ನಿವೃತ್ತಿ ನಂತರ ಯೋಗ ವೃತ್ತಿ!

| Published : Jun 21 2025, 12:49 AM IST

ಸಾರಾಂಶ

ಸಾವಿರಾರು ಜನರಿಗೆ ಹಾಗೂ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಯೋಗಾಸನಗಳನ್ನು ಕಲಿಸಿ ಗಮನ ಸೆಳೆದವರು ಪಟ್ಟಣದ ಯೋಗಗುರು ಎಂದೇ ಖ್ಯಾತಿ ಪಡೆದ ಎಸ್.ಕೆ.ಹೊಳೆಪ್ಪನವರು.

ಅಣ್ಣಾಸಾಬ ತೆಲಸಂಗ

ಕನ್ನಡಪ್ರಭ ವಾರ್ತೆ ಅಥಣಿ

ಸಾವಿರಾರು ಜನರಿಗೆ ಹಾಗೂ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಯೋಗಾಸನಗಳನ್ನು ಕಲಿಸಿ ಗಮನ ಸೆಳೆದವರು ಪಟ್ಟಣದ ಯೋಗಗುರು ಎಂದೇ ಖ್ಯಾತಿ ಪಡೆದ ಎಸ್.ಕೆ.ಹೊಳೆಪ್ಪನವರು.

