ಸಾರಾಂಶ
ಕನ್ನಡಪ್ರಭ ವಾರ್ತೆ ಕಾಗವಾಡ
ಕರ್ನಾಟಕ ರಾಜ್ಯ ಹಿಂದೂಳಿದ ವರ್ಗಗಳ ಆಯೋಗವು ಕೈಗೊಳ್ಳುವ ಸಾಮಾಜಿ ಮತ್ತು ಶೈಕ್ಷಣಿಕ ಸಮೀಕ್ಷೆ ವೇಳೆ ಸಮೀಕ್ಷೆದಾರರು ಮನೆಗೆ ಬಂದಾಗ ಪಂಚಮಸಾಲಿ ಸಮಾಜದವರು ಜಾತಿಯ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಕೋಡ್ ಎ-0868 ಎಂದು ಬರೆಯಿಸಬೇಕು ಎಂದು ಪಂಚಮಸಾಲಿ ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ಪಾಟೀಲ (ಬಮ್ನಾಳ) ಹೇಳಿದರು.ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಜಾತಿ ಸಮೀಕ್ಷೆ ವಿಷಯದಲ್ಲಿ ಸಮಾಜ ಬಾಂಧವರು ಯಾವುದೇ ರೀತಿಯ ಗೊಂದಲ ಮಾಡಿಕೊಳ್ಳಬಾರದು. ನಾವು ಹೇಳಿದ್ದನ್ನು ಬರೆದುಕೊಂಡಿದ್ದಾರೆಂದು ಕೇಳಿ ಖಾತ್ರಿ ಮಾಡಿಕೊಳ್ಳಬೇಕು. ಈಗಾಗಲೇ ರಾಜ್ಯಾದ್ಯಂತ ಎಲ್ಲರ ಅಭಿಪ್ರಾಯವನ್ನು ಪಡೆಯಲಾಗಿದೆ ಎಂದರು.ಈಗಾಗಲೇ ಕೂಡಲಸಂಗಮದ ಪಂಚಮಸಾಲಿ ಪ್ರಥಮ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮಿಗಳು ರಾಜ್ಯಾದ್ಯಂತ ಎಲ್ಲ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಪಂಚಮಸಾಲಿ ಘಟಕಗಳಿಗೆ ಭೇಟಿ ನೀಡಿ ಪದಾಧಿಕಾರಿಗಳ ಸಲಹೆ ಸೂಚನೆಗಳನ್ನು ನೀಡಿದರು. ಎಲ್ಲರ ಅಭಿಪ್ರಾಯ ಪಡೆದು ಸರ್ವಾನುಮತದಿಂದ ಲಿಂಗಾಯತ ಪಂಚಮಸಾಲಿ ಎಂದು ಬರೆಸುವಂತೆ ಸಮಾಜಕ್ಕೆ ತಿಳಿಸಿದ್ದಾರೆ ಎಂದು ತಿಳಿಸಿದರು. ನಮ್ಮವರೇ ಬೇರೆ ಬೇರೆ ಬರೆಸುವುದರಿಂದ ನಮ್ಮ ಸಮಾಜದ ಸಂಖ್ಯೆ ಕಡಿಮೆಯಾದರೇ ಮುಂದೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಕಡಿಮೆ ಸಿಗುತ್ತವೆ. ಜೊತೆಗೆ ಮುಂಬರುವ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ, ವಿಧಾನಸಭೆ ಚುನಾವಣೆಗಳಲ್ಲಿ ಟಿಕೆಟ್ ಹಂಚಿಕೆಯಲ್ಲೂ ಕಡಿಮೆ ಸಿಗುತ್ತವೆ. ಆದ್ದರಿಂದ ನಾವು ಲಿಂಗಾಯತ ಪಂಚಮಸಾಲಿ ಎಂದು ಬರೆದರೇ ಸಮಾಜಕ್ಕೊಂದು ಬಲ ಬರುತ್ತದೆ ಎಂದರು. ಸಮಾಜ ಬಂಧವರು ಸೆ.22 ರಿಂದ ಅ.7 ರವರೆಗೆ ಜರುಗಲಿರುವ ಜಾತಿ ಗಣತಿಯಲ್ಲಿ ಎಲ್ಲರೂ ಲಿಂಗಾಯತ ಪಂಚಮಸಾಲಿ ಎಂದು ಬರೆಸಬೇಕು. ಪಂಚಮಸಾಲಿ ಕೋಡ್ ಎ-0868 ಎಂದು ಬರೆಯಿಸಬೇಕು.
-ಎಸ್.ಎಸ್.ಪಾಟೀಲ, ಪಂಚಮಸಾಲಿ ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ಪಾಟೀಲ (ಬಮ್ನಾಳ).