ಸಾರಾಂಶ
ಮಂಗಳವಾರ ವಿಶ್ವ ರಂಗಭೂಮಿ ದಿನಾಚರಣೆ ನಡೆಯಿತು. ಹಿರಿಯ ರಂಗಕರ್ಮಿಗಳಿಗೆ ವಿಶ್ವ ರಂಗ ಪುರಸ್ಕಾರ ಪ್ರದಾನ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಹಾಗೂ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ವತಿಯಿಂದ ಮಂಗಳವಾರ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ರಾಜ್ಯ ಮತ್ತು ಹೊರರಾಜ್ಯದ ಹಿರಿಯ ರಂಗಕರ್ಮಿಗಳಾದ ಪ್ರೊ.ಆರ್. ಎಲ್. ಭಟ್ ಉಡುಪಿ (ನಾಟಕ ಸಾಹಿತ್ಯ), ಕೆ. ವಿ. ರಾಘವೇಂದ್ರ ಐತಾಳ್ , ಮುಂಬೈ (ರಂಗ ನಿರ್ದೇಶಕರು), ಕಜೆ ರಾಮಚಂದ್ರ ಭಟ್ (ರಂಗ ಸಂಘಟಕರು), ಎಸ್. ವಿ. ರಮೇಶ್ ಬೇಗಾರ್ (ರಂಗ ಸಂಘಟಕರು ಹಾಗೂ ನಿರ್ದೇಶಕರು), ಸುಜಾತ ಶೆಟ್ಟಿ (ರಂಗ ನಟಿ) ಅವರಿಗೆ ಪ್ರಶಸ್ತಿ ಪತ್ರ, ಫಲಕ ಹಾಗೂ ಬೆಳ್ಳಿ ಪದಕದೊಂದಿಗೆ ವಿಶ್ವರಂಗ ಪುರಸ್ಕಾರ-2024 ಪ್ರದಾನ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಕಾರ್ಯದರ್ಶಿ ವರದರಾಯ ಪೈ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕಲಾಪೋಷಕರಾದ ವಿ. ಜಿ. ಶೆಟ್ಟಿ ಆಗಮಿಸಿದ್ದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ್ ಶೆಣೈ, ಅಧ್ಯಕ್ಷ ಪ್ರೊ. ಶಂಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್. ಪಿ. ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ರಾಘವೇಂದ್ರ ಪ್ರಭು ಕರ್ವಾಲು, ರಂಜಿನಿ ವಸಂತ್, ಪದ್ಮಾಸಿನಿ ಉದ್ಯಾವರ, ವಿದ್ಯಾ ಸರಸ್ವತಿ ಹಾಗೂ ವಿದ್ಯಾ ಶಾಮಸುಂದರ್ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು.
ಕಾರ್ಯಕ್ರಮವನ್ನು ಸಂಧ್ಯಾ ಶೆಣೈ ನಿರೂಪಿಸಿ, ರಾಜೇಶ್ ಭಟ್ ವಂದಿಸಿದರು. ಪ್ರಾರಂಭದಲ್ಲಿ ಗಾಯಕಿ ಅಖಿಲ ಹೆಗಡೆ ಹೊನ್ನಾವರ ಅವರು ರಂಗಗೀತೆ ಪ್ರಸ್ತುತಪಡಿಸಿದರು.