ಆರೋಗ್ಯ ಇಲಾಖೆಯಲ್ಲಿ 34 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ನಂತರ ಆರೋಗ್ಯದ ಹಿತ ದೃಷ್ಟಿಯಿಂದ ಅಥಣಿಯ ಪ್ರಖ್ಯಾತ ಯೋಗಪಟು ಎ.ಬಿ.ಪಾಟೀಲ ಅವರ ಹತ್ತಿರ ಯೋಗಾಸನ ಶಿಬಿರಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಯೋಗ ಶಿಬಿರದಲ್ಲಿ ಪಾಲ್ಗೊಂಡ ಅನುಭವ ಮತ್ತು ಆಸನಗಳನ್ನು ಇನ್ನೊಬ್ಬರಿಗೆ ಹೇಳುವ ಮೂಲಕ ಯೋಗದ ಮಹತ್ವವನ್ನು ಜನಸಾಮಾನ್ಯರಿಗೆ ತಿಳಿಸುತ್ತಿದ್ದರು. ನಂತರದ ದಿನಗಳಲ್ಲಿ ಹರಿದ್ವಾರದ ಯೋಗ ಪತಂಜಲಿ ಪೀಠದ ಸಂಪರ್ಕಕ್ಕೆ ಬಂದು ವಿಶೇಷ ತರಬೇತಿ ಮತ್ತು ಹೆಚ್ಚಿನ ಜ್ಞಾನ ಪಡೆದುಕೊಳ್ಳುವ ಮೂಲಕ ಯೋಗಾಭ್ಯಾಸವನ್ನು ಬದುಕಿನಲ್ಲಿ ರೂಢಿಸಿಕೊಂಡರು. ತಾಲೂಕಿನಲ್ಲಿ ಕಳೆದ ಹತ್ತು, ಹನ್ನೆರಡು ವರ್ಷಗಳಿಂದ ಪತಂಜಲಿ ಯೋಗ ಹರಿದ್ವಾರ ಪೀಠದ ಮುಖ್ಯ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಅವರು ಅಥಣಿ ವಲಯಕ್ಕೆ ಮಾತ್ರ ಸೀಮಿತವಾಗದೇ ರಾಜ್ಯದ ವಿವಿಧೆಡೆ ಯೋಗ ಶಿಬಿರಗಳಲ್ಲಿ ತರಬೇತಿ ನೀಡಿದ್ದಾರೆ. ನಿಯಮಿತ ಯೋಗಾಭ್ಯಾಸ ಮಾಡುವುದರಿಂದ ಇರುವ ಪ್ರಯೋಜನಗಳ ಜಾಗೃತಿ ಮೂಡಿಸುತ್ತಿದ್ದಾರೆ. ಇಲ್ಲಿ ಪ್ರತಿ ವರ್ಷವೂ ಆಸಕ್ತರಿಗೆ ಒಂದು ತಿಂಗಳವರೆಗೆ ಉಚಿತವಾಗಿ ತರಬೇತಿ ಕೊಡುತ್ತಿರುವುದು ವಿಶೇಷ. 2016ರಲ್ಲಿ ಯೋಗ ಗುರು ಬಾಬಾ ರಾಮದೇವ್ ಅವರಿಂದ ಹರಿದ್ವಾರದಲ್ಲಿ ವಿಶೇಷ ತರಬೇತಿ ಪಡೆದಿರುವ ಅವರು, ಮೈಸೂರು, ಮಂಡ್ಯ, ಮುಂಡಗೋಡ, ವಿಜಯಪುರ, ಧರ್ಮಸ್ಥಳ, ಚನ್ನಪಟ್ಟಣ, ಬೆಳಗಾವಿ, ಹುಬ್ಬಳಿ ಮೊದಲಾದ ಕಡೆಗಳಲ್ಲೂ ಕಾರ್ಯಕ್ರಮ ಕೊಟ್ಟಿದ್ದಾರೆ. ಗರ್ಭಿಣಿಯರಿಗೆ ವಿಶೇಷ ಯೋಗ ತರಬೇತಿ, ತಾಲೂಕಿನ ವಿವಿಧ ಶಾಲಾ ಕಾಲೇಜುಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಯೋಗ, ಧ್ಯಾನ ಮತ್ತು ಪ್ರಾಣಾಯಾಮದ ಮಹತ್ವವನ್ನು ತಿಳಿಸುವ ಮೂಲಕ ಯೋಗ ತರಬೇತಿ ನೀಡಿದ್ದಾರೆ.ತಾಲೂಕಿನ ಐನಾಪುರದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ 500 ಮಹಿಳೆಯರಿಗೆ ತರಬೇತಿ ನೀಡಿದ್ದರು. ಇಲ್ಲಿ ಕಳೆದ ವರ್ಷ ಹರಿಹರದ ಪಂಚಮಸಾಲಿ ಪೀಠದ ಅಧ್ಯಕ್ಷ ವಚನಾನಂದ ಶ್ರೀಗಳೊಂದಿಗೆ ಒಂದು ವಾರ ಶಿಬಿರ ನಡೆಸಿದ್ದಾರೆ. ಇವರು ಯೋಗ ಅಭ್ಯಾಸದ ಜೊತೆಗೆ, ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮನ ತೊಡಗಿಸಿಕೊಳ್ಳುವ ಮೂಲಕ ಅನೇಕ ಸಂಘ ಸಂಸ್ಥೆಗಳಿಂದ, ತಾಲೂಕು ಆಡಳಿತದಿಂದ ಪ್ರಶಸ್ತಿ ಮತ್ತು ಗೌರವ ಸನ್ಮಾನಗಳನ್ನು ಪಡೆದುಕೊಂಡಿದ್ದಾರೆ. ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಬಹುದು. ವೈಯಕ್ತಿಕವಾಗಿ ಅದರಿಂದ ಪ್ರಯೋಜನ ಪಡೆದಿದ್ದೇನೆ. ಹೀಗಾಗಿ, ಪತಂಜಲಿ ಯೋಗ ಪೀಠದ ಮೂಲಕ ಸಾರ್ವಜನಿಕರಿಗೆ ಆರಿವು ಮೂಡಿಸುತ್ತಿದ್ದೇನೆ. ಇತ್ತೀಚಿನ ವರ್ಷಗಳಲ್ಲಿ ಜನರು ಯೋಗಾಭ್ಯಾಸದತ್ತ ಒಲವು ತೋರುತ್ತಿರುವುದು ಕಂಡುಬಂದಿದೆ. ಇದು ಒಳ್ಳೆಯ ಬೆಳವಣಿಗೆ, ಯೋಗಾಭ್ಯಾಸವನ್ನು ಜೀವನಶೈಲಿಯನ್ನಾಗಿ ಮಾಡಿಕೊಳ್ಳಬೇಕು.

-ಎಸ್.ಕೆ.ಹೊಳೆಪ್ಪನವರ,

ಯೋಗಗುರು, ಅಥಣಿ.