ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ವಿಶ್ವ ಸಮಾಜಕಾರ್ಯ ದಿನ ಆಚರಿಸಲಾಯಿತು.ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಸಂಸ್ಥೆಯ ಬುಡಕಟ್ಟು ಆರೋಗ್ಯ ವಿಭಾಗದ ಸಂಯೋಜಕರಾದ ಸುಶೀಲಾ ಮಾತನಾಡಿ, ತಳಸಮುದಾಯದವರು ಬದುಕು ಕಟ್ಟಿಕೊಳ್ಳಲು ಶಿಕ್ಷಣ ಸಹಕಾರಿಯಾಗಿದೆ. ವೃತ್ತಿ ಜೀವನದ ಮೊದಲ ಹಂತಗಳಲ್ಲಿ ಸಮಸ್ಯೆಗಳು ಸಾಮಾನ್ಯ. ಇವುಗಳನ್ನೆಲ್ಲಾ ಮೀರಿ ಸಾಧನೆ ಮಾಡಬೇಕಾಗಿರುತ್ತದೆ ಎಂದು ಹೇಳಿದರು.ಇನ್ನೋರ್ವ ಅತಿಥಿ ಉಡುಪಿ ಕಲ್ಯಾಣಪುರದ ಗೊರೆಟ್ಟಿ ಆಸ್ಪತ್ರೆಯ ಸಮಾಜ ಕಾರ್ಯಕರ್ತ ರಾಕೇಶ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ನಿಮ್ಮ ಕೈಯ್ಯಲ್ಲೇ ಇರುತ್ತದೆ. ಭವಿಷ್ಯದ ಜೀವನಕ್ಕೆ ಬೇಕಾದ ಜ್ಞಾನ, ಕೌಶಲ್ಯಗಳನ್ನು ಬೇರೆ ಬೇರೆ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಸಂಪಾದಿಸಲು ಇದು ಸಕಾಲ. ಈಗ ವಿರಮಿಸಿದರೆ ಭವಿಷ್ಯದಲ್ಲಿ ಕಷ್ಟಪಡಬೇಕು; ಈಗ ಕಷ್ಟಪಟ್ಟು ಕೌಶಲ್ಯಗಳನ್ನು ಕಲಿತರೆ ಭವಿಷ್ಯ ಉಜ್ವಲವಾಗುವುದು ಎಂದು ಕಿವಿಮಾತು ಹೇಳಿದರು.ಉಪ್ಪೂರು ಕೊಳಲಗಿರಿ ಸ್ವರ್ಗ ಆಶ್ರಮದ ಸಹ ಸಂಸ್ಥಾಪಕ ಮಹೇಶ್ ಎಸ್.ಎಸ್. ಮಾತನಾಡಿ, ಸಮಾಜಕಾರ್ಯ ಶಿಕ್ಷಣವು ವೈಯಕ್ತಿಕವಾಗಿ ನಮ್ಮ ಅಭಿವೃದ್ಧಿಯೊಂದಿಗೆ ಸಮಾಜದ ಅಭಿವೃದ್ಧಿ ಮಾಡಲು ನಮ್ಮನ್ನು ಪ್ರೇರೇಪಿಸುತ್ತದೆ. ಇದಕ್ಕಾಗಿ ಅಗತ್ಯ ಇರುವ ಕೌಶಲ್ಯಗಳನ್ನು ವಿದ್ಯಾರ್ಥಿ ಜೀವನದಲ್ಲೇ ಅಭಿವೃದ್ಧಿಗೊಳಿಸಲು ಪ್ರಯತ್ನ ಪಡಬೇಕು ಎಂದರು.ಕಾರ್ಯಕ್ರಮದಲ್ಲಿ ಸಮಾಜಕಾರ್ಯ ವಿಭಾಗದ ಉಪನ್ಯಾಸಕಿ ಡಾ. ಪ್ರಮೀಳಾ ಜೆ. ವಾಜ್, ವಿಶ್ವ ಸಮಾಜಕಾರ್ಯ ದಿನಾಚರಣೆಯ ಹಿನ್ನೆಲೆ ಮತ್ತು ಪ್ರಸ್ತುತತೆಯನ್ನು ಪ್ರಾಸ್ತಾವಿಕ ಮಾತಿನಲ್ಲಿ ಹೇಳಿದರು. ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಮಮತ ಸಮಾಜಕಾರ್ಯ ಪ್ರತಿಜ್ಞಾವಿಧಿ ಬೋಧಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಹಮೀದ ಬಾನು ಬೇಗಂ ಬಿ. ವಹಿಸಿದರು. ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಸುಷ್ಮಾ ಟಿ. ಸ್ವಾಗತಿಸಿದರು. ವಿದ್ಯಾರ್ಥಿನಿ ಶಿವಾನಿ ವಂದಿಸಿದರು. ಪ್ರಿಯಾ ಆರ್.ಎಲ್. ಕಾರ್ಯಕ್ರಮ ನಿರೂಪಿಸಿದರು.
ವೇದಿಕೆಯಲ್ಲಿ ಐಕ್ಯುಎಸಿ ಸಂಚಾಲಕಿ ಡಾ.ಮೇವಿ ಮಿರಾಂಡ, ಸಮಾಜಕಾರ್ಯ ಸಹಾಯಕ ಪ್ರಾಧ್ಯಾಪಕರಾದ ರುಖಿಯತ್, ಸಮಾಜಕಾರ್ಯ ವೇದಿಕೆಯ ಅಧ್ಯಕ್ಷೆ ಸೋನಿ ವಿಲ್ಮ ಸಾಲಿನ್ಸ್ ಉಪಸ್ಥಿತರಿದ್ದರು.