ಕನ್ನಡಪ್ರಭ ವಾರ್ತೆ ಸಾಗರ
ಆರೋಗ್ಯ ಇಲಾಖೆಯಲ್ಲಿ ಅನೇಕ ಸವಾಲುಗಳ ನಡುವೆ ಕೆಲಸ ಮಾಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷ ವೈ.ಜೆ.ಶಶಿಕುಮಾರ್ ಹೇಳಿದರು.ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಮಂಗಳವಾರ ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ, ನೌಕರರ ಸಂಘದ ಜಿಲ್ಲಾ ತಾಲೂಕು ಪದಾಧಿಕಾರಿಗಳ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರೋಗ್ಯ ಇಲಾಖೆ ಇತರೆ ಇಲಾಖೆಗಳಿಗಿಂತ ಭಿನ್ನವಾಗಿದ್ದು, ಹೆಚ್ಚಿನ ಕಾರ್ಯ ಒತ್ತಡ ಇರುತ್ತದೆ ಎಂದರು.
ಇತರೆ ಇಲಾಖೆಗಳಿಗಿಂತ ನಮ್ಮ ವೈದ್ಯ ಸಿಬ್ಬಂದಿ ಮೇಲೆ ಸವಾರಿ ಮಾಡುವ ಕೆಲಸ ಮೇಲ್ಮಟ್ಟದಲ್ಲಿ ನಡೆಯುತ್ತಿದೆ. ಇತರೆ ಇಲಾಖೆ ನೌಕರರ ಸಂಘಟನೆಗಳು ಸದೃಢವಾಗಿದ್ದು, ವಾರ್ಷಿಕ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತದೆ. ಆದರೆ ನಮ್ಮ ಸಂಘಟನೆಗಳಲ್ಲಿ ಅದಕ್ಕೆ ಅವಕಾಶ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಸಂಘದ ವತಿಯಿಂದ ನೌಕರರನ್ನು ಒಗ್ಗೂಡಿಸುವ, ಅವರಿಗೆ ಸಮಸ್ಯೆ ಬಂದಾಗ ತಕ್ಷಣ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿದ ಶಿವಮೊಗ್ಗ ಜಿಲ್ಲಾ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ನಾಗೇಂದ್ರಪ್ಪ ಮಾತನಾಡಿ, ಇಲಾಖೆಯ ನೌಕರರು ಸಂಘಟನೆಯಿಂದ ಇದ್ದಾಗ ಮಾತ್ರ ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯ. ಫೆ. ೧೧ರಂದು ವೈದ್ಯರ ಸಮಸ್ಯೆಗಳ ಕುರಿತು ಚರ್ಚೆ ನಡೆಸಲು ಮುಖ್ಯಮಂತ್ರಿಗಳ ಕಚೇರಿಯಲ್ಲಿ ಆರೋಗ್ಯ ಸಚಿವರ ಉಪಸ್ಥಿತಿಯೊಂದಿಗೆ ಸಭೆ ಕರೆಯಲಾಗಿದೆ. ಎಲ್ಲರೂ ಸೇರಿ ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಪ್ರಯತ್ನಿಸೋಣ ಎಂದು ಹೇಳಿದರು.
ಒಕ್ಕೂಟದ ಹಿರಿಯ ಸಲಹೆಗಾರ ಮ.ಸ.ನಂಜುಂಡಸ್ವಾಮಿ ಮಾತನಾಡಿ, ಆರೋಗ್ಯ ಇಲಾಖೆಯನ್ನು ಕೇವಲವಾಗಿ ಪರಿಗಣಿಸುವುದು ಬೇಡ. ನಮ್ಮ ಮೇಲೆ ಸವಾರಿ ಮಾಡಿದರೆ ಸಹಿಸಿಕೊಂಡು ಇರಲು ಸಾಧ್ಯವಿಲ್ಲ. ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವ ಅಧಿಕಾರಿ, ನೌಕರರಿಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ. ಸರ್ಕಾರದ ಪ್ರಶಸ್ತಿ ಪುರಸ್ಕಾರ ಘೋಷಣೆ ಸಂದರ್ಭದಲ್ಲಿಯೂ ನಮ್ಮನ್ನು ಕಡೆಗಣಿಸಲಾಗುತ್ತಿದೆ. ದುಡಿಯುವ ಆರೋಗ್ಯ ಇಲಾಖೆ ವೈದ್ಯಸಿಬ್ಬಂದಿಯನ್ನು ಗೌರವದಿಂದ ನೋಡುವ ವಾತಾವರಣ ಸೃಷ್ಟಿಯಾಗಬೇಕು ಎಂದು ಹೇಳಿದರು.
ಡಾ.ಗುಡದಪ್ಪ ಕಸವಿ., ಲೋಹಿತ್, ಸತೀಶ್ ಶೆಟ್ಟಿ ತೀರ್ಥಹಳ್ಳಿ, ವಿಜಯಮ್ಮ, ನಾಗರಾಜ್ ಸೊರಬ, ಸುರೇಶ್ ಶಿಕಾರಿಪುರ, ಸಹದೇವ್, ರವಿ, ಮಂಜುನಾಥ್ ಹಾಜರಿದ್ದರು. ಸಹದೇವರ ಬಡಿಗೇರ್ ಸ್ವಾಗತಿಸಿ, ನರಸಿಂಹ ವಂದಿಸಿ, ಪುಷ್ಪ ನಿರೂಪಿಸಿದರು.