ಯಡ್ರಾಮಿ: ಕುಡಿವ ನೀರಿಗೆ ಪರದಾಟ

| Published : Jan 29 2024, 01:30 AM IST

ಸಾರಾಂಶ

ಸುಮಾರು ಒಂದು ಸಾವಿರ ಜನಸಂಖ್ಯೆ ಇರುವ ಅಖಂಡಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿಲ್ಲ. ಬಾವಿ ಇದ್ದರೂ ಬಾವಿ ಸ್ವಚ್ಛಗೊಳಿಸುವ ಕೆಲಸ ಅಲ್ಲಿನ ಗ್ರಾಪಂ ಅಧಿಕಾರಿಗಳು ಮಾಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಯಡ್ರಾಮಿ

ಸಗರನಾಡು ಯಡ್ರಾಮಿ ತಾಲೂಕಿನಲ್ಲಿ ಕುಡಿವ ನೀರಿಗೆ ಹಾಹಾಕಾರ ಶುರುವಾಗಿದೆ. ತಾಲೂಕಿನ ಸುಂಬಡ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಅಖಂಡಹಳ್ಳಿ ಗ್ರಾಮದಲ್ಲಿ ಕುಡಿವ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಸುಮಾರು ಒಂದು ಸಾವಿರ ಜನಸಂಖ್ಯೆ ಇರುವ ಅಖಂಡಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿಲ್ಲ. ಬಾವಿ ಇದ್ದರೂ ಬಾವಿ ಸ್ವಚ್ಛಗೊಳಿಸುವ ಕೆಲಸ ಅಲ್ಲಿನ ಗ್ರಾಪಂ ಅಧಿಕಾರಿಗಳು ಮಾಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಖಂಡಹಳ್ಳಿ ಗ್ರಾಮದಲ್ಲಿ ಬಾವಿ ಸ್ವಚ್ಛಗೊಳಿಸದರಿಂದ ನೀರು ಮಲೀನವಾಗಿದೆ. ಕುಡಿಯಲು ಮತ್ತು ಇತರೆ ಬಳಕೆಗೂ ಕೂಡ ನೀರು ಯೋಗ್ಯವಾಗಿಲ್ಲ. ಅಂತಹ ನೀರನ್ನು ದಿನಬಳಕೆಗಾಗಿ ಉಪಯೋಗ ಮಾಡುತ್ತಿದ್ದು, ಸ್ನಾನ ಮಾಡಿದರೆ ಮೈಯೆಲ್ಲ ತುರಿಕೆಯಾಗುತ್ತಿದೆ.

ರಾಜ್ಯ ಸರ್ಕಾರ ಕುಡಿಯುವ ನೀರಿಗಾಗಿ ಲಕ್ಷಗಟ್ಟಲೆ ಹಣ ಬಿಡುಗಡೆಯಾಗಿದ್ದರೂ. ಗ್ರಾಪಂ ಪಿಡಿಓ ಮತ್ತು ಅಧ್ಯಕ್ಷರು ಹೆಸರಿಗೆ ಒಂದು ತಿಂಗಳ ಕುಡಿವ ನೀರಿಗಾಗಿ ಟ್ಯಾಂಕರ್ ವ್ಯವಸ್ಥೆ ಮಾಡಿ ಕೈ ತೊಳೆದುಕೊಂಡಿದ್ದಾರೆ ಎಂದು ಅಖಂಡಹಳ್ಳಿ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳು ಹಾಗೂ ಶಾಸಕರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎನ್ನುತ್ತಿದ್ದಾರೆ.

ಲಕ್ಷಾಂತರ ರುಪಾಯಿ ಖರ್ಚು ಮಾಡಿ ಬಾವಿ ನಿರ್ಮಿಸಿದ್ದಾರೆ. ಆದರೆ ಅದರಲ್ಲಿ ಒಂದು ಹನಿ ಕುಡಿಯುವ ನೀರು ಬಂದಿಲ್ಲ. ಆದರೆ ಬಿಲ್ಲು ಮಾತ್ರ ಎತ್ತಿಕೊಂಡಿರುವುದಾಗಿ ಗ್ರಾಮಸ್ಥರಾದ ಬಾಬು ಮಕಾಶಿ, ಸಿದ್ದಪ್ಪ ದೇವರಮನಿ ಆರೋಪಿಸಿದ್ದಾರೆ.

ಈ ವೇಳೆ ಲಕ್ಕವ್ವ ಪೂಜಾರಿ, ಈರಮ್ಮ ಮಾದರ, ಸಾಬವ್ವ ಮಾಗಣಗೇರಿ, ನಿಂಗಮ್ಮ ಮಾದರ, ಸಿದ್ದಪ್ಪ ಅಲ್ಲಾಪುರ್, ದ್ಯಾವಪ್ಪ ಪೂಜಾರಿ, ಲಕ್ಷ್ಮಣ್ ಚಲವಾದಿ, ಅಲ್ಲಿ ಸಾಬ್ ಮಕಾಶಿ, ಮಲ್ಕಪ್ಪ ಮಾಗಣಗೇರಿ, ಹುಸೇನ್ ಸಾಬ್ ದೇಸುನಗಿ ಇದ್ದರು.