ಸಾರಾಂಶ
7ನೇ ಸುತ್ತಿನ ಕಾಲು-ಬಾಯಿ ರೋಗ ಲಸಿಕಾ ಅಭಿಯಾನ ಏ.26ರಿಂದ ಜೂ.4ರವರೆಗೆ ನಡೆಯಲಿದೆ. ಈ ಲಸಿಕಾ ಅಭಿಯಾನ ಯಶಸ್ವಿಗೊಳಿಸಲು ಎಲ್ಲಾ ಪಶು ವೈದ್ಯಾಧಿಕಾರಿಗಳು ಶ್ರಮವಹಿಸಬೇಕು
ಕನ್ನಡ್ರಭ ವಾರ್ತೆ ದೇವರಹಿಪ್ಪರಗಿ
ತಾಲೂಕಿನಾದ್ಯಂತ 7ನೇ ಸುತ್ತಿನ ಕಾಲು-ಬಾಯಿ ರೋಗ ಲಸಿಕಾ ಅಭಿಯಾನ ಏ.26ರಿಂದ ಜೂ.4ರವರೆಗೆ ನಡೆಯಲಿದೆ. ಈ ಲಸಿಕಾ ಅಭಿಯಾನ ಯಶಸ್ವಿಗೊಳಿಸಲು ಎಲ್ಲಾ ಪಶು ವೈದ್ಯಾಧಿಕಾರಿಗಳು ಶ್ರಮವಹಿಸಬೇಕು ಎಂದು ತಹಸೀಲ್ದಾರ್ ಪ್ರಕಾಶ ಸಿಂದಗಿ ಸೂಚಿಸಿದರು.ಪಟ್ಟಣದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಕಚೇರಿಯಲ್ಲಿ ಗುರುವಾರ ನಡೆದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 7ನೇ ಸುತ್ತಿನ ಕಾಲು ಬಾಯಿ ರೋಗ ಲಸಿಕಾ ಅಭಿಯಾನದ ಪೂರ್ವ ಸಿದ್ಧತೆ ಕಾರ್ಯಕ್ರಮದ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮನೆ ಮನೆಗೆ ತೆರಳಿ ಜಾನುವಾರುಗಳಿಗೆ ಉಚಿತ ಲಸಿಕೆ ಅಭಿಯಾನ ಹಮ್ಮಿಕೊಂಡಿರುವ ಕುರಿತು ಸ್ಥಳೀಯ ಮಟ್ಟದಲ್ಲಿ ಸಾರ್ವಜನಿಕರಿಗೆ ಮುಂಚಿತವಾಗಿಯೇ ಮಾಹಿತಿ ನೀಡಬೇಕು ಎಂದರು. ಇದೇ ವೇಳೆ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 7ನೇ ಸುತ್ತಿನ ಕಾಲು ಬಾಯಿ ರೋಗ ಲಸಿಕಾ ಅಭಿಯಾನದ ಪೋಸ್ಟರ್ ಬಿಡುಗಡೆಗೊಳಿಸಿದರು.ದೇವರಹಿಪ್ಪರಗಿ ಪಶು ವೈದ್ಯಕೀಯ ಆಸ್ಪತ್ರೆಯ ಸಹಾಯಕ ನಿರ್ದೇಶಕರಾದ ಡಾ.ಬಿ.ಎಚ್.ಕನ್ನೂರ ಅವರ ಮಾತನಾಡಿ, ಲಸಿಕೆ ಕಾರ್ಯಕ್ರಮ ಅನುಷ್ಠಾನಕ್ಕಾಗಿ ತಾಲೂಕಿನಲ್ಲಿ ಲಸಿಕೆ ಲಭ್ಯವಿದೆ. ತಾಲೂಕಿನಲ್ಲಿ ಸುಮಾರು 12500 ಜಾನುವಾರಗಳಿದ್ದು, 21ಸಿಬ್ಬಂದಿ ತಂಡ ರಚಿಸಲಾಗಿದೆ, ಲಸಿಕೆ ಉಚಿತವಾಗಿ ನೀಡುವುದರಿಂದ ಈವರೆಗೆ ಯಾವುದೇ ಅಡ್ಡ ಪರಿಣಾಮ ತೊಂದರೆಯಾಗಿಲ್ಲ ಎಂದು ಲಸಿಕಾ ಅಭಿಯಾನದ ಕುರಿತು ವಿವರಿಸಿದರು.
ಲಸಿಕಾ ಕಾರ್ಯಕ್ರಮದ ಪೂರ್ವ ಸಿದ್ಧತೆ ಸಭೆ ನಂತರ 2024-25ನೇ ಸಾಲಿನ ವಾರ್ಷಿಕ ಕೆಡಿಪಿ ಸಭೆ ನಡೆಸಲಾಯಿತು.ಇದೇ ಸಂದರ್ಭದಲ್ಲಿ ಡಾ.ಪ್ರಶಾಂತ ತಳವಾರ,ಡಾ.ರಾಮನಗೌಡ ಪಾಟೀಲ,ಡಾ.ವಿದ್ಯಾಭೂಷಣ ಸೇರಿದಂತೆ ಪಶುಸಂಜೀವಿನಿ ವಾಹನದ ಅಧಿಕಾರಿ, ಸಿಬ್ಬಂದಿ ವರ್ಗ, ಇಲಾಖೆಯ ಸಿಬ್ಬಂದಿ ವರ್ಗ, ಪಶು ಸಖಿಯರು ಹಾಗೂ ಮೈತ್ರಿ ಕಾರ್ಯಕರ್ತರು ಉಪಸ್ಥಿತರಿದ್ದರು.