ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಕೇಂದ್ರ ಸರ್ಕಾರದ ಸಾಮಾಜಿಕ ಬದ್ಧತೆಯ ಪ್ರಮುಖ ಯೋಜನೆಯಾದ ಖಾಸಗಿ ರಂಗದ ಕಾರ್ಮಿಕರಿಗೆ/ಉದ್ಯೋಗಿಗಳಿಗೆ ಇಎಸ್ಐ ಸೌಲಭ್ಯದ ವೇತನ ಮಿತಿಯನ್ನು 30,000 ರು. ಗಳಿಗೆ ಏರಿಕೆ ಮಾಡುವಂತೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಕೇಂದ್ರ ಸರ್ಕಾರದ ಕಾರ್ಮಿಕ ಹಾಗೂ ಉದ್ಯೋಗ ಇಲಾಖೆಯ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಮನವಿ ಮಾಡಿದರು.ಈ ಹಿಂದೆ ಇದ್ದ 15 ಸಾವಿರ ರು. ಗಳ ವೇತನ ಮಿತಿಯನ್ನು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2016ರ ಡಿ.22ರಂದು 21 ಸಾವಿರ ರು. ಗಳಿಗೆ ಏರಿಕೆ ಮಾಡಿ ದೇಶದ ಕೋಟ್ಯಂತರ ಕಾರ್ಮಿಕರು/ಉದ್ಯೋಗಿಗಳು ಹಾಗೂ ಅವರ ಕುಟುಂಬಕ್ಕೆ ಯೋಜನೆಯ ಮೂಲಕ ಉಚಿತ ವೈದ್ಯಕೀಯ ಸೌಲಭ್ಯ ಒದಗಿಸಿತ್ತು.ಅನಂತರ ಇಎಸ್ಐ ಸೌಲಭ್ಯಕ್ಕೆ ಅರ್ಹ ವೇತನ ಮಿತಿ ಏರಿಕೆಯಾಗದ ಕಾರಣ 21 ಸಾವಿರ ರು. ಮೇಲ್ಪಟ್ಟ ವೇತನ ಶ್ರೇಣಿಯ ಕಾರ್ಮಿಕರು ಯೋಜನೆಯಿಂದ ವಂಚಿತರಾಗುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಖಾಸಗಿ ಕ್ಷೇತ್ರದಲ್ಲಿ ನೀಡಲಾಗುವ ವಾರ್ಷಿಕ ಭಡ್ತಿ, ಬೆಲೆ ಏರಿಕೆ ಭತ್ಯೆಗೆ ಅನುಗುಣವಾಗಿ ವೇತನ ಏರಿಕೆಯಾಗುತ್ತಿರುವುದರಿಂದ ಕೇಂದ್ರ ಸರ್ಕಾರ ಪ್ರಸ್ತುತ ಇರುವ 21 ಸಾವಿರ ರು. ಗಳ ವೇತನ ಮಿತಿಯನ್ನು 30 ಸಾವಿರ ರು. ಗಳಿಗೆ ಏರಿಕೆ ಮಾಡಿದರೆ ಕಾರ್ಮಿಕ ವರ್ಗಕ್ಕೆ ಅನುಕೂಲ ಕಲ್ಪಿಸಿದಂತಾಗುತ್ತದೆ ಎಂದು ಯಶ್ಪಾಲ್ ಸಚಿವರಿಗೆ ಮನವಿ ಮಾಡಿದರು.ಮನವಿಗೆ ಪೂರಕವಾಗಿ ಸ್ಪಂದಿಸಿದ ಸಚಿವೆ ಶೋಭಾ ಕರಂದ್ಲಾಜೆ ಅವರು, ದೇಶದ ಕಾರ್ಮಿಕರ ಹಿತದೃಷ್ಟಿಯಿಂದ ಯೋಜನೆಯ ವೇತನ ಮಿತಿ ಏರಿಕೆಗೆ ಕ್ರಮ ವಹಿಸುವ ಭರವಸೆ ನೀಡಿದರು.