ಭಾರತೀಯ ಯೋಗ ಪರಂಪರೆಗೆ ವಿಶ್ವ ಮನ್ನಣೆ: ದಿವ್ಯ ಜ್ಞಾನಾನಂದ ಶ್ರೀ

| Published : Jun 22 2025, 01:18 AM IST

ಸಾರಾಂಶ

ಈ ಬಾರಿ ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ ಎಂಬ ಧ್ಯೇಯವಾಕ್ಯದೊಂದಿಗೆ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಒತ್ತಾಸೆಯ ಪರಿಣಾಮ ಜಾಗತಿಕವಾಗಿ ಯೋಗ ಮಹತ್ವವನ್ನು ಪಡೆಯುವಂತಾಗಿದೆ.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ದೊಡ್ಡಬಳ್ಳಾಪುರದ ವಿಶ್ವ ಯೋಗ ದಿನಾಚರಣೆ ಟ್ರಸ್ಟ್‌ ನೇತೃತ್ವದಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಇಲ್ಲಿನ ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಸಾಮೂಹಿಕ ಯೋಗಾಭ್ಯಾಸ ಕಾರ್ಯಕ್ರಮ ನಡೆಯಿತು.

3 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, ಯೋಗಪಟುಗಳು, ಸಾರ್ವಜನಿಕರು, ಮಹಿಳೆಯರು, ಜನಪ್ರತಿನಿಧಿಗಳು, ಸಂಘ- ಸಂಸ್ಥೆಗಳ ಕಾರ್ಯಕರ್ತರು ಪಾಲ್ಗೊಂಡು ಸರಳ ಯೋಗಾಸನಗಳನ್ನು ಅಭ್ಯಾಸ ಮಾಡುವ ಮೂಲಕ ಯೋಗದ ಅನನ್ಯತೆಯನ್ನು ಸಾರುವ ಮತ್ತು ಆರೋಗ್ಯಯುತ ಬದುಕಿಗಾಗಿ ಯೋಗ ಎಂಬ ಸಂದೇಶವನ್ನು ಸಾರಿದರು.

ಪುಷ್ಪಾಂಡಜ ಮುನಿ ಆಶ್ರಮದ ದಿವ್ಯ ಜ್ಞಾನಾನಂದ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ, ಯೋಗಾಭ್ಯಾಸದ ಪ್ರಾತ್ಯಕ್ಷಿಕೆಯೊಂದಿಗೆ ಮಾರ್ಗದರ್ಶನ ಮಾಡಿದರು. ನೆರೆದಿದ್ದ ಯೋಗಾಸಕ್ತರಿಗೆ ಸರಳ ಯೋಗಾಸನಗಳನ್ನು ಪರಿಚಯಿಸಿಕೊಟ್ಟರು.

ಶಾಸಕ ಧೀರಜ್‌ ಮುನಿರಾಜ್‌, ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಂತಿಯ ಸಂಕೇತವಾದ ಪಾರಿವಾಳಗಳನ್ನು ಹಾರಿಬಿಡಲಾಯಿತು. ಬಣ್ಣದ ಬಲೂನ್‌ಗಳನ್ನು ಆಗಸಕ್ಕೆ ಹಾರಿ ಬಿಡುವ ಮೂಲಕ ಯೋಗ ದಿನಾಚರಣೆಯ ಅನನ್ಯತೆಯನ್ನು ಸಾಂಕೇತಿಕವಾಗಿ ಬಿಂಬಿಸಲಾಯಿತು.

ಯೋಗಕ್ಕೆ ಜಾಗತಿಕ ಮನ್ನಣೆ:

ಕಾರ್ಯಕ್ರಮದಲ್ಲಿ ಮಾತನಾಡಿದ ದಿವ್ಯಜ್ಞಾನಾನಂದ ಸ್ವಾಮೀಜಿ, ಯೋಗ ಜಗತ್ತಿಗೆ ಭಾರತದ ಅತ್ಯಂತ ಮಹತ್ವದ ಕೊಡುಗೆಯಾಗಿದೆ. ಅವಿಚ್ಛಿನ್ನ ಪರಂಪರೆಯನ್ನು ಹೊಂದಿರುವ ಭಾರತ ತನ್ನ ಕಲೆ, ಕ್ರೀಡೆ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಿಂತನೆಗಳ ಮೂಲಕ ವಿಶ್ವಕ್ಕೆ ಮಾರ್ಗದರ್ಶನ ಮಾಡುತ್ತಿದೆ. ಮನಸ್ಸು, ದೇಹ ಹಾಗೂ ಆಧ್ಯಾತ್ಮಿಕ ಸಂವೇದನೆಯ ಸಮ್ಮಿಳಿತ ಜ್ಞಾನವಾಗಿ ಯೋಗ ತನ್ನ ಮಹತ್ವವನ್ನು ಉಳಿಸಿಕೊಂಡಿದೆ ಎಂದು ತಿಳಿಸಿದರು.

