ಸಾರಾಂಶ
ಪ್ರತಿಯೊಬ್ಬರೂ ಯೋಗ ಮಾಡಿ, ರೋಗಗಳಿಂದ ಮುಕ್ತರಾಗಲು ಪ್ರಯತ್ನಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಡಿ.ಕೆ. ವೇಲಾ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ದಾವಣಗೆರೆ ಪ್ರತಿಯೊಬ್ಬರೂ ಯೋಗ ಮಾಡಿ, ರೋಗಗಳಿಂದ ಮುಕ್ತರಾಗಲು ಪ್ರಯತ್ನಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಡಿ.ಕೆ. ವೇಲಾ ಹೇಳಿದರು.
ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಶನಿವಾರ 11ನೇ ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯೋಗವು ಭಾರತದ ಇತಿಹಾಸದಿಂದ ಬಂದಿದ್ದರೂ ಇಂದು ವಿಶ್ವಮಾನ್ಯತೆ ಗಳಿಸಿದೆ. ಯೋಗ ಮಾಡುವುದರಿಂದ ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯ ಸುಧಾರಿಸುತ್ತದೆ. ಅದೇ ರೀತಿ ಪ್ರತಿಯೊಬ್ಬರು ತಮ್ಮ ಜೀವನಶೈಲಿಯಲ್ಲಿ ಯೋಗ ಮತ್ತು ಪ್ರಾಣಾಯಾಮ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ಮಾತನಾಡಿ, ಯೋಗವು ಜೀವನದ ಒಂದು ಭಾಗವಾಗಬೇಕು. ಪ್ರತಿದಿನ ಕನಿಷ್ಠ 1 ಗಂಟೆಯಾದರೂ ಎಲ್ಲರೂ ಯೋಗಭ್ಯಾಸ ಮಾಡಬೇಕು. ಯೋಗ ಮಾಡುವುದರಿಂದ ಸಮಯ ವ್ಯರ್ಥವಾಗುತ್ತದೆ ಎಂದರೆ ಅದು ತಪ್ಪು ತಿಳಿವಳಿಕೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಗೀಳಿಗೆ ಶರಣಾಗಿ ತಮ್ಮ ವೈಯಕ್ತಿಕ ಜೀವನದ ಕಡೆಗೆ ಗಮನಹರಿಸುತ್ತಿಲ್ಲ. ಯೋಗ ಅಭ್ಯಾಸ ಮಾಡುವುದು ಮತ್ತು ವ್ಯವಸ್ಥಿತ ಆಹಾರ ಜೀವನ ಕ್ರಮವಾಗಬೇಕೆಂದು ತಿಳಿಸಿದರು.
ಯೋಗ ಗುರುಗಳಾದ ಮಂಜುನಾಥ ಮತ್ತು ಗೀತಾ ಹಾಗೂ ತಂಡದವರು ಯೋಗಭ್ಯಾಸ ಕಲಿಸಿಕೊಟ್ಟರು. ನ್ಯಾಯಾಧೀಶ ಮಂಜಪ್ಪ ಅಣ್ಣಯ್ಯ, ಶ್ರೀರಾಮ ಹೆಗಡೆ, ಶಿವಪ್ಪ ಸಲಗರೆ, ಇತರೆ ನ್ಯಾಯಾಧೀಶರು, ಯುಬಿಡಿಟಿ ಕಾಲೇಜಿನ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.- - -
-21ಕೆಡಿವಿಜಿ31: ದಾವಣಗೆರೆ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ವಿಶ್ವ ಯೋಗ ದಿನ ಕಾರ್ಯಕ್ರಮವನ್ನು ನ್ಯಾಯಾಧೀಶೆ ಡಿ.ಕೆ.ವೇಲಾ ಉದ್ಘಾಟಿಸಿದರು.