ಸಾರಾಂಶ
ಶೆಟ್ಟಿಕೊಪ್ಪ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮಕರ ಸಂಕ್ರಮಣ ದಅಂಗವಾಗಿ ಆಶೀರ್ವಚನ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಕಾಲ, ಕಾಲಕ್ಕೆ ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳು ಆಗುವುದರಿಂದ ಗ್ರಾಮ ಹಾಗೂ ಮನುಷ್ಯನ ಜೀವನದಲ್ಲಿ ಉತ್ಕೃಷ್ಟ ಬದಲಾವಣೆ ಕಾಣಲು ಸಾಧ್ಯ ಎಂದು ಅತಿಶಯ ಕ್ಷೇತ್ರ ಸಿಂಹನಗದ್ದೆ ಬಸ್ತಿಮಠದ ಶ್ರೀಮದಭಿನವ ಲಕ್ಷ್ಮೀಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹೇಳಿದರು.
ಮಂಗಳವಾರ ರಾತ್ರಿ ಮಕರ ಸಂಕ್ರಮಣ ಅಂಗವಾಗಿ ತಾಲೂಕಿನ ಶೆಟ್ಟಿಕೊಪ್ಪದ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಶ್ರೀಮಠದಿಂದ ವಿಶೇಷ ಪೂಜೆ ಸಲ್ಲಿಸಿ, ಭಕ್ತರಿಗೆ ಆಶೀರ್ವಚನ ನೀಡಿದರು. ನಮ್ಮ ಶರೀರದಲ್ಲಿ ಪಂಚ ಭೂತಗಳಿವೆ. ಪಂಚ ಭೂತಗಳನ್ನು ದೇವರು ಎಂದು ಪೂಜೆಯನ್ನು ಸಲ್ಲಿಸುತ್ತೇವೆ. ಶರೀರ ನನ್ನದಾದರೂ ಒಳಗಿರುವುದು ದೇವಾತ್ಮವಾಗಿದೆ. ಸಾಮೂಹಿಕ ಪ್ರಾರ್ಥನೆಯಲ್ಲಿ ಅಗಾಧವಾದ ಶಕ್ತಿ ಅಡಗಿದೆ. ಆ ಶಕ್ತಿ ದೇವರಿಗೆ ಸಮರ್ಪಿತವಾಗುತ್ತದೆ. ಇಂದು ಸೂರ್ಯ ಮಕರ ರಾಶಿಗೆ ಪ್ರವೇಶ ಮಾಡಿ ತನ್ನ ಪಥ ಬದಲಾಯಿಸುವ ದಿನವಾಗಿದೆ ಎಂದರು.ಎಲ್ಲರೂ ಎಳ್ಳು ಬೆಲ್ಲ ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದಾಗಲಿದೆ. ಸೂರ್ಯ ಪ್ರತಿಯೊಂದು ರಾಶಿಯಲ್ಲೂ ಒಂದೊಂದು ತಿಂಗಳು ಪ್ರವೇಶ ಮಾಡುತ್ತಿರುತ್ತಾನೆ. ದೇವಾಲಯಕ್ಕೆ ಹೋಗುವಾಗ ಶುದ್ಧ ಮನಸ್ಸಿನಿಂದ ಹೋಗಿ, ಒಳ್ಳೆಯ ಭಕ್ತಿಯಿಂದ ಬೇಡಿಕೊಂಡರೆ ಭಗವಂತನು ಇಷ್ಟಾರ್ಥ ಸಿದ್ಧಿ ಕರುಣಿಸುತ್ತಾನೆ ಎಂದರು.ಅಧ್ಯಕ್ಷತೆ ವಹಿಸಿದ್ದ ಅಯ್ಯಪ್ಪಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಗಾಂಧಿಗ್ರಾಮ ಕೆ.ಎನ್.ನಾಗರಾಜು ಮಾತನಾಡಿ, ಪ್ರತೀ ವರ್ಷ ಮಕರ ಸಂಕ್ರಮಣ ದಿನದಂದು ಬಸ್ತಿಮಠದ ಶ್ರೀಗಳಿಂದ ಈ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿಕೊಂಡು ಬರಲಾಗುತ್ತಿದೆ. ಶ್ರೀಗಳು ಆಗಮಿಸಿ ಆಶೀರ್ವಚನ ಕರುಣಿಸುವುದರಿಂದ ಆಸ್ತಿಕರಿಗೆ ಇನ್ನಷ್ಟು ದೈವ ಬಲ ಬಂದಾಗುತ್ತಿದೆ. ಜನರಲ್ಲಿ ದೈವ ಶಕ್ತಿಗಳ ಬಗ್ಗೆ ನಂಬಿಕೆ ಹೆಚ್ಚಾಗುತ್ತಿದೆ. ದೇವಸ್ಥಾನದಲ್ಲಿ ವರ್ಷಪೂರ್ತಿ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯ ಕ್ರಮಗಳಿಗೆ ಗ್ರಾಮಸ್ಥರು ಅತ್ಯಂತ ಸಹಕಾರ ನೀಡುತ್ತಾ ಬರುತ್ತಿದ್ದಾರೆ ಎಂದರು.ಇದೇ ಸಂದರ್ಭದಲ್ಲಿ ಬಸ್ತಿಮಠದ ಶ್ರೀಗಳ ಪಾದ ಪೂಜೆ ನೆರವೇರಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ದೇವಾಲಯದ ಅಂಗಳಕ್ಕೆ ಬರ ಮಾಡಿಕೊಳ್ಳಲಾಯಿತು. ದೇವಸ್ಥಾನ ಸಮಿತಿ ಉಪಾಧ್ಯಕ್ಷ ಅರವಿಂದಾಚಾರ್, ಎನ್.ಎಂ.ಕಾಂತರಾಜ್, ಗೌರವಾಧ್ಯಕ್ಷ ಬಿ.ಕೆ.ಉದಯ್ಕರ್, ಕಾರ್ಯ ದರ್ಶಿ ಬಿ.ಆರ್.ವೆಂಕಟೇಶ್, ಖಜಾಂಚಿ ಪ್ರಭಾಕರ, ಮುಖಂಡರಾದ ಎ.ಬಿ.ಚಂದ್ರಶೇಖರ್, ಕೆ.ಮೋಹನ್, ಎ.ಬಿ. ಮಂಜುನಾಥ್, ಸಂಕೇತ್, ಸಚಿನ್, ಟಿ.ಪಿ.ಸುಧಾಕರ್ ಆಚಾರ್, ಮಹಿಳಾ ಸಂಘದ ದಾನಮ್ಮ, ಗಾಯಿತ್ರಿ, ಪುಷ್ಪಾ, ಶಾಲಿನಿ, ಶೈಲಾ,ಎಂ.ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.