ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪ್ರಸ್ತುತ ಶಿಕ್ಷಣ ಪಡೆಯಲು ಹಲವು ಸೌಲಭ್ಯಗಳಿವೆ. ಅವುಗಳನ್ನು ಉಪಯೋಗಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರು ಕೆಲಸ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಸೀತಾರಾಮು ತಿಳಿಸಿದರು.ಪಟ್ಟಣದ ರಾಮದಾಸ್ ಹೋಟೆಲ್ ಸುಲೋಚನಮ್ಮ ಪಾರ್ಟಿಹಾಲ್ನಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಏರ್ಪಡಿಸಿದ್ದ ನೂತನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಾಗೂ ವರ್ಗಾವಣೆಗೊಂಡು ತಾಲೂಕಿಗೆ ಆಗಮಿಸಿದ ಶಿಕ್ಷಕರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶೈಕ್ಷಣಿಕವಾಗಿ ತಾಲೂಕು ಅಭಿವೃದ್ಧಿ ಸಾಧಿಸಲು ಇಲಾಖೆಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ನೀವು ಒಳ್ಳೆಯ ಹುಮ್ಮಸ್ಸಿನಿಂದ ನಿವೃತ್ತಿಯಾಗುವವರೆಗೂ ಉತ್ತಮವಾಗಿ ಕೆಲಸ ನಿರ್ವಹಿಸಿ ಎಂದರು.ಪದ್ಮೇಶ್ ನೇತೃತ್ವದ ತಂಡ ಶಿಕ್ಷಕರ ಸೇವೆ ಮಾಡಲು ಹಗಲಿರುಳು ಯಾವುದೇ ಪ್ರತಿಫಲಾಕ್ಷೆ ಇಲ್ಲದೇ ಕೆಲಸ ನಿರ್ವಹಿಸುತ್ತಿದೆ. ನಾವೆಲ್ಲರೂ ಉತ್ತಮ ಹವ್ಯಾಸ ಬೆಳೆಸಿಕೊಂಡು ಹೊಸ ಬದಲಾವಣೆ ತರಲು ಶ್ರಮಿಸೋಣ ಎಂದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಅಧ್ಯಕ್ಷ ಪದ್ಮೇಶ್ ಮಾತನಾಡಿ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎಲ್.ಎಸ್.ಧರ್ಮಪ್ಪ ಮಾತನಾಡಿದರು. ತಾಲೂಕಿಗೆ ವರ್ಗಾವಣೆಗೊಂಡು ಆಗಮಿಸಿದ ಹಾಗೂ ನೂತನವಾಗಿ ನೇಮಕವಾದ ಶಿಕ್ಷಕರನ್ನು ಸ್ಮರಣಿಕೆ ಹೂ ನೀಡಿ ಅಭಿನಂದಿಸಲಾಯಿತು.ಕಾರ್ಯಕ್ರಮದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಸಂಧ್ಯಾರಾಣಿ, ತಾಲೂಕು ಸಂಘದ ಕಾರ್ಯದರ್ಶಿ ಸಿ.ಟಿ.ಲಕ್ಷ್ಮಣಗೌಡ, ಕಸಾಪ ಅಧ್ಯಕ್ಷ ಪೂರ್ವಚಂದ್ರತೇಜಸ್ವಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಬಿ.ನಾಗರಾಜು, ಎಸ್ಸಿಎಸ್ಟಿ ನೌಕರರ ಸಂಘದ ಅಧ್ಯಕ್ಷ ಕಟ್ರಯೋಗೇಶ್, ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ದೊರೆಸ್ವಾಮಿ, ಎ.ಎಚ್.ಯೋಗೇಶ್, ಸಂಘಟನಾ ಕಾರ್ಯದರ್ಶಿ ಜಿ.ಎಸ್.ಮಂಜು. ಪದಾಧಿಕಾರಿಗಳಾದ ವಾಣಿ, ಪವಿತ್ರ, ಇಂದ್ರಾಣಿ, ಸುಧಾಮಣಿ, ಚಿಕ್ಕಸ್ವಾಮಿ, ರಾಮಕೃಷ್ಣೇಗೌಡ, ದೊರೆಸ್ವಾಮಿ, ಎಲ್.ಜೆ.ಸುರೇಶ್ ಇದ್ದರು.