ಮಹಾತ್ಮ ಗಾಂಧಿ ಹೆಸರಿರುವ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಹೆಸರನ್ನು ರಾಜಕೀಯ ಕಾರಣಕ್ಕಾಗಿ ವಿಕಸಿತ ಭಾರತದ ಹೆಸರಿನಲ್ಲಿ ಬದಲಾವಣೆಯನ್ನು ತರುವ ಮೂಲಕ ಕೇಂದ್ರ ಸರಕಾರ, ಸಂವಿಧಾನವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಆರೋಪಿಸಿದರು.

ಕನ್ನಡಪ್ರಭವಾರ್ತೆ ಜಗಳೂರು

ಮಹಾತ್ಮ ಗಾಂಧಿ ಹೆಸರಿರುವ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಹೆಸರನ್ನು ರಾಜಕೀಯ ಕಾರಣಕ್ಕಾಗಿ ವಿಕಸಿತ ಭಾರತದ ಹೆಸರಿನಲ್ಲಿ ಬದಲಾವಣೆಯನ್ನು ತರುವ ಮೂಲಕ ಕೇಂದ್ರ ಸರಕಾರ, ಸಂವಿಧಾನವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಆರೋಪಿಸಿದರು.

ಪಟ್ಟಣದ ಬಯಲು ರಂಗಮಂದಿರದ ಆವರಣದಲ್ಲಿ ಸೋಮವಾರ 77ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ಮಾತನಾಡಿದರು.

ಕಾಂಗ್ರೆಸ್ ಪಕ್ಷ ಇಲ್ಲದಿದ್ದರೆ ದೇಶಕ್ಕೆ ಸ್ವಾತಂತ್ರ್ಯ ಲಭಿಸುವುದು ಕಷ್ಟವಾಗುತ್ತಿತ್ತು. ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಇತಿಹಾಸವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ 5 ಗ್ಯಾರಂಟಿಗಳನ್ನು ಘೋಷಿಸುವ ಮೂಲಕ ಸಾಮಾಜಿಕ ನ್ಯಾಯ ನೀಡಿದ್ದಾರೆ. ದೇಶದ ಪ್ರಗತಿಗೆ ಕಾಂಗ್ರೆಸ್ ಕೊಡುಗೆ ಅನನ್ಯವಾದುದು ಎಂದು ಘಂಟಾ ಘೋಷವಾಗಿ ಹೆಮ್ಮೆಯಿಂದ ಹೇಳುತ್ತೇನೆ. ಹಸಿವನಿಂದ ಸಾಯಬಾರದು ಎಂದು ಕಾಂಗ್ರೆಸ್ ಪಕ್ಷ ಕನಿಷ್ಠ ಮಾನವ ದಿನಗಳ ಉದ್ಯೋಗ ಖಾತ್ರಿ ಜಾರಿಗೆ ತಂದಿತ್ತು ಎಂದರು.

ಪಟ್ಟಣದ ಮುಖ್ಯರಸ್ತೆ ಅಗಲೀಕರಣ, ಪಟ್ಟಣ ಸಂಪರ್ಕಿಸುವ ನಾಲ್ಕು ಕಡೆ ಸುಸಜ್ಜಿತ ರಸ್ತೆ ನಿರ್ಮಾಣವಾಗುತ್ತಿದೆ. 50 ಕೋಟಿ ರೂ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಕೆಲ ದಿನಗಳಲ್ಲಿ ಭೂಮಿ ಪೂಜೆ, ಕೆಎಸ್ಆರ್ಟಿಸಿ ಡಿಪೋಗೆ ಪ್ರಸ್ತಾವನೆ, ಕ್ರೀಡಾಂಗಣಕ್ಕೆ 2 ಕೋಟಿ ರೂ ಹಣ ಬಿಡುಗಡೆಯಾಗಿದೆ. ಜಗಳೂರು ಕೆರೆ ಸೇರಿ ವಿವಿಧ ಕೆರೆಗಳ ಅಭಿವೃದ್ಧಿಗೆ 10 ಕೋಟಿ ರು. ಸೇರಿದಂತೆ ನನ್ನ ಮೂರು ವರ್ಷಗಳ ಅವಧಿಯಲ್ಲಿ ಸಾಮಾಜಿಕವಾಗಿ, ಆರ್ಥಿಕ ಮತ್ತು ಶೈಕ್ಷಣೀಕವಾಗಿ ಸಮಗ್ರವಾಗಿ ಅಭಿವೃದ್ಧಿ ಮಾಡಿದ ತೃಪ್ತಿಯಿದೆ ಎಂದರು.

