ್ಟಿ ಕಟ್ಟಲು ಹೋದರೆ ಮುಂದೆ ಜಾಗದ ಸಮಸ್ಯೆಯಾಗಲಿದೆ. ಕೂಡಲೇ ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅಧಿಕಾರಿಗಳಿಗೆ ಸೂಚಿಸಿದರು.ನಗರದಲ್ಲಿ ಮಹಿಳಾ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಕಾಲೇಜಿನಲ್ಲಿ ಜಾಗ ಇದೆ ಅಂತ ಹೇಗೆ ಬೇಕಾದರೆ ಹಾಗೇ ಕಟ್ಟಿಕೊಂಡು ಹೋದರೆ ಮುಂದೆ ವಿದ್ಯಾರ್ಥಿಗಳು ಒಡಾಡಲೂ ಜಾಗ ಇರಲ್ಲ. ಪ್ರಾಂಶುಪಾಲರು ಇದರ ಜವಾಬ್ದಾರಿ ವಹಿಸಿಕೊಂಡು ಮುಂದಾಲೋಚನೆ ವಹಿಸಬೇಕು. ಚಿಕ್ಕ ಚಿಕ್ಕ ಕಬ್ಬಿಣದ ಸರಳು ಹಾಕಿ ಐದು ಅಂತಸ್ತು ಕಟ್ಟತ್ತೀವಿ ಅಂದರೆ ಅದು ಹೇಗೆ ಸಾಧ್ಯ. ಮುಂದೆ ಒಂದು ಪ್ಲಾನ್ ಕೊಡತ್ತೇವೆ ಅಲ್ಲಿ ತನಕ ಕೆಲಸ ನಿಲ್ಲಿಸಿ ಎಂದರು.ಬಾಲಕರ ಕಾಲೇಜಿನಲ್ಲೂ ಇದೇ ಕತೆ

ಬಾಲಕರ ಕಾಲೇಜಿನಲ್ಲೂ ಕಳಪೆ ಕಾಮಗಾರಿಯಾಗಿದೆ ಎಂದು ಗೊತ್ತಾಗಿದೆ. ಕೂಡಲೇ ಎನ್.ಡಿ.ಟಿ ವತಿಯಿಂದ ಪರಿಶೀಲನೆ ನಡೆಸಿ ಯಾರು ಗುತ್ತಿಗೆದಾರರು ಯಾವ ಏಜೆನ್ಸಿ ಅಂತ ಕೂಡಲೇ ವರದಿ ಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಬಸ್‌ ವ್ಯವಸ್ಥೆಗೆ ಸೂಚನೆ

ಇದೇ ಸಂದರ್ಭದಲ್ಲಿ ಕಾಲೇಜಿನ ಶೌಚಾಲಯ ಸೇರಿದಂತೆ ನೀರಿನ ವ್ಯವಸ್ಥೆ ಸರಿಯಾಗಿಲ್ಲ ವಿದ್ಯಾಧ್ಯಾರ್ಥಿಗಳು ಕಂಡಾಗ ಬಸ್ ನಿಲ್ಲಿಸಲ್ಲ ಎಂದು ವಿದ್ಯಾಧ್ಯಾರ್ಥಿಗಳು ಸಚಿವರ ಮುಂದೆ ಇಟ್ಟರು ಕೂಡಲೇ ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡು, ನೋಡಿ ಇಲ್ಲಿ ಬಡವರ ಮಕ್ಕಳು ಹೆಚ್ಚಾಗಿ ಬರೋದು ಅವರ ಯೋಗಕ್ಷೇಮ ಮುಖ್ಯ. ಮುಂದೆ ಈ ರೀತಿಯಲ್ಲಿ ಆಗದಂತೆ ನೋಡಿಕೊಳ್ಳಿ ಎಂದರಲ್ಲಿದೆ, ಕೆ.ಎಸ್.ಆರ್.ಟಿ.ಸಿ ಡಿಸಿಗೆ ಪೋನ್ ಮಾಡಿ ನಿಮ್ಮ ಬಸ್ ಚಾಲಕರು ಮತ್ತು ನಿರ್ವಾಹಕರು ಬಾಸ್ ಆಗಿದ್ದಾರೆ. ವಿದ್ಯಾರ್ಥಿಗಳನ್ನು ಬಸ್‌ನಲ್ಲಿ ಕರೆತರಲು ಸೂಚಿಸಿ ಎಂದರು.ಪ್ರಾಂಶುಪಾಲರಿಗೆ ಶಾಸಕರ ತರಾಟೆ

ಕಾಲೇಜಿನ ಸಮಸ್ಯೆಗಳ ಬಗ್ಗೆ ಸಚಿವ ಮುಂದೆ ಪ್ರಾಂಶುಪಾಲರು ಮತ್ತು ಪ್ರಾಧ್ಯಾಪಕರು ವಿವರಿಸಿದರು. ಆಘ ಅಲ್ಲಿಯೇ ಇದ್ದ ಶಾಸಕ ಕೊತ್ತೂರು ಮಂಜುನಾಥ್‌, ತಾವು ಈ ಹಿಂದೆ ಇಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಇದನ್ನೆಲ್ಲ ಏಕೆ ಹೇಳಲಿಲ್ಲ. ನಾನೇ ಸ್ವಂತ ಹಣದಲ್ಲಿ ಬೋರ್ ವೆಲ್ ಹಾಕಿಸಿ ನೀರು ವ್ಯವಸ್ಥೆ ಮಾಡಿದ್ದೇನೆ ಸರಿಯಾಗಿ ಬಳಸಿಕೊಂಡಿಲ್ಲ. ಈಗ ಸಚಿವರ ಎದುರು ಹೇಳುತ್ತಿದ್ದೀರಿ ಎಂದು ಗರಂ ಆದರಲ್ಲದೆ, ನೀವೆಲ್ಲಾ ಆಟ ಆಡುತ್ತಾ ಇದ್ದೀರಾ ಹುಷಾರ್ ಎಂದು ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡರು. ಆಗ ಶಾಸಕರನ್ನು ಸಚಿವ ಸುಧಾಕರ್ ಸಮಾಧಾನಪಡಿಸಿದರು.ಈ ಸಂದರ್ಭದಲ್ಲಿ ಪ್ರಾಂಶುಪಾಲ ಗಂಗಾಧರ್ ರಾವ್ ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಕೆಪಿಸಿಸಿ ಸದಸ್ಯ ನಂದಿನಿ ಪ್ರವೀಣ್, ಮುಖಂಡರಾದ ಮೈಲಾಂಡಹಳ್ಳಿ ಮುರಳಿ, ಉರಟ ಅಗ್ರಹಾರ ಚೌಡರೆಡ್ಡಿ, ಮಲೇಷಿಯಾ ರಾಜಕುಮಾರ್ ಇದ್ದರು.