ಪರೀಕ್ಷೆಯ ಭಯ ಬಿಟ್ಟು ಆತ್ಮವಿಶ್ವಾಸದಿಂದ ಬರೆಯಿರಿ

| Published : Mar 22 2025, 02:05 AM IST

ಸಾರಾಂಶ

ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಾರಂಭವಾಗಿದೆ. ಅದರಂತೆ ವಿದ್ಯಾರ್ಥಿಗಳು ಯಾವುದೇ ಭಯ ಆತಂಕವಿಲ್ಲದೆ ಪರೀಕ್ಷೆ ಬರೆಯಬೇಕು. ವಿದ್ಯಾರ್ಥಿಗಳು ತಮ್ಮೊಳಗೆ ಇರುವ ಭಯ ಹೋಗಲಾಡಿಸಬೇಕು. ಶಿಕ್ಷಣ ಎಂಬುದು ಬುದ್ಧಿಶಕ್ತಿಯನ್ನು ಹೆಚ್ಚಿಸುತ್ತದೆ. ಜಗತ್ತನ್ನು ಗೆಲ್ಲಲು ಅಗತ್ಯವಾದ ಕೌಶಲ್ಯ ಜ್ಞಾನದೊಂದಿಗೆ ನಮ್ಮನ್ನು ಸಜ್ಜುಗೊಳಿಸುತ್ತದೆ. ಯಶಸ್ಸನ್ನು ಸಾಧಿಸಲು ಮತ್ತು ಮುಂದೆ ಒಳ್ಳೆಯ ಹುದ್ದೆ ಪಡೆಯಲು ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಮುಖ ಘಟ್ಟವಾಗಿದೆ ಎಂದು ಪುರಸಭೆ ಅಧ್ಯಕ್ಷ ಎ. ಆರ್. ಅಶೋಕ್ ಶುಭ ಹಾರೈಸಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಪಟ್ಟಣದ ಶಾಂತಲಾ ವಿದ್ಯಾಸಂಸ್ಥೆ ಹಾಗೂ ಪೂರ್ಣಾಪ್ರಜ್ಞಾ ಶಾಲೆಗೆ ಭೇಟಿ ನೀಡಿ ಅಲ್ಲಿಯ ವಿದ್ಯಾರ್ಥಿಗಳಿಗೆ ಲೇಖನಿ ನೀಡುವುದರ ಮೂಲಕ ಪುರಸಭೆ ಅಧ್ಯಕ್ಷ ಎ. ಆರ್. ಅಶೋಕ್ ಶುಭ ಹಾರೈಸಿದರು.

ನಂತರ ಮಾತನಾಡಿ, ಶುಕ್ರವಾರದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಾರಂಭವಾಗಿದೆ. ಅದರಂತೆ ವಿದ್ಯಾರ್ಥಿಗಳು ಯಾವುದೇ ಭಯ ಆತಂಕವಿಲ್ಲದೆ ಪರೀಕ್ಷೆ ಬರೆಯಬೇಕು. ವಿದ್ಯಾರ್ಥಿಗಳು ತಮ್ಮೊಳಗೆ ಇರುವ ಭಯ ಹೋಗಲಾಡಿಸಬೇಕು. ಶಿಕ್ಷಣ ಎಂಬುದು ಬುದ್ಧಿಶಕ್ತಿಯನ್ನು ಹೆಚ್ಚಿಸುತ್ತದೆ. ಜಗತ್ತನ್ನು ಗೆಲ್ಲಲು ಅಗತ್ಯವಾದ ಕೌಶಲ್ಯ ಜ್ಞಾನದೊಂದಿಗೆ ನಮ್ಮನ್ನು ಸಜ್ಜುಗೊಳಿಸುತ್ತದೆ. ಯಶಸ್ಸನ್ನು ಸಾಧಿಸಲು ಮತ್ತು ಮುಂದೆ ಒಳ್ಳೆಯ ಹುದ್ದೆ ಪಡೆಯಲು ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಮುಖ ಘಟ್ಟವಾಗಿದೆ. ಮಾ.21ರಿಂದ ನಡೆಯಲಿರುವ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ಭಯ ತೊರೆದು ಆಗಮಿಸಬೇಕು. ಯಾವುದೇ ರೀತಿ ಗೊಂದಲ ಮಾಡಿಕೊಳ್ಳಬಾರದು. ಹಾಗೇ ಪರೀಕ್ಷಾ ಕೇಂದ್ರದ ಬಳಿ ಅಕ್ರಮ ಚಟುವಟಿಕೆಗಳಿಗೆ ದಾರಿ ಮಾಡಿ ಕೊಡಬಾರದು.