ಇಂದು ಜಾಗತಿಕವಾಗಿ 150ಕ್ಕೂ ಹೆಚ್ಚು ದೇಶಗಳಲ್ಲಿ ಯೋಗ ಕಲೆ ಪರಿಚಿತಗೊಂಡಿದೆ. ಕಳೆದ 11 ವರ್ಷಗಳಿಂದ ಯೋಗದ ಬಗ್ಗೆ ಹೊರದೇಶಗಳಲ್ಲೂ ಜಾಗೃತಿ ಮೂಡುತ್ತಿದೆ. ಮುಖ್ಯವಾಗಿ ಯುವಪೀಳಿಗೆ ಮತ್ತು ಮಕ್ಕಳು ಯೋಗಾಸಕ್ತಿಯನ್ನು ಬೆಳೆಸಿಕೊಳ್ಳುತ್ತಿರುವುದು ವಿಶೇಷವಾಗಿದೆ. ಆರೋಗ್ಯಯುತ ಬದುಕಿಗಾಗಿ ಯೋಗ ಎಂಬ ಸಂದೇಶ ಮಾರ್ಮಿಕವಾಗಿದೆ ಎಂದು ತಿಳಿಸಿದರು.

ಒಂದು ಭೂಮಿ- ಒಂದು ಆರೋಗ್ಯ ಧ್ಯೇಯ:

ಶಾಸಕ ಧೀರಜ್‌ ಮುನಿರಾಜ್‌ ಮಾತನಾಡಿ, ಈ ಬಾರಿ ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ ಎಂಬ ಧ್ಯೇಯವಾಕ್ಯದೊಂದಿಗೆ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಒತ್ತಾಸೆಯ ಪರಿಣಾಮ ಜಾಗತಿಕವಾಗಿ ಯೋಗ ಮಹತ್ವವನ್ನು ಪಡೆಯುವಂತಾಗಿದೆ. ದೊಡ್ಡಬಳ್ಳಾಪುರದಲ್ಲೂ ನಿರಂತರವಾಗಿ ಆಚರಣೆ ನಡೆಯುತ್ತಿರುವುದು ವಿಶೇಷವಾಗಿದೆ ಎಂದು ತಿಳಿಸಿದರು.

ಸನ್ಮಾನ- ಯೋಗ :

ಯೋಗ ಸೇರಿದಂತೆ ವಿವಿಧ ಕ್ರೀಡಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ದೊಡ್ಡಬಳ್ಳಾಪುರದ ಉದಯೋನ್ಮುಖ ಯೋಗಪಟುಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ವಿವಿಧ ಯೋಗ ತರಬೇತಿ ಸಂಸ್ಥೆಗಳ ಹಲವಾರು ಯೋಗಪಟುಗಳಿಂದ ನಡೆದ ಆಕರ್ಷಕ ಯೋಗ ಪ್ರದರ್ಶನ ಗಮನ ಸೆಳೆಯಿತು.

ನಗರಸಭೆ ಅಧ್ಯಕ್ಷೆ ಸುಮಿತ್ರ ಆನಂದ್, ಜೆಡಿಎಸ್‌ ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ವಿಶ್ವ ಯೋಗ ದಿನಾಚರಣೆ ಟ್ರಸ್ಟ್‌ನ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಉಪಾಧ್ಯಕ್ಷ ತ.ನ.ಪ್ರಭುದೇವ್, ಡಾ.ಎಚ್.ಜಿ.ವಿಜಯಕುಮಾರ್, ಕಾರ್ಯದರ್ಶಿ ಬಿ.ಜಿ.ಅಮರನಾಥ್, ನಗರಸಭೆ ಮಾಜಿ ಉಪಾಧ್ಯಕ್ಷ ಡಿ.ವಿ.ನಾರಾಯಣಶರ್ಮ, ಕರ್ನಾಟಕ ಅಮೆಚೂರ್ ಯೋಗ ಸ್ಫೋರ್ಟ್ಸ್‌ ಅಸೋಸಿಯೇಷನ್‌ ಕಾರ್ಯದರ್ಶಿ ಎ.ನಟರಾಜ್, ನಗರಸಭೆ ಮಾಜಿ ಅಧ್ಯಕ್ಷ ಮುದ್ದಪ್ಪ, ದೈಹಿಕ ಶಿಕ್ಷಣಾಧಿಕಾರಿ ನಾಗರಾಜ್, ವಿಶ್ವ ಯೋಗ ದಿನಾಚರಣೆ ಟ್ರಸ್ಟ್‌ನ ಪದಾಧಿಕಾರಿಗಳು ಭಾಗವಹಿಸಿದ್ದರು.