ಸಾರಾಂಶ
ಕನ್ನಡಪ್ರಭವಾರ್ತೆ ಚಿತ್ರದುರ್ಗಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿದ ಪಿಎಂ ವಿಶ್ವ ಕರ್ಮ ಯೋಜನೆಗೆ ಈಗ ವರ್ಷದ ಹರ್ಷ. ಈ ಸಂಬಂಧ ಚಿತ್ರದುರ್ಗ ನಗರದ ಶಾರದ ಸಭಾ ಭವನದಲ್ಲಿ ಶುಕ್ರವಾರ ವಾರ್ಷಿಕೋತ್ಸವ ಕಾರ್ಯಕ್ರಮ ಆಯೋಜಿಸಿ ಸಂತಸ ವಿನಿಮಯ ಮಾಡಿಕೊಳ್ಳಲಾಯಿತು.ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಸಂಸದ ಗೋವಿಂದ ಕಾರಜೋಳ, ದೇಶದಲ್ಲಿ ಪಿಎಂ ವಿಶ್ವಕರ್ಮ ಯೋಜನೆಯಡಿ 20 ಲಕ್ಷಕ್ಕೂ ಹೆಚ್ಚು ಕುಶಲಕರ್ಮಿಗಳು ನೊಂದಣಿ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರ ₹1400 ಕೋಟಿಗೂ ಹೆಚ್ಚು ಹಣವನ್ನು ಫಲಾನುಭವಿಗಳಿಗೆ ಸಬ್ಸಿಡಿ ರೂಪದಲ್ಲಿ ಬಿಡುಗಡೆ ಮಾಡಿದೆ ಎಂದರು.
ಪಿಎಂ ವಿಶ್ವಕರ್ಮ ಯೋಜನೆ ಜಾರಿಗೆ ಬಂದಾಗಿನಿಂದ ಇಲ್ಲಿಯವರೆಗೂ ಸುಮಾರು 20 ಲಕ್ಷಕ್ಕೂ ಹೆಚ್ಚು ಕುಶಲಕರ್ಮಿಗಳು ನೋಂದಣಿ ಮಾಡಿಕೊಂಡಿದ್ದು, 8 ಲಕ್ಷ ಕುಶಲಕರ್ಮಿಗಳು ಉನ್ನತ ತರಬೇತಿ ಪಡೆದಿದ್ದಾರೆ. ಈಗಾಗಲೇ 1.60 ಲಕ್ಷಕ್ಕೂ ಹೆಚ್ಚು ಜನರು ಇದರ ಲಾಭ ಪಡೆದಿದ್ದಾರೆ. ಕುಶಲಕರ್ಮಿಗಳಿಗೆ ₹15 ಸಾವಿರ ಟೂಲ್ ಕಿಟ್ ಪ್ರೋತ್ಸಾಹವನ್ನು ಮನೆ ಬಾಗಿಲಿಗೆ ಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.ಪ್ರಧಾನಿ ನರೇಂದ್ರ ಮೋದಿಯವರ ಸಾಮಾಜಿಕ ಕಳಕಳಿ ಮತ್ತು ಕಾಳಜಿಯಿಂದ ದೇಶದ 18 ವಿವಿಧ ಕ್ಷೇತ್ರಗಳ ಅಡಿಯಲ್ಲಿ ಕುಲದ ಕಸುಬು ನಂಬಿ ಜೀವನ ನಡೆಸುತ್ತಿರುವ ವರ್ಗದವರಿಗೆ ಆರ್ಥಿಕ ನೆರವು, ಸ್ವಯಂ ಉದ್ಯೋಗ, ವ್ಯಾಪಾರ ವಹಿವಾಟು ಸೌಲಭ್ಯ ಕಲ್ಪಿಸಲು ಕಳೆದ ವರ್ಷ ಸೆ.17ರಂದು ₹13 ಸಾವಿರ ಕೋಟಿ ವೆಚ್ಚದಲ್ಲಿ ಪಿಎಂ ವಿಶ್ವಕರ್ಮ ಯೋಜನೆ ಅನುಷ್ಠಾನಗೊಳಿಸಿದರು ಎಂದರು.