ಕನ್ನಡಪ್ರಭ ವಾರ್ತೆ ತಿಪಟೂರು
ಮಹಿಳೆಯರು ಪುರುಷನಿಗೆ ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲದಂತೆ ಕುಟುಂಬ ಹಾಗೂ ಸಮಾಜದ ಸರ್ವತೋಮುಖ ಪ್ರಗತಿಗೆ ಅವಿರತವಾಗಿ ದುಡಿಯುತ್ತಿದ್ದಾರೆ ಎಂದು ಸರ್ವೋದಯ ಮಂಡಳಿಯ ನೂತನ ರಾಜ್ಯಾಧ್ಯಕ್ಷ ಡಾ.ಯು.ಚಿ. ದೊಡ್ಡಯ್ಯ ಹೇಳಿದರು.ತಿಪಟೂರಿನ ನಿವೃತ್ತ ನೌಕರರ ಸಂಘದ ಸಭಾಂಗಣದಲ್ಲಿ ತಾಲೂಕು ಸರ್ವೊದಯ ಮಂಡಲದಿಂದ ಆಯೋಜಿಸಿದ್ದ ಗಾಂಧಿ ತತ್ತ್ವ ಪ್ರಸಾರ ಮತ್ತು ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ನಗರದ ಪೌರ ಕಾರ್ಮಿಕ ಮಹಿಳೆ ಜಯಮ್ಮ ಅವರಿಗೆ ವರ್ಷದ ಸರ್ವೋದಯ ಮಹಿಳೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ರಾಷ್ಟ್ರದಲ್ಲಿ ಮಹಿಳೆ ಸಮಾನತೆ ಹಕ್ಕು ಪಡೆಯಬೇಕು. ಅವಳು ಸ್ವತಂತ್ರವಾಗಿ ನಿರ್ಭೀತಿಯಿಂದ ಓಡಾಡುವ ಕಾಲ ಮತ್ತು ಸಮಾಜಮುಖಿ ಸೇವೆಯಲ್ಲಿ ಗುರುತಿಸಿ ಕೊಳ್ಳಬೇಕು ಎಂಬುದು ಗಾಂಧೀಜಿ ಕನಸಾಗಿತ್ತು. ಅವರ ಕನಸಿನಂತೆ ಈ ದಿನ ಎಲ್ಲಾ ಕ್ಷೇತ್ರದಲ್ಲಿಯೂ ಮಹಿಳೆಯರು ಸಬಲೀಕರಣಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪ್ರಶಸ್ತಿ ಸ್ವೀಕರಿಸಿದ ನಗರಸಭೆ ಪೌರ ಕಾರ್ಮಿಕರಾದ ಜಯಮ್ಮ ಮಾತನಾಡಿ, ನನ್ನಂತಹ ಮಹಿಳೆಯನ್ನು ಗುರುತಿಸಿ ಸನ್ಮಾನಿಸುತ್ತಿರುವುದು ನಾನು ಸನ್ಮಾನ ಪಡೆಯುವುದು ಮುಜುಗರವೆನಿಸುತ್ತಿದೆ. ದೇಶದ ಸ್ವಚ್ಛತೆಯಲ್ಲಿ ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಬಹುಮುಖ್ಯವಾಗಿರುತ್ತದೆ. ನಮ್ಮ ಮನೆ ಮತ್ತು ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟರೆ ರೋಗಮುಕ್ತ ಕುಟುಂಬಗಳಾಗಿ ಬಾಳಬಹುದು. ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಚಂದ್ರಪ್ಪ ಪುಟ್ಟ ಕಾಮಣ್ಣ , ರೂಪಶ್ರೀ, ಶೋಭಾ ಜಯದೇವ್ , ರಾಜಣ್ಣ, ಎಸ್. ಜಯಣ್ಣ, ಸ್ವರ್ಣಗೌರಮ್ಮ, ನಿರ್ಮಲ ಶಶಿರೇಖಾ, ನಿರ್ಮಲ ಓಂಕಾರಮೂರ್ತಿ, ಕಾತ್ಯಾಯಿನಿ. ಶಿವಗಂಗಪ್ಪ ಮರುಳಪ್ಪ. ಕುಮಾರಯ್ಯ ಎಚ್.ಎಸ್. ಮಂಜಪ್ಪ. ಮುಕ್ತಾ ತಿಪ್ಪೇಶ್ ಇತರರಿದ್ದರು.