ಸಾರಾಂಶ
ಹಗರಿಬೊಮ್ಮನಹಳ್ಳಿ: ಮಹಿಳೆಯರು ಆರ್ಥಿಕ ಸಬಲತೆ ಹೊಂದುವ ನಿಟ್ಟಿನಲ್ಲಿ ಕೌಶಲ್ಯಾಭಿವೃಧ್ಧಿ ತರಬೇತಿಗಳನ್ನು ಪಡೆಯಬೇಕು ಎಂದು ಎಸ್ಎಲ್ಆರ್ ಮೆಟಾಲಿಕ್ಸ್ ಕಂಪನಿಯ ಐಟಿ ವಿಭಾಗದ ಮುಖ್ಯಸ್ಥ ಪ್ರವೀಣ್ ಕುಮಾರ್ ಪಾಟೀಲ್ ಹೇಳಿದರು.ತಾಲೂಕಿನ ನಾರಾಯಣದೇವರಕೆರೆ ಗ್ರಾಮದಲ್ಲಿ ಎಸ್ಎಲ್ಆರ್ ಕಂಪನಿಯ ಸಿಎಸ್ಆರ್ ಯೋಜನೆಯಡಿ ಚೈತನ್ಯ ಗ್ರಾಮೀಣ ಅಭಿವೃಧ್ಧಿ ಎಜುಕೇಷನಲ್ ಟ್ರಸ್ಟ್ ಹಾಗೂ ಎಸ್ಎಲ್ಆರ್ ಮೆಟಾಲಿಕ್ಸ್ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಗಣಕಯಂತ್ರ ಹಾಗೂ ಟೈಲರಿಂಗ್ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸ್ವಾವಲಂಬಿ ಜೀವನ ರೂಪಿಕೊಳ್ಳುವುದರ ಸಲುವಾಗಿ ಸಂಸ್ಥೆಯು ಸಾಮಾಜಿಕ ಕಳಕಳಿ ಹೊತ್ತು ಇಂತಹ ಯೋಜನೆಗಳನ್ನು ರೂಪಿಸಿದೆ. ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತವಾಗದೇ ಇಂತಹ ತರಬೇತಿಗಳನ್ನು ಪಡೆದುಕೊಂಡು ಪ್ರಸ್ತುತ ಸಮಾಜದಲ್ಲಿ ಸ್ವಾವಲಂಬಿ ಬದುಕು ಸಾಗಿಸಬೇಕು ಎಂದರು.ಗ್ರಾಮದ ಮುಖಂಡ ನಾಗಪ್ಪ ಮಾತನಾಡಿ, ಗ್ರಾಮದಲ್ಲಿನ ಮಹಿಳೆಯರು, ಯುವತಿಯರು ಯುವಕರು ಟೈಲರಿಂಗ್ ಮತ್ತು ಕಂಪ್ಯೂಟರ್ ತರಬೇತಿಗಳನ್ನು ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿ. ಕಂಪನಿಯ ಈ ಕಾರ್ಯಕ್ರಮಗಳು ನಿಜಕ್ಕೂ ಸ್ವಾವಲಂಬಿ ಜೀವನಕ್ಕೆ ದಾರಿ ಮಾಡಿ ಕೊಡುತ್ತವೆ ಎಂದು ತಿಳಿಸಿದರು.ಚೈತನ್ಯ ಗ್ರಾಮೀಣ ಅಭಿವೃಧ್ಧಿ ಎಜುಕೇಷನಲ್ ಟ್ರಸ್ಟ್ನ ಅಧ್ಯಕ್ಷ ಭಿಮರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಉಚಿತ ತರಬೇತಿಗಳ ಸದುಪಯೋಗ ಪಡಿಸಿಕೊಂಡು ಜ್ಞಾನ ಅರಿತು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಕರೆ ನೀಡಿದರು.ಈ ಸಂದರ್ಭದಲ್ಲಿ ಮರಬ್ಬಿಹಾಳ ಗ್ರಾ.ಪಂ. ಅಧ್ಯಕ್ಷ ಶಂಕರ್ನಾಯ್ಕ್, ಉಪಾಧ್ಯಕ್ಷೆ ಅಖಿಲಾಬಾನು, ಸದಸ್ಯರಾದ ಯಮುನಪ್ಪ, ಮುಖಂಡರಾದ ಋಷೀಂದ್ರ, ನಾಗಪ್ಪ, ಗೋಪಿಕಾ, ಎಸ್ಎಲ್ಆರ್ ಕಂಪನಿಯ ಹಿರಿಯ ಅಧಿಕಾರಿ ರಾಜೀ, ಸಿಎಸ್ಆರ್ ವಿಭಾಗದ ಮಲ್ಲಿಕಾರ್ಜುನ, ಮಾರುತಿ ಗೋಷಿ, ಚೈತನ್ಯ ಗ್ರಾಮೀಣ ಅಭಿವೃಧ್ಧಿ ಎಜುಕೇಷನಲ್ ಟ್ರಸ್ಟ್ನ ಬಾಗ್ಯ, ಇಂದಿರಾ ಸೇರಿದಂತೆ ತರಬೇತಿ ಶಿಬಿರಾರ್ಥಿಗಳು ಇದ್ದರು.