ಸಾರಾಂಶ
ನರಸಿಂಹರಾಜಪುರ : ಮಹಿಳೆಯರು ತಾಳ್ಮೆ ಹಾಗೂ ಬುದ್ದಿವಂತಿಕೆಯಿಂದ ಸಂಸಾರ ನಿಭಾಯಿಸಲು ಸಾಕಷ್ಟು ಅವಕಾಶವಿದೆ ಎಂದು ಡಿಸಿಎಂಸಿ ಕಾಲೇಜು ಉಪನ್ಯಾಸಕಿ ಮಧುರ ಮಂಜುನಾಥ್ ಸಲಹೆ ನೀಡಿದರು.
ಶುಕ್ರವಾರ ಸೀಗುವಾನಿ ಸಮುದಾಯಭವನದಲ್ಲಿ ಧ.ಗ್ರಾ.ಯೋಜನೆ ಬಿ.ಎಚ್.ಕೈಮರ ವಲಯದ ಶಾಂತಿ ಜ್ಞಾನ ವಿಕಾಸ ಕೇಂದ್ರದಲ್ಲಿ ಮಹಿಳೆಯರಿಗೆ ಸ್ತ್ರೀ ಸಬಲೀಕರಣದ ಬಗ್ಗೆ ಮಾಹಿತಿ ನೀಡಿ, ಸಮಯ ಸಿಕ್ಕಾಗ ಮಹಿಳೆಯರು ಮಕ್ಕಳೊಂದಿಗೆ ಕುಳಿತು ಸಂಸಾರದ ಕಷ್ಟ ಸುಖ ಗಳನ್ನು ಹಂಚಿಕೊಳ್ಳಬೇಕು. ಮಕ್ಕಳಿಗೆ ಮೊದಲು ಮನೆಯಲ್ಲೇ ಸಂಸ್ಕಾರ ನೀಡಬೇಕು. ಟಿ.ವಿ.ಯಲ್ಲಿ ಬರುವ ಧಾರಾವಾಹಿಗಳಿಗೂ ನಿಜ ಜೀವನಕ್ಕೂ ತಂಬಾ ವ್ಯತ್ಯಾಸವಿದೆ. ಆದ್ದರಿಂದ ಮಹಿಳೆಯರು ಟಿವಿ ಹಾಗೂ ಮೊಬೈಲ್ ಬಳಕೆ ಕಡಿಮೆ ಮಾಡಬೇಕು. ಮಹಿಳೆಯರು ತಮಗೆ ಸಮಯ ಸಿಗುತ್ತಿಲ್ಲ ಎನ್ನುತ್ತಾರೆ. ಅವರ 24 ಗಂಟೆ ಸಮಯದಲ್ಲಿ ಟಿವಿ ಹಾಗೂ ಮೊಬೈಲ್ ಬಳಕೆಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ ಎಂಬುದು ಸತ್ಯವಾದ ವಿಚಾರ ಎಂದರು.
ಮುಖ್ಯ ಅತಿಥಿಯಾಗಿದ್ದ ಧ.ಗ್ರಾ.ಯೋಜನೆ ಕೊಪ್ಪ ವಲಯ ಮೇಲ್ವೀಚಾರಕ ರಾಘವೇಂದ್ರ ಮಾತನಾಡಿ, ಧರ್ಮಸ್ಥಳದ ಹೇಮಾವತಿ ಅಮ್ಮನವರ ಕನಸಿನ ಕೂಸಾದ ಮಹಿಳಾ ಜ್ಞಾನ ವಿಕಾಸ ಕೇಂದ್ರ ಇಂದು ರಾಜ್ಯದ ಎಲ್ಲಾ ಕಡೆ ಪಸರಿಸಿದೆ. ಇಂತಹ ಸಭೆಯಲ್ಲಿ ಎಲ್ಲಾ ಮಹಿಳೆ ಯರು ಒಟ್ಟಾಗಿ ಸೇರುವುದರಿಂದ ಮಹಿಳೆಯರಲ್ಲಿ ಜ್ಞಾನ ಹೆಚ್ಚಾಗಲಿದೆ. ಮಹಿಳಾ ಜ್ಞಾನ ವಿಕಾಸ ಕೇಂದ್ರದಲ್ಲಿ ಶಿಕ್ಷಣ, ಸ್ವಾವಲಂಬನೆ, ಆರೋಗ್ಯ, ಸ್ವ ಉದ್ಯೋಗದ ಮಾಹಿತಿ ಸಿಗಲಿದೆ. ಮಹಿಳೆಯರು ಇದರ ಪ್ರಯೋಜನ ಪಡೆಯಬೇಕು ಎಂದು ಕರೆ ನೀಡಿದರು.
ಸಂಘದ ಹಿರಿಯ ಸದಸ್ಯೆ ನಳಿನಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಕೊಪ್ಪ, ನರಸಿಂಹರಾಜಪುರ ತಾಲೂಕಿನ ಸಮನ್ವಯಾಧಿಕಾರಿ ಉಷಾ, ಸೇವಾ ಪ್ರತಿನಿಧಿ ಅಶ್ವಿನಿ, ಉಷಾ, ಪ್ರಭಾವತಿ, ನಾಗರತ್ನ ಇದ್ದರು.