‘ಮಾದಿಗ’ ಎಂದೇ ಗಣತಿಯಲ್ಲಿ ಬರೆಯಿಸಿ : ಆಂಜನೇಯ

| N/A | Published : Apr 28 2025, 12:49 AM IST / Updated: Apr 28 2025, 11:14 AM IST

H Anjaneya

ಸಾರಾಂಶ

ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ಮಾದಿಗರ ಸಂಖ್ಯೆ ಹೆಚ್ಚಿದ್ದು ಮಾದಿಗ ಎಂದಷ್ಟೇ ಬರೆಯಿಸಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಎಚ್.ಆಂಜನೇಯ ಕರೆ ನೀಡಿದ್ದಾರೆ.

  ಬೆಂಗಳೂರು :  ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ಮಾದಿಗರ ಸಂಖ್ಯೆ ಹೆಚ್ಚಿದ್ದು, ರಾಜ್ಯ ಸರ್ಕಾರ ಮೇ 5ರಿಂದ 17ರವರೆಗೆ ನಡೆಸುವ ಪರಿಶಿಷ್ಟ ಜಾತಿಯವರ ಗಣತಿಯಲ್ಲಿ ಮಾದಿಗ ಸಮುದಾಯದರು ಯಾವುದೇ ಕಾರಣಕ್ಕೂ ಆದಿ ಕರ್ನಾಟಕ, ಆದಿದ್ರಾವಿಡ, ಆದಿ ಆಂಧ್ರ ಎಂಬ ಸೂಚಕವನ್ನು ಬರೆಸಬಾರದು. ಮಾದಿಗ ಎಂದಷ್ಟೇ ಬರೆಯಿಸಬೇಕು ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಎಚ್.ಆಂಜನೇಯ ಕರೆ ನೀಡಿದ್ದಾರೆ.

ಕರ್ನಾಟಕ ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ ಆಶ್ರಯದಲ್ಲಿ ಭಾನುವಾರ ಬೆಂಗಳೂರಿನ ವಸಂತ ನಗರದ ಡಾ। ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಮಾದಿಗ ಮುಖಂಡರ ಜಾಗೃತಿ ಸಭೆಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ಕೆಲ ಜಾತಿಯವರು ನಾವೇ ಹೆಚ್ಚು ಸಂಖ್ಯೆಯಲ್ಲಿದ್ದೇವೆಂದು ಹೇಳುತ್ತಿದ್ದಾರೆ. ಆದರೆ, ವಾಸ್ತವವಾಗಿ ಮಾದಿಗರ ಸಂಖ್ಯೆ ಹೆಚ್ಚಿದೆ. ಮಾದಿಗರು ಆದಿಕರ್ನಾಟಕ, ಆದಿದ್ರಾವಿಡ, ಆದಿಆಂಧ್ರ ಹೆಸರಿನಲ್ಲಿ ಗುರುತಿಸಿಕೊಂಡಿರುವುದು ಗೊಂದಲಕ್ಕೆ ಕಾರಣವಾಗಿದೆ. ಈ ಗೊಂದಲ ನಿವಾರಿಸಲು ರಾಜ್ಯ ಸರ್ಕಾರ ಮೇ 5ರಿಂದ 17ರವರೆಗೆ ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಸೀಮಿತಗೊಳಿಸಿ ಜಾತಿಗಣತಿ ಕಾರ್ಯ ನಡೆಸಲು ದಿಟ್ಟ ಕ್ರಮ ಕೈಗೊಂಡಿದೆ ಎಂದರು.

ಅಲ್ಲದೆ, ಜಾತಿ ಗಣತಿ ಸಮಯದಲ್ಲಿ ಮಾದಿಗ ಸಮುದಾಯದವರು ಅತ್ಯಂತ ಜವಾಬ್ದಾರಿಯುತವಾಗಿ ವರ್ತಿಸಬೇಕು. ಜಾತಿ ಗಣತಿ ವೇಳೆ ಮಾದಿಗ ಎಂದೇ ಬರೆಯಿಸಬೇಕು. ಜಾತಿಗಣತಿ ಕಾರ್ಯ ಮುಗಿಯುವವರೆಗೂ ಮಾದಿಗ ಸಮುದಾಯವರು ಉತ್ಸವ, ಹಬ್ಬ, ಜಯಂತಿಗಳ ಆಚರಣೆಯಲ್ಲಿ ಭಾಗವಹಿಸಬಾರದು. ನಮ್ಮ ಗುರಿ ಜಾತಿಗಣತಿಯತ್ತ ಇರಬೇಕು. ರಾಜ್ಯದಲ್ಲಿ ಒಳಮೀಸಲಾತಿ ಹಂಚಿಕೆ ವೇಳೆ ಮಾದಿಗ ಜಾತಿಯವರಿಗೆ ಹೆಚ್ಚು ಪಾಲು ದೊರೆಯಲೇಬೇಕು. ಈ ಬಗ್ಗೆ ಮಾದಿಗ ಸಮುದಾಯದಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕು. ಗಣತಿ ವೇಳೆ ಹಟ್ಟಿ, ಕಾಲೊನಿ, ಬಡಾವಣೆಗಳಲ್ಲೇ ಇದ್ದು ಜಾತಿಗಣತಿದಾರರು ಆಗಮಿಸಿದ ವೇಳೆ ಅವರೊಂದಿಗೆ ಮನೆ ಮನೆಗೆ ಭೇಟಿ ನೀಡಿ ಸಮುದಾಯದವರು ಮಾದಿಗ ಎಂದು ಬರೆಯಿಸುವ ರೀತಿ ಕೆಲಸ ಮಾಡಬೇಕು ಎಂದು ತಿಳಿಸಿದರು.