ಎಚ್ಐವಿ ಮತ್ತು ಏಡ್ಸ್ ಕಾಯಿಲೆ 40 ವರ್ಷಗಳಿಂದ ಮಾನವ ಜನಾಂಗವನ್ನು ಕಾಡುತ್ತಿದೆ. ಏಡ್ಸ್ ರೋಗವನ್ನು ಸಮಾಜದಿಂದ ಸಂಪೂರ್ಣವಾಗಿ ತೊಲಗಿಸಲು ಜಿಲ್ಲಾಮಟ್ಟದಿಂದ ತಾಲೂಕು ಹಾಗೂ ಗ್ರಾಮಮಟ್ಟದ ವರೆಗೆ ಏಡ್ಸ್ ನಿಯಂತ್ರಣ ಕಾರ್ಯಕ್ರಮ ವಿಸ್ತರಿಸಲಾಗಿದೆ.
ಧಾರವಾಡ:
ಏಡ್ಸ್ ರೋಗದ ಬಗ್ಗೆ ಭಯ ಬೇಡ. ಮುಂಜಾಗ್ರತೆ, ಜಾಗೃತಿ, ಅರಿವು ಅಗತ್ಯ. ಜಿಲ್ಲೆಯಲ್ಲಿ ಏಡ್ಸ್ ರೋಗಿಗಳ ಪ್ರಮಾಣ, ಹರಡುವಿಕೆ ಇಳಿಮುಖವಾಗಿದ್ದು, ಈಗ ಜಿಲ್ಲೆಯಲ್ಲಿ ಏಡ್ಸ್ ಪಾಜಿಟಿವಿಟಿ ದರ ಶೇ. 0.38 ರಷ್ಟಿದೆ. ಇದನ್ನು ಶೂನ್ಯಕ್ಕೆ ಇಳಿಸಿ, ಧಾರವಾಡ ಜಿಲ್ಲೆಯನ್ನು ಏಡ್ಸ್ ಮುಕ್ತ ಜಿಲ್ಲೆಯಾಗಿ ಮಾಡಲು ಎಲ್ಲರೂ ಶ್ರಮಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಎಚ್ಐವಿ ಮತ್ತು ಏಡ್ಸ್ ಕಾಯಿಲೆ 40 ವರ್ಷಗಳಿಂದ ಮಾನವ ಜನಾಂಗವನ್ನು ಕಾಡುತ್ತಿದೆ. ಏಡ್ಸ್ ರೋಗವನ್ನು ಸಮಾಜದಿಂದ ಸಂಪೂರ್ಣವಾಗಿ ತೊಲಗಿಸಲು ಜಿಲ್ಲಾಮಟ್ಟದಿಂದ ತಾಲೂಕು ಹಾಗೂ ಗ್ರಾಮಮಟ್ಟದ ವರೆಗೆ ಏಡ್ಸ್ ನಿಯಂತ್ರಣ ಕಾರ್ಯಕ್ರಮ ವಿಸ್ತರಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಸಮಗ್ರ ಆಪ್ತಸಮಾಲೋಚನಾ ಮತ್ತು ಪರೀಕ್ಷಾ ಕೇಂದ್ರ 11, ಎಫ್-ಐಸಿಟಿಸಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರ 32, ಪಿಪಿಪಿ ಕೇಂದ್ರ 1, ಪೂರ್ಣ ಪ್ರಮಾಣದ ಎಆರ್ಟಿ ಚಿಕಿತ್ಸಾ ಕೇಂದ್ರ 2, ಲೈಂಗಿಕ ಸಂಪರ್ಕದ ರೋಗಗಳ ಚಿಕಿತ್ಸಾ ಕೇಂದ್ರ 2, ರಕ್ತ ನಿಧಿ ಕೇಂದ್ರ 10, ಬೆಂಬಲ ಮತ್ತು ಆರೈಕೆ ಕೆಂದ್ರ ಸೇರಿ ವಿವಿಧ ಐದು ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಏಡ್ಸ್ ಮತ್ತು ಎಚ್ಐವಿ ಸೋಂಕಿತರಿಗೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಪರೀಕ್ಷೆ, ಉಚಿತ ಚಿಕಿತ್ಸೆ, ಉಚಿತ ಔಷಧಿ, ಆರೈಕೆ ನೀಡಲಾಗುತ್ತಿದೆ ಎಂಬ ಮಾಹಿತಿಯನ್ನು ದಿವ್ಯಪ್ರಭು ನೀಡಿದರು.