ತಾಳಮದ್ದಲೆ, ಖ್ಯಾತ ವೈದ್ಯರಿಗೆ ಸನ್ಮಾನ । ಕಲಾಪ್ರೇಕ್ಷಕರಿಗೆ ವಿಶಿಷ್ಟ ಅನುಭವ

ಕನ್ನಡಪ್ರಭ ವಾರ್ತೆ ಯಲ್ಲಾಪುರ

ತಾಲೂಕಿನ ಆನಗೋಡು ಗ್ರಾಪಂ ವ್ಯಾಪ್ತಿಯ ಹಸರಪಾಲಿನ ಯಕ್ಷಸಂಸ್ಕೃತಿ ಪರಿವಾರ ಬೆಳಗ್ಗೆ ೧೦ರಿಂದ ಸಂಜೆ ೧೦ ರವರೆಗೆ ಅಷ್ಟಾವಧಾನ, ತಾಳಮದ್ದಲೆ, ಖ್ಯಾತ ವೈದ್ಯರಿಗೆ ಸನ್ಮಾನ, ಸೇರಿದಂತೆ ಹತ್ತಾರು ಕಾರ್ಯಕ್ರಮ ಆಯೋಜಿಸಿ, ಸಾವಿರಾರು ಜನರಿಗೆ ಕಾರ್ಯಕ್ರಮದ ರಸದೌತಣದ ಜೊತೆಗೆ ಆಲೆಮನೆಯ ಕಬ್ಬಿನ ರಸವನ್ನು ನೀಡಿ, ಕಲಾಪ್ರೇಕ್ಷಕರಿಗೆ ವಿಶಿಷ್ಟ ಅನುಭವ ನೀಡಿದೆ.

ಹೆಣ್ಣುಮಕ್ಕಳಿಗಾಗಿ ಯಕ್ಷಗಾನ ತಾಳಮದ್ದಲೆ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಿ, ಅದರಲ್ಲಿ ಯಕ್ಷಸಂಸ್ಕೃತಿ ಪರಿವಾರದಿಂದ ಧಕ್ಷಯಜ್ಞ, ಮೈತ್ರಿ ತಾಳಮದ್ದಲೆ ಕೂಟದಿಂದ ವಾಲಿಮೋಕ್ಷ, ಮೈತ್ರಿ ತಾಳಮದ್ದಲೆ ತೇಲಂಗಾರದಿಂದ ದ್ರೋಣಶಪಥ, ವಿಶ್ವಂ ವಂಧ್ಯಂ ತಾಳಮದ್ದಲೆ ಜೂಜಿನಬೈಲ್ ದಿಂದ ಸುಧನ್ವ ಮೋಕ್ಷ ಈ ನಾಲ್ಕು ತಂಡಗಳು ಪ್ರತಿಭೆ ಪ್ರದರ್ಶಿದರು. ಪಂಚಮಿ ಮತ್ತು ಪ್ರಣತಿ ಹಸರಪಾಲ, ಅಕ್ಷತಾ ಅರೆಗುಳಿ ತಾಳಮದ್ದಲೆಯ ಸ್ಪರ್ಧಾ ಕಾರ್ಯಕ್ರಮದ ನಿರ್ವಾಹಕರಾಗಿ ಕಾರ್ಯನಿರ್ವಹಿಸಿದರು. ನಂತರ ಹಿರಿಯ ಖ್ಯಾತ ವೈದ್ಯ ಡಾ.ಜಿ.ಪಿ.ಭಟ್ಟ ಕಣ್ಣೀಮನೆ ಇವರನ್ನು ಅಭಿನಂದಿಸಲಾಯಿತು.

ಆಯ್ದ ಹಿರಿಯ ಅನುಭವಿಗಳಾದ ೮ ಜನ ಸಾಧಕರು ಪೃಚ್ಛಕರಾಗಿ ತಮ್ಮ ಪ್ರೌಢಿಮೆ ಪ್ರದರ್ಶಿಸಿದರು. ಧಾರವಾಡದ ದಿವಾಕರ ಹೆಗಡೆ ಅಪ್ರಸ್ತುತ ಪ್ರಸಂಗಿಗಳಾಗಿ, ಅನಂತ ಹೆಗಡೆ ದಂತಳಿಗೆ ಆಶುಕವಿತೆ ಮತ್ತು ಯಕ್ಷಗಾಯನ, ಡಾ.ಮಹೇಶ ಭಟ್ಟ ಇಡಗುಂದಿ ನಿಷೇಧಾಕ್ಷರಿ, ಮಹಾಬಲೇಶ್ವರ ಭಟ್ಟ ಇಟಗಿ ಸಮಸ್ಯಾಪೂರಣ, ನರಸಿಂಹ ಭಟ್ಟ ಕವಡಿಕೆರಿ ದತ್ತಪದಿ, ಸತೀಶ ಹೆಗಡೆ ಯಲ್ಲಾಪುರ ಚಿತ್ರಪದ್ಯ, ಶ್ರೀಧರ ಭಟ್ಟ ಬೆಳಖಂಡ ಸಂಖ್ಯಾಬಂಧ, ಶಂಕರ ಭಾಗ್ವತ ಶಿಸ್ತಮುಡಿ ಮೃದಂಗ ಹೀಗೆ ಅತ್ಯಂತ ಸೊಗಸಾದ ಕಾರ್ಯಕ್ರಮವನ್ನು ಮೂರೂವರೆ ಗಂಟೆಗಳ ಕಾಲ ನೀಡಿ, ಅಭಿನಂದನೆಗೆ ಪಾತ್ರರಾದರು.


ಹಸರಪಾಲಿನ ಸಂಘಟಕರಾದ ವಿಶ್ವೇಶ್ವರ ಭಟ್ಟ ಸ್ವಾಗತಿಸಿದರು. ಕಾರ್ಯಕ್ರಮದ ಆಯೋಜಕ ಮಹೇಶ ಭಟ್ಟ ನಿರ್ವಹಿಸಿ, ವಂದಿಸಿದರು.