ಸಾರಾಂಶ
ಪ್ರತಿ ವಿಷಯ ಬೋಧನೆ ಮಾಡುವ ಮುನ್ನ ಅದರ ಅಧ್ಯಯನ ಮಾಡಬೇಕು. ಶಿಕ್ಷಕರು ಸದಾ ಅಧ್ಯಯನ ಶೀಲರಾಗಬೇಕು.
ಹಳಿಯಾಳ: ಗುಣಾತ್ಮಕ ಶಿಕ್ಷಣಕ್ಕಾಗಿ ಸಕಲ ಶಿಕ್ಷಕ ವೃಂದ ಸನ್ನದ್ಧರಾಗಬೇಕು. ಮಕ್ಕಳಲ್ಲಿ ಬುನಾದಿ ಸಾಮರ್ಥ್ಯಗಳನ್ನು ಪರಿಶೀಲಿಸಿ ಅವರಿಗೆ ಸೂಕ್ತವಾಗಿರುವ ಮಾರ್ಗದರ್ಶನವನ್ನು ನೀಡಿ ಅವರನ್ನು ಮುಖ್ಯವಾಹಿನಿಯಲ್ಲಿ ತರಲು ಶಿಕ್ಷಕ ವೃಂದ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಬಸವರತಾಜ ಪಾರಿ ಕರೆ ನೀಡಿದರು.
ಪಟ್ಟಣದ ಕಾರ್ಮೆಲ್ ಪ್ರೌಢಶಾಲೆಯ ಸಭಾಭವನದಲ್ಲಿ ಉಪನಿರ್ದೇಶಕರ ಕಾರ್ಯಾಲಯ ಶಿರಸಿ ಶೈಕ್ಷಣಿಕ ಜಿಲ್ಲೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಳಿಯಾಳ ಇವರ ಸಹಯೋಗದಲ್ಲಿ ನಡೆದ ಕೋರ್ ವಿಷಯ ಶಿಕ್ಷಕರ ಶೈಕ್ಷಣಿಕ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಅಧ್ಯಯನ ಶೀಲರಾಗಿ:
ಪ್ರತಿ ವಿಷಯ ಬೋಧನೆ ಮಾಡುವ ಮುನ್ನ ಅದರ ಅಧ್ಯಯನ ಮಾಡಬೇಕು. ಶಿಕ್ಷಕರು ಸದಾ ಅಧ್ಯಯನ ಶೀಲರಾಗಬೇಕು. ಇದು ನಿಮ್ಮ ಬೋಧನೆಯ ಗುಣಮಟ್ಟವನ್ನು ವೃದ್ಧಿಸಲು ಸಹಾಯಕಾರಿಯಾಗುವುದು ಎಂದರು.ಶಿಕ್ಷಕರು ವಿಷಯಕ್ಕೆ ಸಂಬಂಧಿತ ಮಾಹಿತಿಯನ್ನು ಸಂಗ್ರಹಿಸಿ ಅದನ್ನು ಮಕ್ಕಳಿಗೆ ಮನವರಿಕೆ ಆಗುವ ಹಾಗೇ ತಿಳಿಹೇಳಬೇಕು.
ಅಕ್ಷರದಾಸೋಹ ಜಿಲ್ಲಾ ನೋಡಲ್ ಅಧಿಕಾರಿ ಸದಾನಂದ ಸ್ವಾಮಿ ಮಾತನಾಡಿ, ಮುಂದಿನ ವರ್ಷ ಎಸ್.ಎಸ್.ಎಲ್.ಸಿ ಫಲತಾಂಶದಲ್ಲಿ ಹಳಿಯಾಳ ತಾಲೂಕ ಮೊದಲನೇ ಸ್ಥಾನವನ್ನು ಪಡಯಬೇಕು ಎಂದು ಸವಾಲೆಸೆದರು.ಶಿರಸಿ ಉಪನಿರ್ದೇಶಕರ ಕಾರ್ಯಾಲಯದ ವಿಷಯ ಪರಿವೀಕ್ಷಕರು ಮತ್ತು ಶಿಕ್ಷಣಾಧಿಕಾರಿ ಮಂಜುನಾಥ ಹೆಗಡೆ, ಕುಮಾರ ಭಟ್, ಎಂ.ಆರ್.ಮೊಗೇರ್, ಲೀನಾ ನಾಯ್ಕ, ರೇಖಾ ನಾಯ್ಕ್, ತ್ರೀವೇಣಿ ನಾಯ್ಕ ಆಗಮಿಸಿದ್ದರು.
ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಾಕೀರ ಜಂಗೂಬಾಯಿ, ಜಿಲ್ಲಾ ಪ್ರೌಢಶಾಳಾ ಸಹಶಿಕ್ಷಕರ ಸಂಘದ ಕಾರ್ಯದರ್ಶಿ ರಾಘವೇಂದ್ರ ಶೇಟ್, ತಾಲೂಕು ಎಸ್.ಎಸ್.ಎಲ್.ಸಿ ನೋಡಲ ಅಧಿಕಾರಿ ಶ್ರೀನಿವಾಸ ಮಾಳಗಿ ಇದ್ದರು. ಕಾರ್ಯಾಗಾರದಲ್ಲಿ ಪ್ರತ್ಯೇಕವಾಗಿ ವಿಶೇಷ ಶಿಕ್ಷಕರಿಗೆ ಸೇತುಬಂಧ, ಎಫ್.ಎಲ್.ಎನ್ ಕುರಿತಾಗಿ ಮಾರ್ಗದರ್ಶನ ನೀಡಲಾಯಿತು. ಬಿಇಒ ಪ್ರಮೋದ ಮಹಾಲೆ ಸ್ವಾಗತಿಸಿದರು. ಶಿಕ್ಷಕ ಜರ್ನಾಧನ ಮಡಿವಾಳ ಹಾಗೂ ಬೊಂಬೆಯಾಟ ತಜ್ಞ ಸಿದ್ಧಪ್ಪಾ ಬಿರಾದಾರ್ ಕಾರ್ಯಕ್ರಮ ನಿರೂಪಿಸಿದರು.