ಸಾರಾಂಶ
ಕಟೀಲು ಸಮೀಪದ ಅಜಾರಿನಲ್ಲಿ ಯಕ್ಷದ್ರುವ ಪಟ್ಲ ಫೌಂಡೇಶನ್ ನ ಯಕ್ಷಾಶ್ರಯ ಯೋಜನೆಯ ಸಹಕಾರದಲ್ಲಿ ನಿರ್ಮಿಸಿರುವ ಮನೆಯ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭವಾರ್ತೆ ಮೂಲ್ಕಿ
ಯಕ್ಷ ಧ್ರುವ ಪಟ್ಲ ಫೌಂಡೇಶನ್ ಮೂಲಕ ಪಟ್ಲ ಸತೀಶ್ ಶೆಟ್ಟಿಯವರು ನೂರಾರು ಕಲಾವಿದರಿಗೆ ಸಹಾಯ ಹಸ್ತ ನೀಡುತ್ತಿರುವುದು ಅಭಿನಂದನೀಯ, ಪಡ್ರೆ ಕುಮಾರನಂತಹ ಯೋಗ್ಯ ವ್ಯಕ್ತಿಗೆ ಪಟ್ಲರವರು ಮನೆ ನಿರ್ಮಾಣ ಮಾಡಿರುವುದು ಖುಷಿ ನೀಡಿದೆ, ಪಡ್ರೆ ಕುಮಾರರನ್ನು ನಾನು ಬಾಲ್ಯದಿಂದಲೇ ಕಂಡಿದ್ದೇನೆ, ಕಲಾವಿದನಾಗಿ, ಸಹಾಯಕನಾಗಿಯೂ ಕೆಲಸ ಮಾಡಲು ಸಿದ್ದರಿರುವ ಏಕೈಕ ಕಲಾವಿದರೆಂದು ಕಟೀಲು ದೇವಳದ ಪ್ರಧಾನ ಅರ್ಚಕ ವೆಂಕಟರಮಣ ಆಸ್ರಣ್ಣ ಹೇಳಿದರು.ಕಟೀಲು ಸಮೀಪದ ಅಜಾರಿನಲ್ಲಿ ಯಕ್ಷದ್ರುವ ಪಟ್ಲ ಫೌಂಡೇಶನ್ ನ ಯಕ್ಷಾಶ್ರಯ ಯೋಜನೆಯ ಸಹಕಾರದಲ್ಲಿ ನಿರ್ಮಿಸಿರುವ ಮನೆಯ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಯಕ್ಷ ದ್ರುವ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, ಪಡ್ರೆ ಕುಮಾರ ಅವರು ಕಳೆದ ಹಲವು ವರ್ಷಗಳಿಂದ ಕಟೀಲು ಮೇಳದ ಕಲಾವಿದರಾಗಿದ್ದು, ಸೌಮ್ಯ ಸ್ವಭಾವದ ಕಲಾವಿದರಾಗಿದ್ದನ್ನು ಕಂಡಿದ್ದೇನೆ, ಫೌಂಡೇಶನ್ ವತಿಯಿಂದ ಇದೀಗ 34ನೇ ಮನೆ ಹಸ್ತಾಂತರವಾಗುತ್ತಿದ್ದು, ಇನ್ನೂ 23 ಮನೆಯ ಕೆಲಸ ಕಾರ್ಯಗಳು ಮುಂದುವರಿಯುತ್ತಿದೆ, ಇದುವರೆಗೆ ಕಲಾವಿದರಿಗಾಗಿ ಸುಮಾರು 15 ಕೋಟಿ ರು. ವ್ಯಯಿಸಿದ್ದು, ಮುಂದಿನ ಜೂನ್ ತಿಂಗಳಲ್ಲಿ ಫೌಂಡೇಶನ್ 10 ನೇ ವರ್ಷಾಚರಣೆಯನ್ನು ಆಚರಿಸುತ್ತಿದ್ದು ಈ ಸಂದರ್ಭದಲ್ಲಿ ಅನೇಕ ಯೋಜನೆ, ಯೋಚನೆಗಳನ್ನು ಕೈಗೆತ್ತಿಕೊಳ್ಳಲಿದ್ದೇವೆ ಎಂದು ತಿಳಿಸಿದರು.ಈ ಸಂದರ್ಭ ದಾನಿಗಳಾದ ವೇಣು ಗೋಪಾಲ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಪಡ್ರೆ ಕುಮಾರ ದಂಪತಿಗಳಿಗೆ ಮನೆಯನ್ನು ಹಸ್ತಾಂತರಿಸಿ, ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕೋಶಾಧಿಕಾರಿ ಸಿ.ಎ ಸುದೇಶ್ ರೈ, ಟ್ರಸ್ಟಿಗಳಾದ ದಿವಾಕರ ರಾವ್ ಸಿತ್ಲ, ಸಂಸ್ಥೆಯ ಜೊತೆ ಕಾರ್ಯದರ್ಶಿ ರವಿಚಂದ್ರ ಶೆಟ್ಟಿ, ಅಶೋಕ್, ನಗರ ಸಂಘಟನಾ ಕಾರ್ಯದರ್ಶಿ ಪ್ರದೀಪ್ ಅಳ್ವ, ಎಕ್ಕಾರು ಕಟೀಲು ಘಟಕದ ಅಧ್ಯಕ್ಷ ಗಿರೀಶ್ ಶೆಟ್ಟಿ ಕಟೀಲು ಮತ್ತಿತರರು ಉಪಸ್ಥಿತರಿದ್ದರು. ನಿತೇಶ್ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು. ಮುರಳೀಧರ ಉಪಾಧ್ಯಾಯ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.