ನೀವು ಇಷ್ಟು ದಿನ ಶ್ರದ್ಧಾಭಕ್ತಿಯಿಂದ ಕಷ್ಟಪಟ್ಟು ಓದಿದನ್ನು ಮರೆಯದೆ ಅದನ್ನು ಮನಸ್ಸಲ್ಲಿಟ್ಟು ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿ ಒಳ್ಳೆಯ ಅಂಕ ಪಡೆದು ಶಾಲೆಗೆ , ಪೋಷಕರಿಗೆ ಹಾಗೂ ತಾಲೂಕಿಗೆ ಕೀರ್ತಿ ತರಬೇಕು ಎಂದು ಹಾರೈಸಿದರು. ನಂತರ ಮಾತನಾಡಿದ ಕರವೇ ಅಧ್ಯಕ್ಷ ಚಂದ್ರಶೇಖರ್, ಪರೀಕ್ಷೆಯ ತಯಾರಿಗೆ ತಮ್ಮದೇ ಆದ ದೈನಂದಿನ ಓದಿನ ವೇಳಾಪಟ್ಟಿ ಸಿದ್ಧಪಡಿಸಿಕೊಂಡು ವಿದ್ಯಾರ್ಥಿಗಳು ಪರೀಕ್ಷಾ ತಯಾರಿ ಮಾಡುವುದು ತುಂಬಾ ಅವಶ್ಯಕವಾಗಿದೆ. ಪರೀಕ್ಷಾ ತಯಾರಿಯ ಅವಧಿಯಲ್ಲಿ ವಿದ್ಯಾರ್ಥಿಗಳು ಬೆಳಗ್ಗೆ ಬೇಗ 4.30ರಿಂದ 5ಗಂಟೆಯೊಳಗೆ ಏಳುವ ಮೂಲಕ ಓದುವ ಅಭ್ಯಾಸವನ್ನು ರೂಢಿಸಿಕೊಂಡರೆ ತುಂಬಾ ಒಳ್ಳೆಯದು. ಬೆಳಗಿನ ಅವಧಿಯು ಓದಿಗೆ ಬಹಳ ಸೂಕ್ತವಾದ ಸಮಯವಾಗಿರುವುದರಿಂದ ಈ ಸಮಯವನ್ನು ಚೆನ್ನಾಗಿ ಉಪಯೋಗಿಸಿ ಈ ಅವಧಿಯಲ್ಲಿ ಓದಿದ ಅಂಶಗಳು ಬಹಳ ಬೇಗನೆ ನಮ್ಮ ಮನಸ್ಸಿಗೆ ಹೋಗುವುದರಿಂದ ಕಲಿಕೆ ಸುಲಭವಾಗುತ್ತದೆ. ಹಾಗೆ ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳು ಧೈರ್ಯವಾಗಿ ಪರೀಕ್ಷೆ ಎದುರಿಸಿ ಉತ್ತೀರ್ಣರಾಗಿ ಒಳ್ಳೆಯ ಅಂಕ ಪಡೆದು ಸಮಾಜದಲ್ಲಿ ಉತ್ತಮ ಹೆಸರು ಗಳಿಸಬೇಕು ಎಂದರು.

ಈ ಸಂದರ್ಭದಲ್ಲಿ ಪುರಸಭೆ ಆರೋಗ್ಯ ಅಧಿಕಾರಿ ಲೋಹಿತ್, ಕ,ಸಾ,ಪ ಅಧ್ಯಕ್ಷ ಮಾನ ಮಂಜೇಗೌಡ ಹಾಗೂ ಇತರರು ಹಾಜರಿದ್ದರು.