ಸಾರಾಂಶ
ರವೀಂದ್ರಸಿಂಗ್ರ ‘ಹಸ್ತಮಳೆಯ ರಾತ್ರಿ’ ಕಥಾ ಸಂಕಲನದಲ್ಲಿ ಬರುವ ಕಥೆಗಳನ್ನು ಓದಿ ಆಸ್ವಾದಿಸಿದರೆ ಅದರ ಹಿತ ಅನುಭವ ಓದುಗರಿಗೆ ಸಿಗುತ್ತದೆ.
ಕನ್ನಡಪ್ರಭ ವಾರ್ತೆ ಕೋಲಾರ
ಓದುವ ಹವ್ಯಾಸವನ್ನು ವಿದ್ಯಾರ್ಥಿಗಳು ರೂಢಿಸಿಕೊಂಡು ಸಾಹಿತ್ಯದ ವ್ಯಾಪ್ತಿಯನ್ನು ವಿಸ್ತರಿಸಬೇಕು. ಪುಸ್ತಕ ಬರೆಯುವುದು, ಪ್ರಕಟಿಸುವುದು ಸುಲಭದ ಕೆಲಸವಲ್ಲ, ಬರಹಗಾರರಿಗೆ ನಾವು ಪುಸ್ತಕ ಕೊಂಡು ಓದುವುದರ ಮೂಲಕ ಉತ್ತೇಜನ ನೀಡಿದರೆ ಅದು ನಮ್ಮ ಸಾಹಿತ್ಯಕ್ಕೆ ನೀಡುವ ದೊಡ್ಡ ಕೊಡುಗೆ ಎಂದು ಕಸಾಪ ನಿಕಟ ಪೂರ್ವ ಅಧ್ಯಕ್ಷ ನಾಗಾನಂದ ಕೆಂಪರಾಜ್ ಹೇಳಿದರು.ನಗರದ ಆದರ್ಶ ಕಾಲೇಜಿನಲ್ಲಿ ರವೀಂದ್ರ ಸಿಂಗ್ ಬರೆದ ‘ಹಸ್ತ ಮಳೆಯ ರಾತ್ರಿ’ ಕೃತಿ ಬಿಡುಗಡೆ ಮಾಡಿ ಮಾತನಾಡಿ, ರವೀಂದ್ರ ಸಿಂಗ್ರ ಈ ಕೃತಿ ವಾಚಕರ ಮನ ಮುಟ್ಟುವುದಂತೂ ನಿಜ, ಸಹಜವಾದ ಭಾಷೆಯಿಂದ ಪುಸ್ತಕ ಸೆಳೆಯುತ್ತದೆ. ಕೋಲಾರದ ಸೀಮೆಯ ಜನರ ಬದುಕನ್ನು ಕಥೆಯಾಗಿಸಿ ಇದರಲ್ಲಿ ದಾಖಲಿಸಿದ್ದಾರೆ. ಸುಮಾರು ಕೃತಿಗಳನ್ನು ಬರೆದಿರುವ ಇವರ ಕೃತಿಗಳ ಪೈಕಿ ಈ ಕೃತಿಯೂ ಉತ್ತಮವೆಂದು ಹೇಳಿದರು.
ಕೋಲಾರ ಪತ್ರಿಕೆಯ ಸಂಪಾದಕ ಸುಹಾಸ್ ಪ್ರಹ್ಲಾದರಾವ್ ಮಾತನಾಡಿ, ವಿದ್ಯಾರ್ಥಿಗಳು ಜಾಲತಾಣ ವೀಕ್ಷಿಸಿ ಅದರಿಂದ ಕಲಿಯುವುದು ಬೇರೆ, ಪುಸ್ತಕ ಓದಿ ಗ್ರಹಿಸುವ ಕಲೆ ಬೇರೆ, ನಮ್ಮ ಕಲ್ಪನೆ ಯೋಚನೆಗಳು ಆಳ ಅಧ್ಯಯನದಿಂದ ಮಾತ್ರ ದೊರಕುವ ಜ್ಞಾನವೇ ಬೇರೆ, ರವೀಂದ್ರಸಿಂಗ್ರ ‘ಹಸ್ತಮಳೆಯ ರಾತ್ರಿ’ ಕಥಾ ಸಂಕಲನದಲ್ಲಿ ಬರುವ ಕಥೆಗಳನ್ನು ಓದಿ ಆಸ್ವಾದಿಸಿದರೆ ಅದರ ಹಿತ ಅನುಭವ ಓದುಗರಿಗೆ ಸಿಗುತ್ತದೆ ಎಂದು ಹೇಳಿದರು.ಆದರ್ಶ ಕಾಲೇಜಿನ ಪ್ರಾಂಶುಪಾಲ ಬಿ.ಎಚ್.ನವೀನ್ಕುಮಾರ್, ಪರ್ವತ್ ಸ್ಫೋರ್ಟ್ಸ್ ಆನಂದ್, ಲೇಖಕ ಆರ್.ಶಂಕರಪ್ಪ, ಮುಖಂಡರಾದ ರಾಮ್ಪ್ರಸಾದ್, ಎಚ್.ಗೌರಿನಾಯ್ಡು, ಮಂಗಳಾ ಗೌಡ, ಆ.ಕೃ.ಸೋಮಶೇಖರ್, ಲಕ್ಷ್ಮಣ್ ಇದ್ದರು.
ಉಪನ್ಯಾಸಕ ಹರೀಶ್ ನಿರೂಪಿಸಿ, ಕೀರ್ತನ ರಚನಾಕಾರ ಕೆ.ಸೋಮಶೇಖರ್ ಪ್ರಾರ್ಥಿಸಿದರು, ಸಾಹಿತಿ ಶರಣಪ್ಪ ಗಬ್ಬೂರು ಸ್ವಾಗತಿಸಿ, ಛಾಯಲಕ್ಷ್ಮೀ ವಂದಿಸಿದರು.