ವಿಶ್ವಗುರು ಬಸವಣ್ಣರ ವಚನಗಳು ಇಂದಿಗೂ ಪ್ರಸ್ತುತ: ಎಸ್.ಚಂದ್ರಪಾಟೀಲ್

| Published : May 10 2024, 11:47 PM IST

ವಿಶ್ವಗುರು ಬಸವಣ್ಣರ ವಚನಗಳು ಇಂದಿಗೂ ಪ್ರಸ್ತುತ: ಎಸ್.ಚಂದ್ರಪಾಟೀಲ್
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವಗುರು ಬಸವಣ್ಣನವರು ತಮ್ಮ ವಚನಗಳ ಮೂಲಕ ಮನುಷ್ಯ ಹೇಗೆ ಬದುಕಬೇಕು, ಮಾನವೀಯ ಮೌಲ್ಯಗಳನ್ನು ಯಾವ ರೀತಿ ಬೆಳೆಸಿಕೊಳ್ಳಬೇಕು ಎಂಬುವುದರ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಆಸ್ಪೃಶ್ಯತೆ, ಅಸಮಾನತೆಯ ವಿರುದ್ಧ ಹೋರಾಟ ಮಾಡಿ ಸಮಾನತೆಗಾಗಿ ಶ್ರಮಿಸಿದ ಮಹಾ ಪುರುಷರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿ ಬರೆದ ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಚಂದ್ರಪಾಟೀಲ್ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತದಿಂದ ನಡೆದ ವಿಶ್ವಗುರು ಜಗಜ್ಯೋತಿ ಬಸವಣ್ಣ ಹಾಗೂ ಹೇಮರೆಡ್ಡಿ ಮಲ್ಲಮ್ಮನವರ ಜಯಂತಿಯಲ್ಲಿ ಮಾತನಾಡಿ, ಬಸವಣ್ಣನವರ ವಚನದಲ್ಲಿನ ಸಾರಂಶವನ್ನು ಜೀವನದಲ್ಲಿ ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದರು.

ಬಸವಣ್ಣನವರು ತಮ್ಮ ವಚನಗಳ ಮೂಲಕ ಮನುಷ್ಯ ಹೇಗೆ ಬದುಕಬೇಕು, ಮಾನವೀಯ ಮೌಲ್ಯಗಳನ್ನು ಯಾವ ರೀತಿ ಬೆಳೆಸಿಕೊಳ್ಳಬೇಕು ಎಂಬುವುದರ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಆಸ್ಪೃಶ್ಯತೆ, ಅಸಮಾನತೆಯ ವಿರುದ್ಧ ಹೋರಾಟ ಮಾಡಿ ಸಮಾನತೆಗಾಗಿ ಶ್ರಮಿಸಿದ ಮಹಾ ಪುರುಷರಾಗಿದ್ದಾರೆಂದು ಹೇಳಿದರು.

ನನ್ನ ಅಕ್ಕನಿಗೆ ಹಾಕದ ಜನಿವಾರ ನನಗೂ ಬೇಡ ಎನ್ನುವ ಮೂಲಕ ಮಹಿಳೆಯರಿಗೂ ಸಮಾನತೆ ನೀಡಬೇಕೆಂದು ತಮ್ಮ ಮನೆಯಿಂದಲೇ ಹೋರಾಟ ಆರಂಭಿಸಿದರು. ಟಿವಿ ಮೊಬೈಲ್ ಇಲ್ಲದ ಯುಗದಲ್ಲಿ ಜನರಿಗೆ ಅರ್ಥವಾಗುವಂತಹ ಸರಳ ವಚನದದಿಂದ ಜನರಿಗೆ ಅರಿವು ಮೂಡಿಸಿ ಕಾಯಕವೇ ಕೈಲಾಸ ಎಂಬ ವಚನದ ಸಾರಂಶವನ್ನು ಹೇಳುತ್ತಾ ತಾವು ಮಾಡುವ ಕೆಲಸದಲ್ಲಿಯೇ ದೇವರನ್ನು ಕಾಣಬಹುದು ಎನ್ನುವುದನ್ನು ಜನರಿಗೆ ಅರ್ಥ ಮಾಡಿಸುವಲ್ಲಿ ಯಶಸ್ವಿ ಕಂಡ್ಡಿದ್ದರು ಎಂದು ಸ್ಮರಿಸಿದರು.

ಗ್ರೇಡ್-2 ತಹಸೀಲ್ದಾರ್ ಬಿ.ವಿ.ಕುಮಾರ್ ಮಾತನಾಡಿ, ಚುನಾವಣಾ ಮಾದರಿ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಬಸವ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅದ್ಧೂರಿಯಾಗಿ ಆಚರಿಸಲಾಗುವುದು ಎಂದರು.

ಪಟ್ಟಣದ ಸಾರಿಗೆ ಬಸ್ ನಿಲ್ದಾಣ ಮುಂಭಾಗದ ವೃತ್ತವನ್ನು ಬಸವ ವೃತ್ತ ಎಂದು ನಾಮಕರಣ ಮಾಡುವ ಸಂಬಂಧ ಮೇಲ್ಪಟ್ಟದ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಕಸಾಪ ತಾಲೂಕು ಅಧ್ಯಕ್ಷ ಚೇತನ್, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ನಾಗರಾಜು ಸೇರಿದಂತೆ ಇತರರು ಇದ್ದರು.