ಪಿಎಂ ವಿಶ್ವಕರ್ಮ ಯೋಜನೆಯಡಿಯಲ್ಲಿ ಬಡಿಗೆ ವೃತ್ತಿ ಮಾಡುವವರು, ದೋಣಿ ತಯಾರಿಸುವವರು, ಕಮ್ಮಾರ ವೃತ್ತಿ , ಕಲ್ಲು ಕುಟಿಗ ವೃತ್ತಿ, ಟೈಲರಿಂಗ್, ಚಾಪೆ-ಕಸ ಪೊರಕೆ ತಯಾರಕರು, ಗೊಂಬೆ ಮತ್ತು ಆಟಿಕೆ ತಯಾರಕರು, ಕ್ಷೌರಿಕ ವೃತ್ತಿ ಮಾಡುವವರು, ಸುತ್ತಿಗೆ ಮತ್ತು ಉಪಕರಣಗಳನ್ನು ತಯಾರಿಸುವವರು, ಹೂಮಾಲೆ ತಯಾರಕರು, ದೋಬಿ, ಅಭರಣ ತಯಾರಕರು, ಕುಂಬಾರ ವೃತ್ತಿ ಮಾಡುವವರು, ಮೀನು ಬಲೆ ಹೆಣೆಯುವವರು, ಶಿಲ್ಪಿ, ಚಮ್ಮಾರ, ಪಾದರಕ್ಷೆ ತಯಾರಕರು, ಬೀಗ ತಯಾರಿಕಾ ಕುಶಲಕರ್ಮಿಗಳು ಸೇರಿದಂತೆ ಹೀಗೆ 18 ಬಗೆಯ ಕುಲಕಸುಬು ನಂಬಿ ಜೀವನ ನಡೆಸುವ ವಿಶ್ವಕರ್ಮ ಪಾಲುದಾರರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದರು.
ಈ ಕುಶಲಕರ್ಮಿಗಳಿಗೆ ವಿಶೇಷ ಯೋಜನೆ ಜಾರಿಗೆ ತರುವ ಮೂಲಕ ₹3 ಲಕ್ಷದವರೆಗೂ ಸಾಲ ಕೊಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಅದಲ್ಲದೇ 30 ತಿಂಗಳ ಅವಧಿಯೊಳಗೆ ಅತೀ ಕಡಿಮೆ ಶೇ.5 ಬಡ್ಡಿದರಲ್ಲಿ ಸಾಲ ಮರುಪಾವತಿಗೂ ಅವಕಾಶ ನೀಡಲಾಗಿದೆ. ಕೇಂದ್ರ ಸರ್ಕಾರ ಶೇ.8ರಷ್ಟು ಬಡ್ಡಿ ಸಬ್ಸಿಡಿ ತುಂಬಲಿದೆ ಎಂದರು.ಸರ್ಕಾರದ ಅಂಗಸಂಸ್ಥೆಯಾದ ನಕಾಫ್ ಸಂಸ್ಥೆಯ ತರಬೇತಿ ವ್ಯವಸ್ಥಾಪಕ ಉಮಾಕಾಂತ್ ಮನ್ನಾಳೆ ಮಾತನಾಡಿ, ಚಿತ್ರದುರ್ಗ ನಗರದ ಅಮ್ಮ ಪಬ್ಲಿಕ್ ಶಾಲೆಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಮಾಲಾಕಾರ್, ಬಾಸ್ಕೆಟ್ ಮೇಕರ್, ದೋಬಿ ಸೇರಿದಂತೆ ವಿವಿಧ ಬಗೆಯ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ತರಬೇತಿ ಕೋರ್ಸ್ ನಡೆಯುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 700 ಜನರಿಗೆ ತರಬೇತಿ ನೀಡಲಾಗಿದ್ದು, ಎಲ್ಲರಿಗೂ ಶಿಷ್ಯವೇತನ ಹಾಗೂ ಟೂಲ್ ಕಿಟ್ ವಿತರಣೆ ಹಾಗೂ ಸಾಲ-ಸೌಲಭ್ಯಕ್ಕೂ ಕ್ರಮವಹಿಸಲಾಗಿದೆ ಎಂದು ಹೇಳಿದರು.ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ವೇವಣ್ಣ ಸೇರಿದಂತೆ ವಿಶ್ವಕರ್ಮ ಯೋಜನೆಯ ಫಲಾನುಭವಿಗಳು ಇದ್ದರು.