ಕೆಲ ಔಷಧಿ ಮಾತ್ರ ಇಲ್ಲಿ ಕೊಟ್ಟು ಇನ್ನುಳಿದವುಗಳನ್ನು ಖಾಸಗಿ ಅಂಗಡಿಗಳಿಗೆ ಬರೆದು ಕೊಡುತ್ತಾರೆ ಎಂದು ಅಧಿಕಾರಿಗಳ ಮುಂದೆಯೇ ಸಾರ್ವಜನಿಕರು, ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಕೂಡಾ ದೂರಿದರು.

ಕಾರಟಗಿ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರ ಕುರಿತು ಅನೇಕ ದೂರು ಬಂದ ಹಿನ್ನೆಲೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಗುರುವಾರ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿ ಸ್ಥಳದಲ್ಲಿಯೇ ತಾಲೂಕು ವೈದ್ಯಾಧಿಕಾರಿ ಸೇರಿದಂತೆ ಸ್ಥಳೀಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಗುರುವಾರ ಸಂಜೆ ಭೇಟಿ ನೀಡಿದ ಮಹಿಳಾ ಆಯೋಗ ಆಧ್ಯಕ್ಷೆ ಚೌಧರಿ, ವಿವಿಧ ವಿಭಾಗಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಆಸ್ಪತ್ರೆಗೆ ಬಂದಿದ್ದ ಜನರ ಸಮಸ್ಯೆ ಆಲಿಸಿದರು. ಈ ವೇಳೆ ಸಾರ್ವಜನಿಕರು ವೈದ್ಯಾಧಿಕಾರಿ ಕೇಂದ್ರ ಸ್ಥಾನದಲ್ಲಿರದೇ,ಸಿಂಧನೂರು ನಗರದಿಂದ ಬರುತ್ತಾರೆ, ಹೀಗಾಗಿ ಅವರಿಂದ ಸರಿಯಾದ ಸೇವೆ ಸಿಗುತ್ತಿಲ್ಲ. ಇನ್ನು ಅಧಿಕಾರಿಯೇ ಆಸ್ಪತ್ರೆಗೆ ತಡವಾಗಿ ಬರುವುದರಿಂದ ಇಲ್ಲಿನ ಸಿಬ್ಬಂದಿಗೆ ಯಾವುದೇ ಭಯ ಇಲ್ಲದಂತಾಗಿದೆ. ಜತೆಗೆ ರೋಗಿಗಳು, ಗರ್ಭಿಣಿಯರು ಆಸ್ಪತ್ರೆಯಲ್ಲಿ ಯಾರೂ ಇಲ್ಲದ್ದನ್ನು ನೋಡಿ ಗಂಗಾವತಿ, ಸಿಂಧನೂರು ಆಸ್ಪತ್ರೆಗಳಿಗೆ ಹೋಗಿ ತೋರಿಸಿಕೊಂಡು ಬರುವಂತಾಗಿದೆ.ಜತೆಗೆ ರಕ್ತ ಪರೀಕ್ಷೆ ಸೇರಿದಂತೆ ಎಲ್ಲ ತರಹದ ಪರೀಕ್ಷೆ ಮಾಡುವ ಅತ್ಯಾಧುನಿಕ ಯಂತ್ರಗಳಿದ್ದರೂ ಆಸ್ಪತ್ರೆಯ ಮುಂದುಗಡೆಯೇ ಗೇಟ್ ಬಳಿ ಇರುವ ಖಾಸಗಿ ಆಸ್ಪತ್ರೆಯಲ್ಲಿ ಚೆಕ್ಅಫ್‌ ಬರೆಯುತ್ತಾರೆ ಎಂದು ದೂರಿದರು.

ಕೆಲ ಔಷಧಿ ಮಾತ್ರ ಇಲ್ಲಿ ಕೊಟ್ಟು ಇನ್ನುಳಿದವುಗಳನ್ನು ಖಾಸಗಿ ಅಂಗಡಿಗಳಿಗೆ ಬರೆದು ಕೊಡುತ್ತಾರೆ ಎಂದು ಅಧಿಕಾರಿಗಳ ಮುಂದೆಯೇ ಸಾರ್ವಜನಿಕರು, ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಕೂಡಾ ದೂರಿದರು.

ಆಸ್ಪತ್ರೆಯಲ್ಲಿ ಇರುವ ಕುಂದುಕೊರತೆ ಸರಿಪಡಿಸುವಂತೆ ಸ್ಥಳದಲ್ಲಿಯೇ ಇದ್ದ ತಾಲೂಕು ವೈದ್ಯಾಧಿಕಾರಿ ಗೌರಿಶಂಕರ್ ಅವರಿಗೆ ತರಾಟೆಗೆ ತೆಗೆದುಕೊಂಡರು. ಇನ್ನು ಆರೋಗ್ಯ ರಕ್ಷಾ ಸಮಿತಿ ರಚನೆಯಾಗಿ 11 ತಿಂಗಳು ಕಳೆದಿದ್ದರೂ ಒಂದು ಸಭೆ ಕರೆಯದಿರುವ ಬಗ್ಗೆ ಕೂಡಾ ತಮ್ಮ ಗಮನಕ್ಕೆ ಬರುತ್ತಿದ್ದಂತೆ ಆಕ್ರೋಶ ವ್ಯಕ್ತಪಡಿಸಿ ಕೂಡಲೇ ಸಮಿತಿ ಸಭೆ ಕರೆದು ಆಸ್ಪತ್ರೆಯ ಕಾಯಕಲ್ಪಕ್ಕೆ ಸಲಹೆ-ಸೂಚನೆ ಪಡೆಯಬೇಕು ಎನ್ನುವ ಸಾಮಾನ್ಯ ಜ್ಞಾನ ಇಲ್ಲವೇ ಎಂದು ಜತೆಗೆ ಇಲ್ಲಿರುವ ಸಮಸ್ಯೆಗಳ ಬಗ್ಗೆ, ಬೇಜವಾಬ್ದಾರಿ ಅಧಿಕಾರಿಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ನೇರವಾಗಿ ದೂರು ನೀಡಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.

ಈ ವೇಳೆ ತಾಲೂಕು ವೈದ್ಯಾಧಿಕಾರಿ ಎಸ್.ಗೌರಿಶಂಕರ್, ಸಿಡಿಪಿಒ ವಿರುಪಾಕ್ಷಿ, ಗ್ರೇಡ್-2 ತಹಸೀಲ್ದಾರ್ ಷಣ್ಮುಖಪ್ಪ, ಸಿ.ಎಚ್.ಸಿಯ ವೈದ್ಯಾಧಿಕಾರಿ ಪ್ರಿಯಾಂಕ ಪಟ್ಟಣಶೆಟ್ಟಿ, ಪಿಐ ಸುದೀರ್ ಬೆಂಕಿ, ಪುರಸಭೆ ಅಧ್ಯಕ್ಷ ಮಂಜುನಾಥ್ ಮೇಗೂರು, ಸದಸ್ಯ ದೊಡ್ಡಬಸವರಾಜ್ ಬೂದಿ, ಅರೋಗ್ಯ ರಕ್ಷಾ ಸಮಿತಿ ಸದಸ್ಯ ತುಳಜಾರಾಮ್ ಸಿಂಗ್ರಿ, ಹನುಮೇಶ್ ಮ್ಯಾಗಡೆ, ವೀರೇಶ್ ಸುದ್ದಿ, ಇನಿತರರು ಇದ್ದರು.