ಕುಟುಂಬದಲ್ಲಿನ ಲಿಂಗ ತಾರತಮ್ಯ ಹೋಗಬೇಕು.ಪೋಷಕರು ಹೆಣ್ಣು ಗಂಡು ಎನ್ನದೆ ಇಬ್ಬರಿಗೂ ಸಮಾನ ರೂಪದ ಶಿಕ್ಷಣ ಕೊಡಬೇಕು
ಯಲಬುರ್ಗಾ: ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆಯಾದಾಗ ಮಾತ್ರ ಅವರ ಪ್ರಗತಿ ಸಾಧ್ಯ ಎಂದು ಹಿರಿಯ ವಕೀಲ ಅಕ್ಕಮಹಾದೇವಿ ಪಾಟೀಲ್ ಹೇಳಿದರು.
ತಾಲೂಕಿನ ಹಿರೇವಂಕಲಕುಂಟಾ ಗ್ರಾಮದ ಎಸ್ಎಸ್ಎಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕುಟುಂಬದಲ್ಲಿನ ಲಿಂಗ ತಾರತಮ್ಯ ಹೋಗಬೇಕು.ಪೋಷಕರು ಹೆಣ್ಣು ಗಂಡು ಎನ್ನದೆ ಇಬ್ಬರಿಗೂ ಸಮಾನ ರೂಪದ ಶಿಕ್ಷಣ ಕೊಡಬೇಕು.ಮಹಿಳೆಯರು ಪುರುಷರಷ್ಟೇ ಸಮಾನರು ಎಂಬುದನ್ನು ಎಲ್ಲರೂ ಮನಗಾಣಬೇಕು. ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯು ತನ್ನದೆ ಛಾಪು ಮೂಡಿಸಿದ್ದಾಳೆ. ಸಮಾಜದಲ್ಲಿ ಮಹಿಳೆಯರಿಗೆ ತಮ್ಮದೇಯಾದ ಗೌರವವಿದ್ದು, ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂದರು.
ಕಾಲೇಜಿನ ಮೇಲುಸ್ತುವಾರಿ ಹಾಗೂ ಹಿರಿಯ ಸಹಾಯಕ ಪ್ರಾಧ್ಯಾಪಕ ಮಹಾಂತೇಶ ಡಿ. ಗೆದಗೇರಿ ಮಾತನಾಡಿ, ಮಹಿಳೆಯರು ಆರ್ಥಿಕ ಮತ್ತು ರಾಜಕೀಯ ಅಧಿಕಾರ ಹೊಂದಿದಾಗ ಮಾತ್ರ ಅವರ ಸಬಲೀಕರಣ ಸಾಧ್ಯವೆಂದು ಹೇಳಿದರು.ಸಹಾಯಕ ಪ್ರಾಧ್ಯಾಪಕಿ ಪೂರ್ಣಿಮಾ ಮಹಿಳೆಯರು ತಮಗಾಗುವ ಅನ್ಯಾಯ ಪ್ರತಿಭಟಿಸಲು ಹೋರಾಟದ ಮಾರ್ಗ ಅನುಸರಿಸಬೇಕು ಎಂದರು. ಸಹಾಯಕ ಪ್ರಾಧ್ಯಾಪಕಿ ವೀಣಾ ಕುಮಾರಿ ಮಾತನಾಡಿದರು.