ಸಾರಾಂಶ
ಪತ್ರಿಕಾ ದಿನಾಚರಣೆ, ಸಾಧಕರಿಗೆ ಹಾಗೂ ಪತ್ರಿಕಾ ವಿತರಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಶಾಸಕ ದೊಡ್ಡನಗೌಡ ಪಾಟೀಲ
ಕನ್ನಡಪ್ರಭ ವಾರ್ತೆ ಕುಷ್ಟಗಿಪತ್ರಿಕೆಗಳು ಬಿತ್ತರಿಸುವ ಸುದ್ದಿಯನ್ನು ಸಾರ್ವಜನಿಕರು ಗಮನಿಸುತ್ತಾರೆ. ಅಂತಹ ಪವಿತ್ರವಾದ ಪತ್ರಕರ್ತ ವೃತ್ತಿಗೆ ಧಕ್ಕೆ ಬಾರದಂತೆ ಸತ್ಯ ಸಂಗತಿಯನ್ನು ಅರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಪಟ್ಟಣದ ಆರ್ ಪಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕ ಕುಷ್ಟಗಿ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಹಾಗೂ ಪತ್ರಿಕಾ ವಿತರಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರುಮಾಧ್ಯಮ ಸಮಾಜದಲ್ಲಿ ನಡೆಯುತ್ತಿರುವ ಅಂಕು ಡೊಂಕುಗಳನ್ನು ತಿದ್ದುವ ಮೂಲಕ ಜನತೆಯನ್ನು ಎಚ್ಚರಿಸುವ ಕೆಲಸ ಮಾಡುತ್ತಿದೆ, ಆಧುನಿಕ ಯುಗದಲ್ಲಿ ಮಾಧ್ಯಮದಲ್ಲಿ ಪೈಪೋಟಿ ನಡೆಯುತ್ತಿದ್ದು, ಮಾಧ್ಯಮ ಮಿತ್ರರು ಜನರಿಗೆ ಸದಾ ಸುದ್ದಿ ತಲುಪಿಸುವ ದಾವಂತದಲ್ಲಿ ಇರುತ್ತಾರೆ ಅವರು ಸಹಿತ ಯೋಧರಂತೆ ಕಾರ್ಯ ಮಾಡುತ್ತಾರೆ ಎಂದರು.
ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಎಸ್.ವಿ. ಡಾಣಿ ಉಪನ್ಯಾಸ ನೀಡಿ, ದೇಶದಲ್ಲಿ ಕೆಲವು ಪತ್ರಕರ್ತರು ತಮ್ಮ ಜೀವನವನ್ನೆ ಪತ್ರಿಕೋದ್ಯಮಕ್ಕೆ ಮುಡುಪಾಗಿಟ್ಟಿದ್ದಾರೆ. ಪ್ರಸ್ತುತ ದಿನಗಳಲ್ಲಿ ಹವ್ಯಾಸಿ ಪತ್ರಕರ್ತರು ಹೆಚ್ಚಾಗಿದ್ದು, ಮಾನವೀಯತೆ ಮೌಲ್ಯಗಳ ಆಧಾರದ ಮೇಲೆ, ವಸ್ತುನಿಷ್ಟ ವರದಿ ಮಾಡಬೇಕಾಗಿದೆ. ಪತ್ರಿಕೆಗಳು ಹಿಂದಿಗಿಂತ ಈಗಿನ ದಿನಗಳಲ್ಲಿ ಬಹಳ ಮಹತ್ವ ಪಡೆಯುತ್ತಿವೆ ಎಂದರು.ಹಿರಿಯ ಪತ್ರಕರ್ತ ರವೀಂದ್ರಸಾ ಬಾಕಳೆ ಪ್ರಾಸ್ತಾವಿಕವಾಗಿ ಮಾತನಾಡಿ, ಪತ್ರಕರ್ತರಿಗೆ ಅನೇಕ ಸಮಸ್ಯೆಗಳು ಇದ್ದರೂ ಸಹಿತ ಅವುಗಳನ್ನು ಬದಿಗೊತ್ತಿ ಸಮಾಜದ ಸಮಸ್ಯೆ ಸ್ಪಂದಿಸುತ್ತಿದ್ದಾರೆ. ಆದರೆ, ಅವರಿಗೆ ಬದುಕನ್ನು ಕಟ್ಟಿಕೊಳ್ಳಲು ಅವಕಾಶಗಳು ಸಿಗುತ್ತಿಲ್ಲ ಪತ್ರಕರ್ತರ ಸಂಕಷ್ಟಗಳಿಗೆ ಜನಪ್ರತಿನಿಧಿಗಳು ಸ್ಪಂದನೆ ಮಾಡಬೇಕು ಎಂದರು.
ಮಾಜಿ ಶಾಸಕ ಕೆ. ಶರಣಪ್ಪ ವಕೀಲರು, ಕೆಯುಡಬ್ಲ್ಯೂಜೆ ಜಿಲ್ಲಾಧ್ಯಕ್ಷ ಬಸವರಾಜ ಗುಡ್ಲಾನೂರ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಂ. ಸಾದಿಕ್ಅಲಿ, ರಾಷ್ಟ್ರೀಯ ಸಮಿತಿ ಸದಸ್ಯ ಡಾ. ವಿ.ಆರ್. ತಾಳಿಕೋಟಿ ಮಾತನಾಡಿದರು.ಈ ಸಂದರ್ಭದಲ್ಲಿ ನಿವೃತ್ತ ವೈದ್ಯ ಡಾ. ಚಂದ್ರಕಾಂತ ಮಂತ್ರಿ, ಉಮೇಶ ಮಂಗಳೂರು, ಫಕೀರಪ್ಪ ಚಳಗೇರಿ, ಶ್ರೀನಿವಾಸ ಜಾಹಗೀರದಾರ, ಅಶೋಕ ಬಳೂಟಗಿ, ತಾಜುದ್ದೀನ ದಳಪತಿ, ಪರಶುರಾಮ ನಾಗರಾಳ, ನಜೀರಸಾಬ ಮೂಲಿಮನಿ, ಕುಮಾರಸ್ವಾಮಿ ಹಿರೇಮಠ ಸೇರಿದಂತೆ ಕುಷ್ಟಗಿ, ದೋಟಿಹಾಳ, ಹನಮಸಾಗರ, ತಾವರಗೇರಾ ಭಾಗದ ಪತ್ರಕರ್ತರು, ವಿತರಕರು ಇದ್ದರು. ಸಂಘದ ತಾಲೂಕಾಧ್ಯಕ್ಷ ವೆಂಕಟೇಶ ಕುಲಕರ್ಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎನ್. ಶಾಮೀದ ಸ್ವಾಗತಿಸಿದರು, ಶರಣಪ್ಪ ಲೈನದ ನಿರೂಪಿಸಿ, ವಂದಿಸಿದರು.