ಸೋಂಕಿತ ಅನಾಥ ಮತ್ತು ಅಪಾಯದ ಅಂಚಿನಲ್ಲಿರುವ ಮಕ್ಕಳ ಆರೋಗ್ಯ ರಕ್ಷಣೆಗಾಗಿ ಅಗತ್ಯ ಕ್ರಮ ವಹಿಸಿದ್ದು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ವಿಶೇಷ ಪಾಲನಾ ಯೋಜನೆಯಡಿ ಈ ವರೆಗೆ 2,037 ಮಕ್ಕಳಿಗೆ ಸೌಲಭ್ಯ ನೀಡಲಾಗಿದೆ. ಎಚ್ಐವಿ, ಏಡ್ಸ್ನೊಂದಿಗೆ ಬದಕುತ್ತಿರುವ 371 ಜನರಿಗೆ ಅನ್ನ ಅಂತ್ಯೋದಯ ಕಾರ್ಯಕ್ರಮದಲ್ಲಿ ನೆರವು ನೀಡಲಾಗಿದ್ದು, ರಾಜೀವ ಗಾಂಧಿ ಗ್ರಾಮೀಣ ವಸತಿ ಯೋಜನೆಯಡಿ 476 ಜನರಿಗೆ ವಸತಿ ಸೌಲಭ್ಯ ನೀಡಲು ಫಲಾನುಭವಿಗಳಾಗಿ ಆಯ್ಕೆ ಮಾಡಲಾಗಿದೆ. ವೃತಿ ಕೌಶಲ್ಯ ಸೇರಿದಂತೆ ವಿವಿಧ ಸರ್ಕಾರಿ ಸೌಲಭ್ಯ ಪೂರೈಸಲಾಗುತ್ತಿದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಪಿ.ಎಫ್. ದೊಡ್ಡಮನಿ ಮಾತನಾಡಿ, ಎಚ್ಐವಿ, ಏಡ್ಸ್ ಸೋಂಕಿತರಿಗೆ, ಬಾಧಿತರಿಗೆ ಸಮಾಜದಲ್ಲಿ ಮಾನಸಿಕ ಬೆಂಬಲ ಸೀಗಬೇಕು. ಅಗತ್ಯ ಚಿಕಿತ್ಸೆ ದೊರಕಿಸಲು ನೇರವಾಗಬೇಕು. ಕಾನೂನು ಸೇವೆಗಳ ಪ್ರಾಧಿಕಾರದಿಂದ ಎಚ್ಐವಿ ಬಾಧಿತರಿಗೆ ಉಚಿತ ಕಾನೂನು ಅರಿವು-ನೆರವು ನೀಡಲಾಗುತ್ತದೆ ಎಂದು ಹೇಳಿದರು.ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಂ. ಹೊನಕೇರಿ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ರವೀಂದ್ರ ಬೋವೆರ ಸ್ವಾಗತಿಸಿದರು. ಬಿ.ಆರ್. ಪತ್ತಾರ ನಿರೂಪಿಸಿದರು. ಜಾನಪದ ಕಲಾವಿದ ಶಂಭಯ್ಯ ಹಿರೇಮಠ ನೇತೃತ್ವದ ಸಿವೈಸಿಡಿ ಜಾನಪದ ಕಲಾ ತಂಡದಿಂದ ಜಾನಪದ ರೂಪಕ ಪ್ರದರ್ಶಿಸಲಾಯಿತು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ ಇದ್ದರು. ಏಡ್ಸ್ ಕುರಿತು ಜನಜಾಗೃತಿ ಜಾಥಾನಡಿಗೆಯು ಡಿಎಚ್ಒ ಕಚೇರಿಯಿಂದ ಆರಂಭಗೊಂಡು, ಹಳೆ ಬಸ್ ನಿಲ್ದಾಣ, ವಿವೇಕಾನಂದ ಸರ್ಕಲ್, ಆಲೂರು ವೆಂಕಟರಾವ್ ವೃತ್ತ ಮೂಲಕ ಡಿಎಚ್ಒ ಕಚೇರಿಗೆ ತಲುಪಿತು.