ಸಾರಾಂಶ
ಯಕ್ಷಗಾನ ಕಲಾಕೇಂದ್ರದ ಸ್ಥಾಪಕ ಪ್ರಾಚಾರ್ಯ ಎಂ.ನಾರ್ಣಪ್ಪ ಉಪ್ಪೂರರ 40ನೇ ಪುಣ್ಯಸ್ಮರಣೆಯ ಹಿನ್ನೆಲೆ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಐರೋಡಿ ಹಾಗೂ ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಟಾನ ಕೊಂಡದಕುಳಿ ಜಂಟಿಯಾಗಿ ಆಯೋಜಿಸಿದ್ದ ‘ಯಕ್ಷಮುದ್ರಾ’ ಯಕ್ಷಗಾನ ಅಭಿನಯ, ಮುದ್ರೆಗಳ ಕಾರ್ಯಾಗಾರ ನಡೆಯಿತು.
ಕನ್ನಡಪ್ರಭ ವಾರ್ತೆ ಹಂಗಾರಕಟ್ಟೆ
ಭರತ ನಾಟ್ಯದಂತಹ ಕಲೆಗಳಲ್ಲಿ ಪ್ರಾಮುಖ್ಯತೆ ಪಡೆದಿರುವ ಹಸ್ತ ಮುದ್ರೆಗಳನ್ನು ಯಕ್ಷಗಾನದಲ್ಲಿ ಅಳವಡಿಸಿಕೊಂಡಾಗ ಯಕ್ಷಗಾನಕ್ಕೊಂದು ಶೋಭೆ ಬರುತ್ತದೆ. ವಿದ್ಯಾವಂತರು ಇಂದು ಕಲೆ, ಸಂಸ್ಕೃತಿಯತ್ತ ಒಲವು ತೋರಿಸುತ್ತಿರುವಾಗ ಯಕ್ಷಗಾನ ಕಲಾವಿದರು ಈ ಬಗ್ಗೆ ಜಾಗೃತರಾಗಬೇಕು. ಯಕ್ಷಗಾನ ಉಳಿವಿನ ಬಗ್ಗೆ ಕಳೆದ ಐವತ್ತು ವರ್ಷಗಳಿಂದ ಶ್ರಮಿಸುತ್ತಿರುವ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಇವರ ಈ ಪರಿಶ್ರಮ ನಿಜಕ್ಕೂ ಶ್ಲಾಘನೀಯ ಎಂದು ಆನಂದ ಸಿ. ಕುಂದರ್ ಅಭಿಪ್ರಾಯಪಟ್ಟರು.ಕಲಾಕೇಂದ್ರದ ಸ್ಥಾಪಕ ಪ್ರಾಚಾರ್ಯ ಎಂ.ನಾರ್ಣಪ್ಪ ಉಪ್ಪೂರರ 40ನೇ ಪುಣ್ಯಸ್ಮರಣೆಯ ಹಿನ್ನೆಲೆ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಐರೋಡಿ ಹಾಗೂ ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಟಾನ ಕೊಂಡದಕುಳಿ ಜಂಟಿಯಾಗಿ ಆಯೋಜಿಸಿದ್ದ ‘ಯಕ್ಷಮುದ್ರಾ’ ಯಕ್ಷಗಾನ ಅಭಿನಯ, ಮುದ್ರೆಗಳ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ವೇದಿಕೆಯಲ್ಲಿ ಹಿರಿಯ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ, ನಾಟ್ಯ ವಿದುಷಿ ಸುಮಂಗಲಾ ರತ್ನಾಕರ, ಪ್ರಾಚಾರ್ಯ ಸದಾನಂದ ಐತಾಳ, ಉಪ್ಪೂರರ ಪುತ್ರ ದಿನೇಶ ಉಪ್ಪೂರ ಉಪಸ್ಥಿತರಿದ್ದರು.ಕೊಂಡದಕುಳಿ ರಾಮಚಂದ್ರ ಹೆಗಡೆ, ನಾಟ್ಯ ವಿದುಷಿ ಸುಮಂಗಲಾ ರತ್ನಾಕರ ಸಂಪನ್ಮೂಲ ವ್ಯಕ್ತಿಗಳಾಗಿದ್ದು, ಆಮಂತ್ರಿತ 15 ಹಿರಿಯ ಕಲಾವಿದರು ಕಾರ್ಯಾಗಾರದಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಂಡರು.
ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ ಸ್ವಾಗತಿಸಿದರು. ಸದಾನಂದ ಐತಾಳ ಪ್ರಸ್ತಾವನೆಗೈದರು. ಪತ್ರಕರ್ತ ಅಂಬರೀಶ್ ಭಟ್ಟ ಕಾರ್ಯಾಗಾರ ಸಂಯೋಜಿಸಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಬ್ರಹ್ಮಾವರ ಘಟಕ ಅಧ್ಯಕ್ಷ ರಾಮಚಂದ್ರ ಐತಾಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.