ಕುಟುಂಬ ವ್ಯವಸ್ಥೆಯನ್ನು ಸಮರ್ಥವಾಗಿ ನಿರ್ವಹಿಸುವ ಮಹಿಳೆ ಸಾಮಾಜಿಕ ಹೊಣೆಗಾರಿಕೆಯನ್ನು ಅರಿತು ಪೂರ್ಣ ಆತ್ಮವಿಶ್ವಾಸದೊಂದಿಗೆ ಸಮಾಜದ ಮುಖ್ಯವಾಹಿನಿಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವಂತಾಗಬೇಕು ಎಂದು ತೀರ್ಥಹಳ್ಳಿ ತಾಪಂ ಇಒ ಎಂ. ಶೈಲಾ ಹೇಳಿದರು.

ತೀರ್ಥಹಳ್ಳಿ: ಕುಟುಂಬ ವ್ಯವಸ್ಥೆಯನ್ನು ಸಮರ್ಥವಾಗಿ ನಿರ್ವಹಿಸುವ ಮಹಿಳೆ ಸಾಮಾಜಿಕ ಹೊಣೆಗಾರಿಕೆಯನ್ನು ಅರಿತು ಪೂರ್ಣ ಆತ್ಮವಿಶ್ವಾಸದೊಂದಿಗೆ ಸಮಾಜದ ಮುಖ್ಯವಾಹಿನಿಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವಂತಾಗಬೇಕು ಎಂದು ತೀರ್ಥಹಳ್ಳಿ ತಾಪಂ ಇಒ ಎಂ. ಶೈಲಾ ಹೇಳಿದರು.

ತೀರ್ಥಹಳ್ಳಿ ತುಂಗಾ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಒಂದು ದೇಶದ ಪ್ರಗತಿಯಲ್ಲಿ ಆ ದೇಶದ ಮಹಿಳೆಯರ ಪಾತ್ರವೂ ನಿರ್ಣಾಯಕವಾಗಿದೆ. ಹಾಗೂ ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯ ಆಧಾರದ ಮೇಲೆಯೇ ನಿರ್ಧಾರವಾಗುತ್ತದೆ. ಕನಸುಗಳಿಲ್ಲದ ಹಾದಿಯಲ್ಲಿ ನಡೆಯುವುದು ಅಸಾಧ್ಯ. ಕುಟುಂಬ ವ್ಯವಸ್ಥೆಯನ್ನು ಸಮರ್ಥವಾಗಿ ನಿರ್ವಹಿಸುವ ಮಹಿಳೆಗೆ ಎಂದಿಗೂ ಹಿಂಜರಿಕೆ ಸಲ್ಲದು. ಶಿಕ್ಷಕಿಯಾಗಿದ್ದ ತಾವು ಆತ್ಮವಿಶ್ವಾಸದಿಂದ ಕೆಎಎಸ್ ಪದವಿ ಗಳಿಸಿದ ತಮ್ಮ ಜೀವನಾನುಭವವನ್ನು ಹಂಚಿಕೊಂಡರು.

ಜೀವನದಲ್ಲಿ ಎದುರಾಗುವ ಸೋಲು ಸಾವಲ್ಲ. ಅದನ್ನು ಆತ್ಮ ವಿಶ್ವಾಸ ಮತ್ತು ದೃಢ ಸಂಕಲ್ಪದಿಂದ ಎದುರಿಸಿದಲ್ಲಿ ಮಾತ್ರ ಗುರಿ ತಲುಪಲು ಸಾಧ್ಯ. ದೀಪಗಳಿಲ್ಲದ ಹಾದಿಯಲ್ಲಿ ಸಾಗಬಹುದು ಆದರೆ ಆತ್ಮವಿಶ್ವಾಸ ಮತ್ತು ಇಚ್ಚಾಶಕ್ತಿಯ ಕೊರತೆ ಹೊಂದಬಾರದು. ಮಹಿಳಾ ಹಕ್ಕುಗಳಿಗೋಸ್ಕರ ಅನೇಕ ಮಹಾನುಭಾವರು ಹೋರಾಡಿದ್ದಾರೆ. ಅವರಲ್ಲಿ ಪ್ರಮುಖರಾಗಿರುವ ಡಾ. ಬಿ. ಆರ್ ಅಂಬೇಡ್ಕರ್, ಜ್ಯೋತಿಬಾಪುಲೆಯವರ ದೂರದೃಷ್ಠಿ ಚಿಂತನೆಗಳು ಸರ್ವಕಾಲಿಕವಾಗಿದೆ ಎಂದು ಹೇಳಿದರು. ಗಾಯಕಿ ಎಚ್.ಎಸ್.ಉಷಾ ಅತಿಥಿಯಾಗಿದ್ದರು.

ತುಂಗಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಂ.ಎನ್.ರಮೇಶ್, ಕಾರ್ಯದರ್ಶಿ ಡಾ.ಬಿ.ಗಣಪತಿ, ಸದಸ್ಯೆ ಪ್ರೆಸಿಲ್ಲಾ ಪಿಂಟೊ, ಪ್ರಾಂಶುಪಾಲ ಡಾ. ಆರ್. ಕುಮಾರಸ್ವಾಮಿ, ಪ್ರಸನ್ನ ಕೆ. ಎಲ್. ಐಕ್ಯೂಎಸಿ ಸಂಚಾಲಕ ಡಾ. ನಾಗರಾಜ ಎಂ. ಮಹಿಳಾ ಸಬಲೀಕರಣ ಘಟಕದ ಸಂಚಾಲಕಿ ಅರ್ಚನಾ ಕೆ.ಯು. ಉಪನ್ಯಾಸಕಿ ನವ್ಯ ವಿ ರಾವ್ ಇದ್ದರು.