ಧ್ವಜಾರೋಹಣ ನೆರವೇರಿಸಿ ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ ಗಣರಾಜ್ಯೋತ್ಸವದ ಭಾಷಣ ಮಾಡಿದರು. ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಇನ್‌ಸ್ಪೆಕ್ಟರ್ ಬಿ.ಎಂ.ಸಿದ್ರಾಮಯ್ಯ, ನೌಕರರ ಸಂಘದ ತಾ.ಅಧ್ಯಕ್ಷ ಎ.ಎಲ್.ತಿಪ್ಪೇಸ್ವಾಮಿ, ವಕೀಲರ ಸಂಘದ ಅಧ್ಯಕ್ಷ ಟಿ.ಬಸವರಾಜ್, ಬಿಇಒ ಈ.ಹಾಲಮೂರ್ತಿ, ಪಿಎಲ್ಡಿ ಬ್ಯಾಂಕ್ ಅದ್ಯಕ್ಷ ಹಾಲಮೂರ್ತಿ ಮಾತನಾಡಿದರು.

ಧ್ವಜಾರೋಹಣಕ್ಕೂ ಮುನ್ನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಥಸಂಚಲನದಲ್ಲಿ ಶಾಸಕ ಬಿ.ದೇವೇಂದ್ರಪ್ಪ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದರು. ಶಾಕಸ ಬಿ.ದೇವೇಂದ್ರಪ್ಪ ತೆರೆದ ವಾಹನದಲ್ಲಿ ಸಂಚರಿಸಿ ಶಾಲಾ ಮಕ್ಕಳಿಗೆ ಧ್ವಜವಂದನೆ ನೆರವೇರಿಸಿದರು.

ರಾಷ್ಟ್ರಭಕ್ತಿ ಗೀತೆಗಳಿಗೆ ಮಕ್ಕಳು ನೃತ್ಯ ನೆರವೇರಿಸಿದರು. ನೃತ್ಯ ಮಾಡಿದ ಪ್ರತಿ ತಂಡಕ್ಕೂ ಕೆಪಿಸಿಸಿ ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೀರ್ತಿಕುಮಾರ್ 5 ಸಾವಿರ ರೂ ಪ್ರೋತ್ಸಾಹ ಧನ ನೀಡಿದರು. 2025ರಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪ್ರಥಮ ಪ್ರಥಮ ಸ್ಥಾನಗಳಿಸಿದ ತೋರಣಗಟ್ಟೆ ಗ್ರಾಮದ ಉಷಾ, ಮಮತಾ ಡಿ.ಎಂ. ಮತ್ತು ಎಸ್.ರೇಖಾ ಸರಕಾರದ ಪ್ರೋತ್ಸಾಹ ಧನವಾಗಿ ತಲಾ 50 ಸಾವಿರ ರೂ ಚಕ್ ನೀಡಿ ಶಾಸಕ ಬಿ.ದೇವೇಂದ್ರಪ್ಪ ಗೌರವಿಸಿದರು.

ತಾಪಂ ಇಒ ಕೆಂಚಪ್ಪ, ಮುಖಂಡರಾದ ಬಿ.ಮಹೇಶ್ವರಪ್ಪ, ಷಂಷೀರ್ ಅಹಮದ್, ವಿವಿಧ ಇಲಾಖೆಗಳ ಅಧಿಕಾರಿಗಳು, ಮುಖಂಡರು ಇದ್ದರು.