ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬ ಧೋರಣೆ ಖಂಡಿಸಿ ಹಾಗೂ ರಸ್ತೆಯನ್ನು ಶೀಘ್ರ ಪೂರ್ಣಗೊಳಿಸಿ ಸರ್ಕಾರಿ ಸಾರಿಗೆ ಬಸ್ ಸಂಚಾರ ಪುನರಾರಂಭಿಸಲು ಆಗ್ರಹಿಸಿ ಕರಾವಳಿ ಕನ್ನಡ ಸಂಘದೊಂದಿಗೆ ಇತರ ಸಮಾನ ಮನಸ್ಕ ಸಂಘಟನೆಗಳ ಸಹಯೋಗದಲ್ಲಿ ಮಂಗಳವಾರ ಕತಗಾಲದಲ್ಲಿ ರಸ್ತೆ ಸಂಚಾರ ತಡೆದು ಪ್ರತಿಭಟಿಸಲಾಯಿತು.
ರಸ್ತೆ ನಿರ್ಮಾಣ ಶೀಘ್ರ ಪೂರ್ಣಗೊಳಿಸಿ ಸರ್ಕಾರಿ ಸಾರಿಗೆ ಬಸ್ ಸಂಚಾರ ಪುನರಾರಂಭಿಸಲು ಆಗ್ರಹ
ಕನ್ನಡಪ್ರಭ ವಾರ್ತೆ ಕುಮಟಾಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬ ಧೋರಣೆ ಖಂಡಿಸಿ ಹಾಗೂ ರಸ್ತೆಯನ್ನು ಶೀಘ್ರ ಪೂರ್ಣಗೊಳಿಸಿ ಸರ್ಕಾರಿ ಸಾರಿಗೆ ಬಸ್ ಸಂಚಾರ ಪುನರಾರಂಭಿಸಲು ಆಗ್ರಹಿಸಿ ಕರಾವಳಿ ಕನ್ನಡ ಸಂಘದೊಂದಿಗೆ ಇತರ ಸಮಾನ ಮನಸ್ಕ ಸಂಘಟನೆಗಳ ಸಹಯೋಗದಲ್ಲಿ ಮಂಗಳವಾರ ಕತಗಾಲದಲ್ಲಿ ರಸ್ತೆ ಸಂಚಾರ ತಡೆದು ಪ್ರತಿಭಟಿಸಲಾಯಿತು.ಸ್ಥಳಕ್ಕಾಗಮಿಸಿದ ಸಿಪಿಐ ಯೋಗೇಶ ಕೆ.ಎಂ., ಪಿಎಸ್ಐ ರವಿ ಗುಡ್ಡಿ ಇತರರು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ, ರಸ್ತೆ ತಡೆ ಹಿಂಪಡೆಯುವಂತೆ ಮನವೊಲಿಸಲು ಪ್ರಯತ್ನಿಸಿದರು. ಈ ವೇಳೆ ಮಾತನಾಡಿದ ಭಾಸ್ಕರ ಪಟಗಾರ, ಸಾಗರಮಾಲಾ ಯೋಜನೆಯಡಿ ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿಧಾನಗತಿಯಿಂದ ಸಾಗುತ್ತಿದೆ. ಕಂಪನಿಯು ಜಿಲ್ಲಾಡಳಿತದ ಯಾವ ಅನುಮತಿಯನ್ನೂ ಪಡೆಯದೇ ಹೆದ್ದಾರಿ ಬಂದ್ ಮಾಡಿಕೊಂಡು ಕೂತಿದೆ. ಇತ್ತ ಕಾಮಗಾರಿಯನ್ನೂ ಪೂರ್ಣಗೊಳಿಸದೆ, ಕೆಎಸ್ಆರ್ಟಿಸಿ ಬಸ್ ಸಂಚಾರವನ್ನೂ ಆರಂಭಿಸದೆ ಜಿಲ್ಲೆಯ ಜನರ ಜತೆ ಚೆಲ್ಲಾಟವಾಡುತ್ತಿದೆ. ಕೊಟ್ಟ ಮಾತಿನಂತೆ ಕಾಮಗಾರಿ ಪೂರ್ಣಗೊಂಡಿಲ್ಲ. ಹೀಗಾಗಿ ಬಸ್ ಸಂಚಾರವನ್ನು ಕೂಡಲೇ ಆರಂಭಿಸಬೇಕು. ಇಲ್ಲವೆ ಹೆದ್ದಾರಿಯಲ್ಲಿ ಓಡಾಡುವ ಎಲ್ಲಾ ವಾಹನಗಳಿಗೂ ನಿರ್ಬಂಧ ಹೇರಬೇಕು. ಅಲ್ಲಿಯವರೆಗೆ ಹೋರಾಟ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು.ಈ ವೇಳೆ ಭಾಸ್ಕರ ಪಟಗಾರ ಅವರೊಂದಿಗೆ ದನಿಗೂಡಿಸಿದ ಮಾನವ ಹಕ್ಕು ಸಂಘಟನೆಯ ಮಹೇಂದ್ರ ನಾಯ್ಕ, ವಕೀಲ ವಿಕ್ರಂ ನಾಯ್ಕ ಇತರರು, ಕಾಮಗಾರಿಯಲ್ಲಿ ಅತಿ ವಿಳಂಬದಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದ್ದು ಇದಕ್ಕೆ ಕಾರಣವಾಗಿರುವ ಗುತ್ತಿಗೆ ಪಡೆದವರ ವಿರುದ್ಧ ಪ್ರಕರಣ ದಾಖಲಿಸಬೇಕು. ಈ ರಸ್ತೆಯಲ್ಲಿ ಖಾಸಗಿ ಬಸ್ಗಳು, ಟಿಪ್ಪರ್ಗಳು, ಮರಳು ತುಂಬಿದ ಲಾರಿಗಳು ಯಾವ ಅಡೆತಡೆ ಇಲ್ಲದೆ ಸಂಚರಿಸುತ್ತಿವೆ. ಆದರೆ ಸರ್ಕಾರಿ ಸಾರಿಗೆ ಬಸ್ಗಳಿಗೆ ಮಾತ್ರ ತಡೆಯೊಡ್ಡಲಾಗಿದೆ. ರಸ್ತೆ ಕಾಮಗಾರಿ ನಿಗದಿತ ಸಮಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಹುಸಿಯಾಗಿದೆ. ಗುತ್ತಿಗೆ ಪಡೆದ ಕಂಪನಿಯ ಅಧಿಕಾರಿ ಹಾಗೂ ತಹಸೀಲ್ದಾರ್ ಅವರನ್ನು ಸ್ಥಳಕ್ಕೆ ಕರೆಯಿಸಿ ಎಂದು ಆಗ್ರಹಿಸಿದರು. ಬಳಿಕ ಸ್ಥಳಕ್ಕಾಗಮಿಸಿದ ತಹಸೀಲ್ದಾರ ಶ್ರೀಕೃಷ್ಣ ಕಾಮಕರ್, ಆರ್ಎನ್ಎಸ್ ಕಂಪನಿಯ ಸಿಇಒ ನಿತೀಶ ಶೆಟ್ಟಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ನಿತೇಶ ಶೆಟ್ಟಿ ಪ್ರತಿಕ್ರಿಯಿಸಿ ಒಟ್ಟೂ ೫ ಕಿಮೀ ಕಾಮಗಾರಿ ಮಾತ್ರ ಬಾಕಿ ಇದೆ. ೨೦ ದಿನದಲ್ಲಿ ಘಟ್ಟದ ಭಾಗದಲ್ಲಿನ ಕಾಮಗಾರಿ ಪೂರ್ಣಗೊಳಿಸುತ್ತೇವೆ. ಏಪ್ರಿಲ್ ಅಂತ್ಯದೊಳಗೆ ಎಲ್ಲಾ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದು ಸ್ಪಷ್ಟಪಡಿಸಿದರು. ಇದರೊಂದಿಗೆ ಪ್ರತಿಭಟನೆ ಹಿಂಪಡೆದು ಸಾರ್ವಜನಿಕರ ಅನುಕೂಲದ ದೃಷ್ಟಿಯಿಂದ ಶೀಘ್ರ ಸಾರಿಗೆ ಬಸ್ ಓಡಾಟಕ್ಕೆ ಅವಕಾಶ ನೀಡಬೇಕು ಎಂಬ ಮನವಿಯನ್ನು ತಹಸೀಲ್ದಾರ್ ಶ್ರೀಕೃಷ್ಣ ಕಾಮಕರ ಅವರಿಗೆ ಸಲ್ಲಿಸಲಾಯಿತು. ತಹಸೀಲ್ದಾರ್ ಶ್ರೀಕೃಷ್ಣ ಕಾಮಕರ್ ಪ್ರತಿಕ್ರಿಯಿಸಿ, ಕುಮಟಾ-ಶಿರಸಿ ಮಾರ್ಗದಲ್ಲಿ ಪ್ರತಿನಿತ್ಯ ಬೆಳಗ್ಗೆ-ಸಂಜೆ ೨ ಬಸ್ ಬಿಡುವಂತೆ ಸಾರ್ವಜನಿಕರ ಬೇಡಿಕೆಯ ಬಗ್ಗೆ ಶುಕ್ರವಾರ ಉಪವಿಭಾಗಾಧಿಕಾರಿ ಉಪಸ್ಥಿತಿಯನ್ವಯ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಬಹುದಾಗಿದೆ. ಘಟ್ಟದ ಭಾಗದಲ್ಲಿ ಮುಂದಿನ ೨೦ ದಿನದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆಯನ್ನು ಗುತ್ತಿಗೆ ಪಡೆದ ಕಂಪನಿ ನೀಡಿದ್ದು ಪರಿಸ್ಥಿತಿ ವಿಶ್ಲೇಷಿಸಿ ಬಸ್ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.ಪ್ರತಿಭಟನೆಯ ವೇಳೆ ಮಾನವ ಹಕ್ಕು ಸಂಘಟನೆಯ ಮಹೇಂದ್ರ ನಾಯ್ಕ, ಕೃಷ್ಣ ಗೌಡ ದೀವಗಿ, ಎಂ.ಜಿ. ಭಟ್ಟ, ಗಜು ನಾಯ್ಕ, ಜಿಪಂ ಮಾಜಿ ಸದಸ್ಯ ಪ್ರದೀಪ ನಾಯಕ ದೇವರಬಾವಿ, ಮಂಜುನಾಥ ಎಲ್.ನಾಯ್ಕ, ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ರಾಜು ಮಾಸ್ತಿಹಳ್ಳ, ಜಿ.ಎನ್. ಗೌಡ ಹೊನ್ನಾವರ, ತಿಮ್ಮಪ್ಪ ಮುಕ್ರಿ, ಶಿವರಾಮ ಹರಿಕಾಂತ್, ಮಹ್ಮದ್ ಆಸೀಫ್, ಬಾಲಕೃಷ್ಣ ನಾಯ್ಕ, ಅಳ್ವೇಕೋಡಿ, ಸವಿತಾ ಆಗೇರ, ಇರ್ಷಾದ್ ಶೇಖ್ ಮಿರ್ಜಾನ್, ಪುಷ್ಪಾ ನಾಯ್ಕ ದೀವಗಿ, ಜಿ.ಜಿ. ಹೆಗಡೆ ಅಂತ್ರವಳ್ಳಿ, ರಾಘು ಅಂಬಿಗ, ದತ್ತು ಭಂಡಾರಿ ಇತರರಿದ್ದರು.