ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಮಾ.೧೪ರಂದು ಶನಿವಾರ ಪಟ್ಟಣದ ಎಸ್‌ಬಿಜಿ ಕಲ್ಯಾಣ ಮಂಟಪದಲ್ಲಿ ಬದುಕು ಫೌಂಡೇಶನ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬದುಕು ಫೌಂಡೇಶನ್ ಟ್ರಸ್ಟಿಗಳಾದ ಛಾಯಕೃಷ್ಣ ತಿಳಿಸಿದರು.ಅವರು ಪಟ್ಟಣದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೆಣ್ಣು ಮಕ್ಕಳು ಎಂದರೆ ಅಡುಗೆ ಮನೆಗೆ ಸೀಮಿತ ಎಂಬ ಕಾಲ ಮರೆಯಾಗಿ ಎಷ್ಟೋ ವರ್ಷಗಳು ಕಳೆದಿದೆ. ಇವತ್ತು ಅಡಿಗೆ ಮಾಡುತ್ತಿದ್ದ ಕೈಗಳು ದೇಶವನ್ನು ಆಳುತ್ತಿವೆ ಎಂಬುದೇ ನಮಗೆ ಹೆಮ್ಮೆ. ರಾಜಕೀಯ, ಹೈನುಗಾರಿಕೆ, ಶಿಕ್ಷಣ, ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ. ಹೆಣ್ಣು ಎಂದಿಗೂ ಅಬಲೆಯಲ್ಲ. ದೇಶದ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿರುವುದು ಮಹಿಳೆ ಎಂಬುದು ಹಿರಿಮೆ. ಪ್ರಸಕ್ತ ದಿನಗಳಲ್ಲಿ ಶೇಕಡ ೯೦ ರಷ್ಟು ಕುಟುಂಬಗಳು ಮಹಿಳೆಯರ ಸಾರಥ್ಯದಲ್ಲಿ ನಡೆಯುತ್ತಿವೆ. ಮಹಿಳೆ ಹೈನುಗಾರಿಕೆ ಸೇರಿದಂತೆ ವಿವಿಧ ದುಡಿಮೆಯಿಂದ ಕುಟುಂಬ ನಿರ್ವಹಣೆ ಮಾಡುತ್ತಿದ್ದಾಳೆ. ಇಂತಹ ಶ್ರಮಜೀವಿ ಹಾಗೂ ಸಾಧನೀಯ ಮಹಿಳೆಯರಿಗೆಂದೇ ವಿಶ್ವ ಮಹಿಳಾ ದಿನ ಆಚರಣೆಯಲ್ಲಿರುವುದು ಒಂದು ವಿಶೇಷ ಸಂಗತಿ. ಇನ್ನು ಬದುಕು ಫೌಂಡೇಶನ್ ಮಹಿಳೆಯರ ಕನಸಿನ ವೇದಿಕೆಯಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ದುಡಿಯುತ್ತಿರುವುದು ಸಹಜವಾದರೂ ಮನೆಯಲ್ಲಿಯೇ ಕುಟುಂಬದ ನಿರ್ವಹಣೆಯೊಂದಿಗೆ ಮಹಿಳೆಯರು ದುಡಿದು ಆರ್ಥಿಕವಾಗಿ ಸಬಲೆಯಾಗಬೇಕು ಎಂಬುದೇ ಬದುಕು ಫೌಂಡೇಶನ್‌ನ ಮುಖ್ಯ ಉದ್ದೇಶ. ಈಗಾಗಲೇ ಬದುಕು ಫೌಂಡೇಶನ್ ತಾಲೂಕಿಗೆ ಹೆಜ್ಜೆ ಇರಿಸಿದ್ದು ಈಗಷ್ಟೇ ನೆಲೆ ಕಾಣುತ್ತಿದೆ. ಮಹಿಳೆಯರು ತಮ್ಮ ಸಾಮರ್ಥ್ಯವನ್ನು ದುಡಿಮೆಯ ಮೂಲಕ ಸಾಬೀತುಪಡಿಸಿಕೊಳ್ಳಲು ಒಂದು ವೇದಿಕೆಯಾಗಿ ಬದುಕು ಫೌಂಡೇಶನ್ ಕೆಲಸ ಮಾಡಲಿದೆ ಎಂದರು. ಮತ್ತಷ್ಟು ವಿಶೇಷ ಯೋಜನೆಗಳೊಂದಿಗೆ ತಾಲೂಕಿನಾದ್ಯಂತ ವಿಸ್ತರಿಸುವ ಯೋಜನೆ ನಮ್ಮದಾಗಿದ್ದು ಈ ನಿಟ್ಟಿನಲ್ಲಿ ವಿಶ್ವ ಮಹಿಳಾ ದಿನಆಚರಣೆ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಧಿಕಾರಿ ಲತಾ ಕುಮಾರಿ ಅಧ್ಯಕ್ಷತೆ ವಹಿಸಲಿದ್ದು, ವರಿಷ್ಟಾಧಿಕಾರಿ ಶುಭಾನ್ವಿತ ಅವರು ಉದ್ಘಾಟಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಭಾರತಿ, ಹಿರೀಸಾವೆ ಪೊಲೀಸ್ ಠಾಣೆಯ ಎಸ್‌ಐ ರೂಪಾ ದೇವಿ ಬಿರಾದರ್‌ ಮಹಿಳೆಯರಿಗೆ ವಿಶೇಷ ಮಾಹಿತಿ ನೀಡಲಿದ್ದಾರೆ. ಬದುಕು ಫೌಂಡೇಶನ್ ತಂಡ ಹಾಗೂ ಎಲ್ಲಾ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಬದುಕು ಫೌಂಡೇಶನ್ ಟ್ರಸ್ಟಿಗಳಾದ ಶೋಭಾ, ರಂಜಿತಾ, ಐಶ್ವರ್ಯ ಮತ್ತಿತರಿದ್ದರು.